ಅಕ್ರಮ ಎಸಗಿಲ್ಲ-,ತಪ್ಪು ಮಾಡಿಲ್ಲ ದಾಖಲೆ ಇದ್ದರೆ ತೋರಿಸಿ ; ಕಾಂಗ್ರೆಸ್ ಗೆ ಚಾಟಿ ಬೀಸಿದ ದೂಡಾ ಅಧ್ಯಕ್ಷ

IMG-20210709-WA0028

 

ದಾವಣಗೆರೆ,ಜು.10: ಆವರಗೆರೆ ಸರ್ವೇ ನಂಬರ್ 220ರಲ್ಲಿ ನಿರ್ಮಾಣವಾಗಿರುವ ಬಡಾಣೆಯಲ್ಲಿ ಯಾವುದೇ ಕಾಮಗಾರಿ ನಡೆಯದೇ ದೂಡಾ ಅಧ್ಯಕ್ಷರು ಹಣ ಪಡೆದು ಅಂತಿಮ ವಿನ್ಯಾಸ ನೀಡಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು ದಾಖಲೆ ಸಮೇತ ಆರೋಪ ಸಾಬೀತು ಪಡೆಸಿದರೆ ರಾಜೀಯ ನಿವೃತ್ತಿ ಪಡೆಯುವುದಾಗಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇತ್ತೀಚೆಗೆ ಕಾಂಗ್ರೆಸ್ ಪಾಲಿಕೆ ಸದಸ್ಯ ಎ.ನಾಗರಾಜ್ ಸುದ್ದಿಗೋಷ್ಠಿ ನಡೆಸಿ, ದೂಡಾ ಅಧ್ಯಕ್ಷರು ಕೆಲ ಕಾಮಗಾರಿ ನಡೆಸದಿದ್ದರೂ ಬಡಾವಣೆಗೆ ಅಂತಿಮ ವಿನ್ಯಾಸ ನೀಡಿದ್ದಾರೆ. ದುಡ್ಡು ಕೊಟ್ಟರೆ ದೂಡಾದಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ. ಈ ಆರೋಪ ಸಾಬೀತು ಪಡಿಸಲು ಎ.ನಾಗರಾಜ್ ದಾಖಲೆ ಸಮೇತ ಬಡಾವಣೆಗೆ ಬರಲಿ, ನಾನು ಅಲ್ಲಿಗೆ ಹೋಗುತ್ತೇನೆ. ಅಲ್ಲಿ ಏನು ತಪ್ಪಾಗಿದೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.

ನಾನು ಯಾವುದೇ ಬಡಾವಣೆಗೆ ಅಂತಿಮ ವಿನ್ಯಾಸ ನೀಡಬೇಕಾದರೆ ಹತ್ತು ಬಾರಿ ಪರಿಶೀಲನೆ ನಡೆಸಿ. ಆ ಬಳಿಕ ಅನುಮತಿ ನೀಡಿದ್ದೇನೆ. ನಾನು ಕಾನೂನು ಬಾಹಿರವಾಗಿ ಒಂದೇ ಒಂದು ಗೆರೆ ಎಳೆದಿರುವುದನ್ನು ಕಾಂಗ್ರೆಸ್ ಮುಖಂಡರು ಸಾಬೀತು ಪಡಿಸಿದರೇ ಇಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಹೇಳಿದರು.

