ಜಲೀಲ್ ಕೊಲೆಯ ನಿಗೂಢ ರಹಸ್ಯ ಬೆನ್ನತ್ತಿದ ಪೊಲೀಸ್.. ಮೂವರ ಬಂಧನ

ಮಂಗಳೂರು: ಸುರತ್ಕಲ್ ಸಮೀಪ ಕೃಷ್ಣಾಪುರ ಬಳಿ ನಡೆದ ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಭಾನುವಾರ ರಾತ್ರಿ ಅರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ. 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಂಧಿತರ ಪೈಕಿ ಇಬ್ಬರು ಕೃತ್ಯದಲ್ಲಿ ನೇರ ಭಾಗಿಯಾಗಿದ್ದು, ಓರ್ವ ಅವರನ್ನು ಬೈಕ್ ನಲ್ಲಿ ತಂದು ಬಿಟ್ಟಿದ್ದ ಎಂದವರು ತಿಳಿಸಿದರು. ಕೊಲೆಗೆ ಕಾರಣ ಏನು ಅನ್ನೋದನ್ನ ಪೂರ್ಣ ತನಿಖೆ ಬಳಿಕ ಬಹಿರಂಗಪಡಿಸಲಾಗುವುದು ಎಂದ ಅವರು, ಬಂಧಿತರಲ್ಲಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. 2021ರಲ್ಲಿ ನಡೆದ ಕೊಲೆ ಯತ್ನ ಕೇಸ್ ವೊಂದರಲ್ಲೂ ಇದ್ದರು ಎಂದು ವಿವರಿಸಿದರು.
ಜಲೀಲ್ ಕೇಸ್ ನಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೆವು ಜಲೀಲ್ ಕುಟುಂಬದ ಕೆಲವರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದವರು ತಿಳಿಸಿದರು.