ಎರಡು ಡೊಸ್ ಕೊವಿಡ್ ಲಸಿಕೆ ನೀಡಿ ಪರೀಕ್ಷೆ ನಡೆಸಿ: ದಾವಣಗೆರೆ ವಿಶ್ವವಿದ್ಯಾಲಯ ಬಳಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ದಾವಣಗೆರೆ: ಇದೇ 22 ಕ್ಕೆ ನಿಗದಿಯಾಗಿರುವ ಸ್ನಾತಕೋತ್ತರ ಪದವಿ ಪರೀಕ್ಷಾ ವೇಳಾಪಟ್ಟಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಓ) ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ದಾವಣಗೆರೆ ವಿಶ್ವವಿದ್ಯಾಲಯದ ಮುಂಭಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜುಲೈ 22 ರಿಂದ ನಿಗದಿ ಮಾಡಿರುವ ಪರೀಕ್ಷಾ ವೇಳಾಪಟ್ಟಿಯನ್ನು ಈ ಕೂಡಲೇ ಹಿಂಪಡೆಯಬೇಕು, ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕು, ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಡೋಸ್ ಉಚಿತ ಲಸಿಕೆ ಆಗುವವರೆಗೂ ಆಫ್ಲೈನ್ ತರಗತಿ ಮತ್ತು ಪರೀಕ್ಷೆಗಳನ್ನು ನಡೆಸಬಾರದು ಎಂದು ಆಗ್ರಹಿಸಿ ದಾವಣಗೆರೆ ವಿವಿಯ ಕುಲಸಚಿವೆ (ಮೌಲ್ಯಮಾಪನ) ಡಾ. ಹೆಚ್.ಎಸ್. ಅನಿತಾ ಅವರಿಗೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಆಫ್ಲೈನ್ ತರಗತಿಗಳನ್ನು ಪ್ರಾರಂಭಿಸುವುದಾದರೆ ಮತ್ತು ಪರೀಕ್ಷೆಗಳನ್ನು ನಡೆಸುವುದಾದರೆ ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಡೋಸ್ ಲಸಿಕೆ ನೀಡಿದ ನಂತರವೇ ನಡೆಸುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳ ಆಗ್ರಹಕ್ಕೆ ಮನವಿ ಸ್ವೀಕರಿಸಿ ಮಾತನಾಡಿದ ಕುಲಸಚಿವರು ಸರ್ಕಾರದ ಆದೇಶದಂತೆ ನಾವು ನಡೆಯುತ್ತೇವೆ. ಸರ್ಕಾರ ಪರೀಕ್ಷೆ ರದ್ದು ಮಾಡಿ ಎಂದರೆ ಮಾಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲಾ ಕಾರ್ಯದರ್ಶಿ ಪೂಜಾ, ಪುಷ್ಪ, ಕಾವ್ಯ, ಕಿರಣ್ ಮತ್ತು ಸೌಮ್ಯ ಸೇರಿದಂತೆ ವಿವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.