ಶೇ.3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರೇನು ಭಿಕ್ಷುಕರಲ್ಲ: ಡಿಕೆಶಿ ಆಕ್ರೋಶ

Those who want to get 3% reservation are not beggars: DK is angry

ಹುಬ್ಬಳ್ಳಿ: ‘ಕೇವಲ ಶೇ.3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರು ಭಿಕ್ಷುಕರಲ್ಲ. ಜನಸಂಖ್ಯೆ ಅನುಗುಣವಾಗಿ ಈ ಸಮುದಾಯಕ್ಕೆ ಶೇ.12 ರಷ್ಟು ಮೀಸಲಾತಿ ಸಿಗಬೇಕು. ಬೇರೆ ಸಮುದಾಯದವರು ತಮ್ಮ ಹಕ್ಕು ಕೇಳುವುದರಲ್ಲಿ ತಪ್ಪಿಲ್ಲ. ನಾವು ಅದನ್ನು ವಿರೋಧಿಸುವುದಿಲ್ಲ. ಒಕ್ಕಲಿಗರಿಗೆ ಸಿಗಬೇಕಾದ ಹಕ್ಕನ್ನು ಆಗ್ರಹಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಕ್ಕಲಿಗರಾರೂ ಭಿಕ್ಷುಕರಲ್ಲ. ಅವರು ಒಕ್ಕಲುತನ ಮಾಡಿಕೊಂಡು, ಅನ್ನದಾತರಾಗಿದ್ದಾರೆ. ಒಕ್ಕಲುತನ ಮಾಡುವವರು ಶ್ರಮಪಟ್ಟು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. 3% ಮೀಸಲಿಗೆ ಯಾರೂ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಸಮುದಾಯದ ಸ್ವಾಮೀಜಿಗಳ ಮುಖಂಡತ್ವದಲ್ಲಿ ಸಚಿವರಾದ ಅಶೋಕ್ ಅವರನ್ನು ಕರೆಸಿ ಅವರಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ ಎಂದರು.

ನಮ್ಮ ಸಮುದಾಯದ ಜನಸಂಖ್ಯೆ ಶೇ.15-16 ರಷ್ಟು ಇದ್ದರೂ ನಾವು ಶೇ.12 ರಷ್ಟು ಮೀಸಲಾತಿ ಕೇಳಿದ್ದೇವೆ. ಬೇರೆಯವರ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ಮೀಸಲಾತಿ ನೀಡುವುದು ಬೇಡ. ಬೇರೆಯವರಿಗೆ ಅನ್ಯಾಯ ಮಾಡಲು ನಾವು ಬಯಸುವುದಿಲ್ಲ. ಅಲ್ಪಸಂಖ್ಯಾತರಿಗೆ ಏನು ಸಿಗಬೇಕೊ ಸಿಗಲಿ, ವೀರಶೈವರು, ಪಂಚಮಸಾಲಿಗಳು, ಬ್ರಾಹ್ಮಣರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳಿಗೆ ಏನು ಸಿಗಬೇಕೊ ಸಿಗಲಿ. ಅದಕ್ಕೆ ನಮ್ಮ ತಕರಾರಿಲ್ಲ. ನಮ್ಮ ಸಮಾಜದ ಜನಸಂಖ್ಯೆ ಆಧಾರದಲ್ಲಿ ನಾವು ಶೇ.12ರಷ್ಟು ಕೇಳಿದ್ದು, ಸಚಿವರು ಸರ್ಕಾರಕ್ಕೆ ತಿಳಿಸಿ ಇದನ್ನು ನೀಡುವುದಾಗಿ ಹೇಳಿದ್ದರು. ಆದರೆ ಈಗ ಶೇ. 3 ರಷ್ಟು ಮೀಸಲಾತಿಗೆ ಏರಿಕೆ ಮಾಡಲು ನಮ್ಮ ಸ್ವಾಮಿಗಳನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ. ಶೇ.3 ರಷ್ಟು ಮೀಸಲಾತಿ ಪಡೆಯಲು ನಾವೇನು ಭಿಕ್ಷುಕರಲ್ಲ. ಶೇ.12 ರಷ್ಟು ಮೀಸಲಾತಿ ನಮ್ಮ ಹಕ್ಕು ನಾವದನ್ನು ಆಗ್ರಹಿಸುತ್ತೇವೆ’ ಎಂದು ಡಿಕೆಶಿ ತಿಳಿಸಿದರು.

ಕೋವಿಡ್ ನಿಯಮ ಪಾಲಿಸಿ ಬಸ್ ಯಾತ್ರೆ ಮಾಡಲಿ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರು ಹೇಳಿದರೂ, ಹೇಳದಿದ್ದರೂ ನಾವು ಬಸ್ ಯಾತ್ರೆ ಮಾಡುತ್ತೇವೆ. ಎಸಿ ಹಾಕಿಕೊಳ್ಳಬಾರದು ಎಂದಾದರೆ, ಇವರ ಮನೆ, ಕಚೇರಿ ಹಾಗೂ ಕಾರಿನಲ್ಲಿ ಎಸಿ ನಿರ್ಬಂಧ ಮಾಡಲಿ ಎಂದು ತಿರುಗೇಟು ನೀಡಿದರು. ಸುಮ್ಮನೆ ಜನರಿಗೆ ಭಯ ಹುಟ್ಟಿಸಬಾರದು. ಜನ ಈಗಾಗಲೇ 2 ವರ್ಷದ ಆಘಾತದಿಂದ ಸುಧಾರಿಸುತ್ತಿದ್ದಾರೆ. ಹಿಂದೆ ಸರ್ಕಾರ ಸಾಕಷ್ಟು ಜನರಿಗೆ ಸಹಕಾರ ಸಹಾಯ ಮಾಡಬೇಕಿದ್ದರೂ ಮಾಡಲಿಲ್ಲ. ಈಗ ಜನರನ್ನು ಭಯದ ವಾತಾವರಣಕ್ಕೆ ನೂಕುವುದು ಬೇಡ ‘ ಎಂದು ತಿಳಿಸಿದರು.

ಅವಧಿಪೂರ್ವ ಚುನಾವಣೆಯನ್ನು ಬಿಜೆಪಿ ತಳ್ಳಿಹಾಕಿದೆ ಎಂಬ ಸ್ಪಷ್ಟನೆ ಕುರಿತಂತೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಹಾಗಿದ್ದರೆ ಈ ವಿಚಾರವಾಗಿ ಅವರು ಅಧಿಕಾರಿಗಳ ಬಳಿ ಚರ್ಚೆ ಮಾಡಿದ್ದು ಯಾಕೆ? ಅಧಿಕಾರಿಗಳ ಜತೆ ಅವರು ಏನು ಚರ್ಚೆ ಮಾಡಿದ್ದಾರೆ?’ ಎಂದು ಪ್ರಶ್ನಿಸಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!