2A ಮೀಸಲಾತಿ ಘೋಷಿಸಿದರೆ 25 ಲಕ್ಷ ಪಂಚಮಸಾಲಿಗಳಿಂದ ಅಭಿನಂದನೆ.! ಇಲ್ಲದೇ ಹೋದರೆ ವಿರಾಟ್ ಸಮಾವೇಶ.!

ದಾವಣಗೆರೆ: ರಾಜ್ಯದಲ್ಲಿ ಅತಿ ಹೆಚ್ಚು ಇರುವ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಿದರೆ 25 ಲಕ್ಷ ಪಂಚಮಸಾಲಿಗಳಿಂದ ಅಭಿನಂದನಾ ಸಮಾರಂಭವಾಗಲಿದೆ. ಘೋಷಿಸದೇ ಇದ್ದರೆ ವಿರಾಟ್ ಹೋರಾಟದ ಸಮಾವೇಶವಾಗಲಿದೆ, ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ. 12ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದ ವೇಳೆ ಸಿಎಂ ನಮ್ಮ ಜತೆ ಮಾತುಕತೆ ನಡೆಸಿದ್ದರು. ಅಲ್ಲದೇ ಡಿ. 12ರ ಒಳಗೆ 2ಎ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಡಿ.19ರಿಂದ ಬೆಳಗಾವಿ ಅಧಿವೇಶನ ನಡೆಯುತ್ತದೆ. ಅಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ. ಆದ್ದರಿಂದ ನಮಗೆ ಈ ಬಾರಿ 2ಎ ಮೀಸಲಾತಿ ಸಿಗುವ ವಿಶ್ವಾಸ ಇದೆ. ಇಲ್ಲದೇ ಹೋದಲ್ಲಿ ಬೆಳಗಾವಿಯಲ್ಲಿ 25 ಲಕ್ಷ ಪಂಚಮಸಾಲಿಗಳು ಸೇರಿ ವಿರಾಟ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಡಿ.22ರಂದು ಅಭಿನಂದನೆ ಇಲ್ಲವೇ ವಿರಾಟ್ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಲಿಂಗಾಯತದ ಎಲ್ಲ ಸಮುದಾಯಗಳಿಗೆ ಕೇಂದ್ರ ಸರಕಾರವೂ ಒಬಿಸಿ ಸ್ಥಾನಮಾನ ನೀಡಬೇಕು. ರಾಜ್ಯ ಸರ್ಕಾರವು ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಲಿಂಗಾಯತ ಸಮುದಾಯದ 32 ಒಳಪಂಗಡಗಳಿಗೆ ಈಗಾಗಲೇ 2ಎ ಮೀಸಲಾತಿ ಇದೆ. ನಮಗೂ ಕೊಡಿ ಎಂದು ಕೇಳುತ್ತಾ ಬಂದಿದ್ದೇವೆ. ಬೇರೆ ಪಂಗಡಗಳಿಗೆ ಕೊಡಬೇಡಿ ಎನ್ನುವುದು ನಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ಹೋರಾಟ ಯಶಸ್ವಿಯಾಗುವ ಹಂತಕ್ಕೆ ಬಂದಾಗ ಚೂರಿ ಹಾಕುವವರು, ಅದರ ಯಶಸ್ಸಿನ ಪಾಲು ತೆಗೆದುಕೊಳ್ಳಲು ಹವಣಿಸುವವರು ಇದ್ದೇ ಇರುತ್ತಾರೆ. ಪಂಚಮಸಾಲಿ ಸಮುದಾಯದ ಹೋರಾಟವೂ ಅಷ್ಟೇ. ತಾರ್ಕಿಕ ಅಂತ್ಯಕ್ಕೆ ಬಂದಾಗ ಬೇರೆಯವರು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಯಾರು ಹೋರಾಟ ಮಾಡಿದ್ರು ಎಂಬುದು ಜನರಿಗೆ ಗೊತ್ತು. ಜನರಿಗೆ ಒಳ್ಳೆಯದಾದರೆ ಸಾಕು’ ಎಂದು ಹೇಳಿದರು.
ಮೀಸಲಾತಿ ಬಗ್ಗೆ 27 ವರ್ಷಗಳಿಂದ ಬೇಡಿಕೆ, ಬಯಕೆ ಇದೆ. ಆದರೆ ಹೋರಾಟ ಎಂಬ ಮಾತು ಹಿಂದೆ ಇರಲಿಲ್ಲ. 2012ರಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಮೊದಲ ಹೋರಾಟ ನಡೆಯಿತು. 2020ರ ನಂತರ ಮೀಸಲಾತಿ ಹೋರಾಟ ತೀವ್ರಗೊಂಡಿತು. ಮೀಸಲಾತಿ ಬೇಡ ಎಂದು ಹೇಳುವವರ ಬಾಯಲ್ಲಿಯೂ ಈಗ ಮೀಸಲಾತಿ ಬೇಕು ಎಂಬ ಮಾತು ಬರುತ್ತಿದೆ. ಅಷ್ಟು ಬದಲಾವಣೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ನಮ್ಮೆಲ್ಲರ ಸಂಸ್ಥೆ. ಮಹಾಅಧಿವೇಶನಕ್ಕೆ 2011ರಲ್ಲಿಯೂ ಹೋಗಿದ್ದೆ. ಕರೆದರೆ ಈಗಲೂ ಹೋಗುತ್ತೇನೆ ಎಂದು ಶ್ರೀಗಳು ಹೇಳಿದರು.