ಸೀರೆ ಅಂಗಡಿಯಲ್ಲಿ ಕಳ್ಳತನ: ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಇಬ್ಬರ ಬಂಧನ

ದಾವಣಗೆರೆ: ಇಲ್ಲಿನ ಬಿ.ಟಿ. ಗಲ್ಲಿಯಲ್ಲಿರುವ ಸೀರೆ ಅಂಗಡಿಯಲ್ಲಿ ಹಣ ಕದ್ದಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಇಬ್ಬರನ್ನು ಬಸವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನವೀನ್ (20), ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿತರಿಂದ 1.90 ಲಕ್ಷ ರೂ., ವಶ ಪಡಿಸಿಕೊಂಡಿದ್ದಾರೆ.
ನಗರದ ಬಿ.ಟಿ. ಗಲ್ಲಿಯಲ್ಲಿರುವ ಕ್ರಾಂತಿ ಡಿಸ್ಟ್ರಿಬ್ಯೂಟರ್ ಸೀರೆ ಅಂಗಡಿಯಲ್ಲಿ ಕ್ಯಾಷ್ ಡ್ರಾದಲ್ಲಿದ್ದ 2.50 ಲಕ್ಷ ಹಣವನ್ನು ಈ ಇಬ್ಬರು ಕಳುವು ಮಾಡಿದ್ದರು.
ಈ ಬಗ್ಗೆ ಅನುಮಾನವಿದ್ದ ಅಂಗಡಿ ಮಾಲೀಕ ಮನೀಶ್ ಮೆಹ್ತಾ ಸೋಮವಾರ ಇವರ ಮೇಲೆ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಬೆನ್ನತ್ತಿದ ಬಸವನಗರ ಪೊಲೀಸ್ ಠಾಣೆಯ ನಿರೀಕ್ಷಕ ನಾಗಪ್ಪ ಬಂಕಾಳಿ ನೇತೃತ್ವದಲ್ಲಿ ಪಿಎಸ್ಐ ಶೀಲಾ ಹೊಂಗಲ್ ಹಾಗೂ ಸಿಬ್ಬಂದಿಗಳಾದ ಫಕೃದ್ದೀನ್ ಅಲಿ, ವಿಶ್ವನಾಥ ಗಡ್ಡಿ, ಗಣೇಶ್ ಕೆ ಮತ್ತು ಅನೂಸೂಯ ಅವರನ್ನೊಳಗೊಂಡ ತಂಡ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.