ಎಸ್ಸೆಸ್ಸೆಂ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಸಹಿಸಲ್ಲ: ಜಾಧವ್‌ಗೆ ಗಡಿಗುಡಾಳ್ ಎಚ್ಚರಿಕೆ

congress bjp talk war (1)

ದಾವಣಗೆರೆ: ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಕೇವಲವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಶವಂತರಾವ್ ಜಾಧವ್ ಗೂ ಕಾಂಗ್ರೆಸ್ ಗೂ ಏನು ಸಂಬಂಧ? ಯಾವಾಗಲೂ ವಿನಾಕಾರಣ ಆರೋಪ ಮಾಡುತ್ತಿರುವ ಯಶವಂತ ರಾವ್ ಜಾಧವ್  ನಗರಕ್ಕೆ ಏನು ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಯಾಕೆ ಬೇಕು? ಅವರದ್ದೇ ಪಕ್ಷದಲ್ಲಿ ನಡೆಯುತ್ತಿರುವ ಶೇಕಡಾ ೪೦ರಷ್ಟು ಕಮೀಷನ್, ಭ್ರಷ್ಟಾಚಾರ, ಕಳಂಕ ಹೊತ್ತವರ ಬಗ್ಗೆ ಮೊದಲು ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಎಲ್ಲೆಂದರಲ್ಲಿ ಗುಂಡಿ ಅಗೆದು ಹಾಗೆ ಬಿಡಲಾಗಿದೆ. ಜನರು ಬಿಜೆಪಿಗೆ ನಿತ್ಯವೂ ಹಿಡಿಶಾಪ ಹಾಕುತ್ತಿದ್ದಾರೆ. ಬಿಜೆಪಿಯವರ ಅಕ್ರಮಗಳಿಂದ ಬೇಸತ್ತು ಹೋಗಿದ್ದಾರೆ. ಜನರಿಗೆ ಬೇಕಿರುವುದು ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ. ಪಾಲಿಕೆಯಲ್ಲಿ ನಡೆಯುತ್ತಿರುವ ಹಗರಣಗಳು ಒಂದೆರಡಲ್ಲ. ದೂಡಾ, ನಗರಸಭಾ ಅಧ್ಯಕ್ಷರಾಗಿದ್ದಾಗ ಯಶವಂತರಾವ್ ಜಾಧವ್ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾಲ್ಕು ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಜಾಧವ್‌ಗೆ ಇನ್ನು ಮುಂದಿಲ್ಲ. ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಮಾತನಾಡುವ ಜಾಧವ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಡುತ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದು, ಏನೇನೋ ಮಾತನಾಡಿಬಿಟ್ಟರೆ ದೊಡ್ಡವರಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ದೊಡ್ಡವರ ಬಗ್ಗೆ ಮಾತನಾಡಿಬಿಟ್ಟರೆ ತಾನು ದೊಡ್ಡವರಾಗಬಹುದು ಎಂಬ ಭ್ರಮೆಯಲ್ಲಿರುವ ಯಶವಂತರಾವ್ ಜಾಧವ್ ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಉತ್ತಮ ರಸ್ತೆಯನ್ನು ಕಿತ್ತು ಮತ್ತೆ ರಸ್ತೆ ಮಾಡಿಸಿದ್ದು ಯಾಕೆ ಎಂಬುದನ್ನ ಯಶವಂತರಾವ್ ಜಾಧವ್, ಅವರ ಮತ್ತು ಅವರ ಪುತ್ರ ಉತ್ತರಿಸಲಿ. ಪಾಲಿಕೆಯ ಕಾಂಗ್ರೆಸ್ ಅನುದಾನ ನೀಡಿಲ್ಲ. ತಮ್ಮ ವಾರ್ಡ್ ಗೆ ಅನುದಾನ ಹಾಕಿಸಿಕೊಂಡಿದ್ದು ಯಾಕೆ ಎಂಬುದು ಜನರ ಪ್ರಶ್ನೆಯಾಗಿದೆ. ಯಾವುದೇ ದುಡಿಮೆ ಇಲ್ಲದೇ, ಚುನಾವಣೆಗಳಲ್ಲಿ ಸೋತರೂ ಇಷ್ಟೊಂದು ಹಣ ಯಶವಂತರಾವ್ ಜಾಧವ್ ಹೇಗೆ ಮಾಡಿದರು ಎಂಬುದನ್ನು ಜನರ ಮುಂದೆ ತೆರೆದಿಡಲಿ ಎಂದು ಸವಾಲು ಹಾಕಿದ್ದಾರೆ.

ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಚಿವರು, ಶಾಸಕರಾಗಿದ್ದಾಗ ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ರಸ್ತೆ, ಕುಂದುವಾಡ ಕೆರೆ, ಗಾಜಿನ ಮನೆ, ಹೈಟೆಕ್ ರಸ್ತೆಗಳು, ಮೂಲಭೂತ ಸೌಕರ್ಯ, ಬಡವರಿಗೆ ನಿವೇಶನ, ಪಿ. ಬಿ. ರಸ್ತೆ ಅಭಿವೃದ್ಧಿ ಸೇರಿದಂತೆ ಹೇಳುತ್ತಾ ಹೋದರೆ ಪಟ್ಟಿಯೇ ಬೆಳೆಯುತ್ತದೆ. ಬಿಜೆಪಿ ಅಧಿಕಾರವಾಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಹೇಳಿಕೊಳ್ಳುವಂಥ ಒಂದೇ ಒಂದು ಯೋಜನೆಗಳು ಜಾರಿಗೆ ಬಂದಿವೆಯಾ? ಸಂಸದ ಜಿ. ಎಂ. ಸಿದ್ದೇಶ್ವರ್ ಅವರ ಜೊತೆ ಅತ್ಯಾಪ್ತರಾಗಿರುವ ಕಾರಣಕ್ಕೆ ಸುಳ್ಳು ಮಾತನಾಡುತ್ತಾ ಹೋದರೆ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ. ಮಲ್ಲಿಕಾರ್ಜುನ್ ರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಸಹ ಅವರ ಧಾಟಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಗಡಿಗುಡಾಳ್ ಮಂಜುನಾಥ್ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!