ವಿಜಯ ಸಂಕಲ್ಪ ಅಭಿಯಾನ; ಮನೆ ಮನೆಗೆ ತೆರಳಿ ಕರಪತ್ರ ಹಂಚಿದ ಸಚಿವ ಎಸ್.ಟಿ.ಸೋಮಶೇಖರ್

ಬೆಂಗಳೂರು: ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಎಸ್.ಟಿ.ಸೋಮಶೇಖರ್ ಅವರು ಕ್ಷೇತ್ರದ ವಿವಿಧೆಡೆ ಮನೆಮನೆಗೆ ತೆರಳಿ, ಬಿಜೆಪಿಯ ಕಮಲದ ಚಿಹ್ನೆಯನ್ನು ಮನೆಗಳ ಗೋಡೆಗಳ ಮೇಲೆ ಬರೆದು, “ಬಿಜೆಪಿಯೇ ಭರವಸೆ” ಸ್ಟಿಕರ್ ಅಂಟಿಸಿದರು.
ಕೆಂಗೇರಿ, ಹೇರೋಹಳ್ಳಿ, ಹೆಮ್ಮಿಗೆಪುರ ವಾರ್ಡ್, ಕೆ.ಗೊಲ್ಲಹಳ್ಳಿ, ಕುಂಬಳಗೋಡು, ಕಗ್ಗಲಿಪುರ, ತರಳು ಗ್ರಾಮ ಪಂಚಾಯತಿ ಸೇರಿದಂತೆ ನಾನಾ ಕಡೆಗಳಲ್ಲಿ ಮತದಾರರಿಗೆ ಕರಪತ್ರಗಳನ್ನು ಹಂಚಿದರು. ಈ ವೇಳೆ ಮಾತನಾಡಿದ ಸಚಿವರು, ಭಾರತೀಯ ಜನತಾ ಪಕ್ಷದ ವತಿಯಿಂದ ರಾಜ್ಯಾದ್ಯಂತ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.
ಅಭಿಯಾನದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ವಾಹನಗಳ ಮೇಲೆ ಸ್ಟಿಕರ್ ಅಂಟಿಸುವುದರ ಜೊತೆಗೆ ಮಿಸ್ಡ್ ಕಾಲ್ ಅಭಿಯಾನ ನಡೆಸಲಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.