ದಾವಣಗೆರೆ ಶ್ರೀರಾಮ ರಥಯಾತ್ರೆಯಲ್ಲಿ ಮೃತರಾದವರ ಹೆಸರನ್ನ ಬೆಳ್ಳಿ ಇಟ್ಟಿಗೆಯಲ್ಲಿ ಕೆತ್ತಿಸಿ ಅಯೋಧ್ಯೆಗೆ ರವಾನೆ

ದಾವಣಗೆರೆ : ಅದು 1990ರ ಕಾಲ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲೇಬೇಕೆಂಬ ದೃಢ ನಿರ್ಧಾರದೊಂದಿಗೆ ಬಿಜೆಪಿ ಮುಖಂಡ ಲಾಲಾಕೃಷ್ಣ ಅಡ್ವಾಣಿ ಭಾರತದ್ಯಾಂತ ಶ್ರೀ ರಾಮ ರಥಯಾತ್ರೆ ಆರಂಭಿಸಿದ್ದರು. ಆ ರಥಯಾತ್ರೆ 1990ರ ಅಕ್ಟೋಬರ್ 6ರಂದು ದಾವಣಗೆರೆಗೆ ಬಂದಿತ್ತು. ಈ ವೇಳೆ ನಡೆದ ಗಲಭೆಯಲ್ಲಿ ಗೋಲಿಬಾರ್ ಮಾಡಲಾಗಿತ್ತು. ಆಗ ಈ ಗೋಲಿಬಾರ್ಗೆ 8 ಹಿಂದೂ ಯುವಕರು ಹುತಾತ್ಮರಾಗಿದ್ದರು. ಈಗ ಅವರ ಸ್ಮರಣಾರ್ಥ ಬೆಳ್ಳಿ ಇಟ್ಟಿಗೆಯನ್ನು ಸಿದ್ಧಪಡಿಸಿ, ಅದನ್ನು ರಾಮಮಂದಿರಕ್ಕೆ ಕಳಿಸಿಕೊಡಲಾಗುತ್ತಿದೆ.
ಅಂದು ಜಿಲ್ಲೆಯಲ್ಲಿ ನಡೆದಂತಹ ಅಹಿತಕರ ಘಟನೆ ದೇಶದ ಬೇರಾವ ಭಾಗದಲ್ಲೂ ನಡೆದಿಲ್ಲ. ಆ ದಿನ 8 ಮಂದಿ ಶ್ರೀ ರಾಮ ಸೇವಕರು ಹುತಾತ್ಮರಾಗಿದ್ದರು. ಪ್ರಸ್ತುತ ಈ ಇಟ್ಟಿಗೆ ಮೇಲೆ ಎಂಟು ಮಂದಿ ಹುತಾತ್ಮ ರಾಮಸೇವಕರ ಹೆಸರನ್ನು ಕೆತ್ತಿಸಲಾಗಿದೆ.
2024ರ ಜನವರಿಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಜ.21ರ ನಂತರ ಉಡುಪಿ ಪೇಜಾವರ ಶ್ರೀ ಗಳ ಸಮ್ಮುಖದಲ್ಲಿ ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ, ಇಟ್ಟಿಗೆಯನ್ನು ಶ್ರೀರಾಮನ ಸನ್ನಿಧಿಗೆ ಸಮರ್ಪಣೆ ನಡೆಯಲಿದೆ.
ಅಂತೆಯೇ ಶ್ರೀಗಳು ನಗರದ ಪಿಜೆ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಂಗಳವಾರ ಆಗಮಿಸಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಸಮರ್ಪಣೆಯಾಗಲು ಸಿದ್ಧವಿರುವ 15 ಕೆಜಿ ತೂಕದ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಿದರು.
ಈ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಿದ ಶ್ರೀ ಗಳು ಭಕ್ತರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ರಾಮನ ಭಕ್ತ ಸಮೂಹ ಶುದ್ಧ ಬೆಳ್ಳಿಯಿಂದ ತಯಾರಿಸಿರುವ ಬರೋಬ್ಬರಿ 15 ಕೆಜಿ ತೂಕದ ಇಟ್ಟಿಗೆ ಇದಾಗಿದ್ದು, ಇದರ ಮುಂಭಾಗದಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರ ಮತ್ತು ಶ್ರೀ ರಾಮ ಬಿಲ್ಲು ಹಿಡಿದು ನಿಂತಿರುವ ಚಿತ್ರಗಳಿದ್ದು, ಹಿಂಭಾಗದಲ್ಲಿ 6 ಜನ ಹುತಾತ್ಮರ ಹೆಸರುಗಳಿರುವುದನ್ನು ಶ್ರೀ ಗಳು ವೀಕ್ಷಿಸಿದರು.
ಗೋಲಿಬಾರ್ನಲ್ಲಿ ಪ್ರಾಣ ಕಳೆದುಕೊಂಡಿದ್ದ ಚಂದ್ರಶೇಖರ್ ರಾವ್ ಶಿಂಧೆ, ಶಿವಾಜಿರಾವ್ ಘಾಟ್ಗೆ, ಆರ್.ಜಿ.ಶ್ರೀನಿವಾಸರಾವ್, ರಾಮಕೃಷ್ಣ ಸಾವಳಗಿ, ಎಲೆಬೇತೂರು ದುರುಗಪ್ಪ, ಹಮಾಲಿ ಚಿನ್ನಪ್ಪ, ಎಚ್.ನಾಗರಾಜ್ ಸೇರಿದಂತೆ ಒಟ್ಟು 8 ಜನರ ಹೆಸರುಗಳನ್ನು ಕೆತ್ತಿಸಲಾಗಿದೆ.
ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗಳು, ಇಲ್ಲಿಯ ಭಕ್ತ ಸಮೂಹ ಅತ್ಯಂತ ಬೆಲೆ ಬಾಳುವ ಕಾಣಿಕೆಯನ್ನು ಶ್ರೀ ರಾಮನ ಸನ್ನಿದಾನಕ್ಕೆ ನೀಡುತ್ತಿದ್ದಾರೆ. ಬರುವ ಜನವರಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಈ ಇಟ್ಟಿಗೆಯನ್ನು ಸಮರ್ಪಿಸಿ ಕೊಂಡು ಅಯೋಧ್ಯೆಯ ಶ್ರೀ ರಾಮನ ಸನ್ನಿಧಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.