ಆವರಗೆರೆ ಸರ್ವೇ ನಂಬರ್‌ನಲ್ಲಿ ನಿರ್ಮಾಣವಾಗಿರುವ ಬಡಾವಣೆಯಲ್ಲಿ ಮುಖ್ಯ ರಸ್ತೆಯಿಂದ ಒಳ ರಸ್ತೆಗಳಿಗೆ ಸಂಪರ್ಕ ಇಲ್ಲದಿದ್ದರೂ 2018ರಲ್ಲಿ ಕಾಂಗ್ರೆಸ್‌ನವರೇ ಆ ಬಡಾವಣೆಗೆ ಮೊದಲ ಹಂತದ ಅನುಮತಿ ನೀಡಿದ್ದಾರೆ. ಈಗ ಆರೋಪ ಮಾಡಿರುವವರು ಆಗ ಕತ್ತೆ ಕಾಯುತ್ತಿದ್ದರಾ? ಎಂದು ಪ್ರಶ್ನಿಸಿದ ಅವರು, ನಾನು ಅಧಿಕಾರಕ್ಕೆ ಬಂದಾದ ಮೇಲೆ ಅದನ್ನು ಸರಿ ಮಾಡಿಸಿಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೂತಿದ್ದ ಪಾಲಿಕೆ ಸದಸ್ಯರೊಬ್ಬರೂ ದೂಡಾಕ್ಕೆ ಶುಲ್ಕ ಪಾವತಿಸದೆ ದೊಡ್ಡ ಬೂದಿಹಾಳದ ಸರ್ವೇ ನಂಬರ್ 13, 85 ಹಾಗೂ 109ರಲ್ಲಿ ಮತ್ತು ಕರೂರು ಸರ್ವೇನಂಬರ್ 47ರಲ್ಲಿ ಅನಧಿಕೃತ ಬಡಾವಣೆ ನಿರ್ಮಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ನಿಜವಾಗಿಯು ಕಾಳಜಿ ಇದ್ದರೆ ಆ ಅನಧಿಕೃತ ಬಡಾವಣೆಗಳನ್ನು ತೆರವು ಗೊಳಿಸಿ, ದೂಡಾದಿಂದ ಅನುಮತಿ ಪಡೆದು ಬಡಾವಣೆ ನಿರ್ಮಿಸುವಂತೆ ತಿಳಿ ಹೇಳಲಿ. ಇಲ್ಲದಿದ್ದರೆ, ಆ ವ್ಯಕ್ತಿಯಿಂದ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಲಿ ಎಂದು ಸವಾಲು ಹಾಕಿದರು.

ನಗರದಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಲಾಗಿದ್ದು, ಆ ಬಡಾವಣೆಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ಕೊಟ್ಟಿದ್ದು, ಶೀಘ್ರದಲ್ಲೇ ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಕಾಂಗ್ರೆಸ್ ಇಚ್ಛಾಸಕ್ತಿಯಿಂದ ಅಮರ್ ಜವಾನ್ ಪಾರ್ಕ್ ನಿರ್ಮಾಣವಾಗುತ್ತಿದೆ ಎಂದು ಆ ಪಕ್ಷದ ಮುಖಂಡರು ಹೇಳಿದ್ದಾರೆ. ಐದು ವರ್ಷ ದೂಡಾ ಮತ್ತು ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಪ್ರತಿನಿಧಿಗಳು ಅಮರ್ ಜವಾನ್ ಪಾರ್ಕ್ಗೆ ಏಕೆ ಜಾಗ ಮೀಸಲಿಟ್ಟು, ಅದನ್ನು ಅಭಿವೃದ್ಧಿ ಪಡಿಸಲಿಲ್ಲ ಎಂದು ಪ್ರಶ್ನಿಸಿದರು.

ಅಮರ್ ಜವಾನ್ ಪಾರ್ಕ್ ಉದ್ಘಾಟನೆಗೆ ಮೇಯರ್ ಎಸ್.ಟಿ ವೀರೇಶ್ ಅವರನ್ನು ಕಡೆಗಣಿಸಿಲ್ಲ. ನಾನು ಮತ್ತು ಆಯುಕ್ತರು ಅವರಿಗೆ ಬೆಳಿಗ್ಗೆಯೇ ಫೋನ್ ಮಾಡಿ ಆಹ್ವಾನ ನೀಡಿದ್ದೇವೆ. ವೀರೇಶ್ ಮತ್ತು ನಾನು ಜೋಡೆತ್ತುಗಳಂತಿದ್ದು, ಇಬ್ಬರ ಉದ್ದೇಶ ಒಂದೇ ಆಗಿದೆ. ಆದರೆ, ದೇಹ ಮಾತ್ರ ಎರಡು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೂಡಾ ಸದಸ್ಯರಾದ ದೇವಿರಮ್ಮ, ಸೌಭಾಗ್ಯ ಮುಕುಂದ, ಜಯರುದ್ರೇಶ್, ರಾಜು ರೋಖಡೆ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ.ಗೋಣೆಪ್ಪ ಹಾಜರಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!