ಬಿಲ್ಲವ ಬ್ರಿಗೇಡ್ ಸಮಾಜಕ್ಕೆ ಮಾದರಿ ಸಂಘಟನೆ..! ಹೀಗಿದೆ ವರ್ಲ್ಡ್ ಬಿಲ್ಲವ ಪ್ರೀಮಿಯರ್ ಲೀಗ್..

ಉಡುಪಿ: ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಮಂಗಳೂರು ಆಶ್ರಯದಲ್ಲಿ ವರ್ಲ್ಡ್ ಬಿಲ್ಲವ ಪ್ರೀಮಿಯರ್ ಲೀಗ್- 2022 ನಂದಾದೀಪ ಟ್ರೋಫಿ ಉದ್ಘಾಟನೆ ಶನಿವಾರ ಹೆಜಮಾಡಿ ಬಸ್ತಿ ಪಡ್ಪು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನೆರವೇರಿತು.
ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಜಾತಿ, ಮತ ಭೇದವಿಲ್ಲದೆ ಬ್ರಹ್ಮಶ್ರೀ ನಾರಾಯಣಗುರುಗಳ ಆಶಯದಂತೆ ಸಾಮಾಜಿಕ ಚಿಂತನೆಯೊಂದಿಗೆ ಅದೆಷ್ಟೋ ಬಡಜನರ ಸೇವೆ ಮಾಡುತ್ತಿರುವ ಬಿಲ್ಲವ ಬ್ರಿಗೇಡ್ ಸಮಾಜಕ್ಕೆ ಮಾದರಿ ಸಂಘಟನೆ ಎಂದರು. ಬಿಲ್ಲವ ಬ್ರಿಗೇಡ್ ಕೈಗೊಂಡಿರುವ ನಂದಾದೀಪ ವಸತಿ ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಮೊದಲ ಹಂತದಲ್ಲಿ 14 ಮನೆಗಳನ್ನು ನಿರ್ಮಿಸಿ ಕೊಡುವ ಕಾರ್ಯವನ್ನು ಶ್ಲಾಘನೀಯ ಎಂದರು.
ಯುವನಾಯಕ ಮಿಥುನ್ ರೈ ಮಾತನಾಡಿ, ಬಿಲ್ಲವ ಬ್ರಿಗೇಡ್ ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಗಳಲ್ಲಿ ತೊಡಗುತ್ತಿರುವುದು ಪ್ರಸಂಶನೀಯ ಎಂದರು.
ಸಮಾಜ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಉದ್ಯಮಿಗಳಾದ ಎನ್.ಟಿ ಪೂಜಾರಿ, ರಿಚರ್ಡ್ ಲೋಬೋ ಅವರನ್ನು ಸನ್ಮಾನಿಸಲಾಯಿತು. ಬಿಲ್ಲವ ಬ್ರಿಗೇಡ್ ಸಂಘಟನೆಯ ನಂದಾದೀಪ ವಸತಿ ಯೋಜನೆಯಿಂದ ನಿರ್ಮಿಸಿದ ಮನೆಯ ಕೀಯನ್ನು ವೀಣಾ ಬೆಳ್ಚಡ ಅಡ್ಯಾರ್ ಪದವು ಅವರಿಗೆ ಹಸ್ತಾಂತರಿಸಲಾಯಿತು.
ಮಂಗಳೂರು, ಬೆಂಗಳೂರು ,ಉಡುಪಿ, ಮುಂಬೈ, ಪುಣೆ ,ಲಂಡನ್ ,ದುಬೈ ಮತ್ತು ಕತಾರ್ ತಂಡಗಳು ಪಾಲ್ಗೊಂಡವು. ಸಂದೇಶ ರಾಜ್ ಬಂಗೇರ ತಂಡದ ಸಂಯೋಜಕರಾಗಿದ್ದರು.
ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಗೀತಾಂಜಲಿ ಸುವರ್ಣ, ಉದ್ಯಮಿಗಳಾದ ಸೂರಜ್ ಕಲ್ಯಾ, ಸದಾನಂದ ಪೂಜಾರಿ, ನಟ ರಾಹುಲ್ ಅಮೀನ್, ವಿನೀತ್ ಕುಮಾರ್ ಹಿರಿಯರಾದ ಆರ್.ಕೆ ಬಂಗೇರ, ಬಿಲ್ಲವ ಸಮಾಜದ ಪ್ರಮುಖರಾದ ವಿಶ್ವನಾಥ್ ಕಟ್ತಲಾ ಪುಣೆ, ಸಂದೇಶ್ ಪೂಜಾರಿ ಪುಣೆ, ವಾಸುದೇವ್ ಕೋಟ್ಯಾನ್, ಪ್ರಬೋದ್ ಚಂದ್ರ ಹೆಜಮಾಡಿ, ಹರೀಶ್ ಶಾಂತಿ ಮುಂಬೈ, ದಯಾಕರ್ ಪೂಜಾರಿ ಕುಲಾಯಿ ,ಉಮಾನಾಥ್ ಅಮಿನ್ ಕಾಟಿಪಳ್ಳ , ಶರಣ್ ಪಂಪ್ವೆಲ್, ಗುರ್ಮೆ ಸುರೇಶ್ ಶೆಟ್ಟಿ, ಸತೀಶ್ ಮುಂಚೂರು ಮತ್ತು ಬಿಲ್ಲವ ಸಮಾಜ ಹಾಗೂ ಬಿಲ್ಲವ ಬ್ರಿಗೇಡ್ ನ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು
ಆರ್ಜೆ ಅನುರಾಗ್ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು. ಅವಿನಾಶ್ ಸುವರ್ಣ ಸ್ವಾಗತಿಸಿದರು. ಕಿಶನ್ ಅಮೀನ್ ವಂದಿಸಿದರು.