ಬಿ ಎಸ್ ವೈ ರಿಂದ ಜುಲೈ 26 ಕ್ಕೆ ಬಿಜೆಪಿ ಶಾಸಕರಿಗೆ ಔತಣಕೂಟ: ಯತ್ನಾಳಗೆ ಬುದ್ದಿ ಭ್ರಮಣೆಯಾಗಿದೆ.! ರೇಣುಕಾಚಾರ್ಯ

ದಾವಣಗೆರೆ: ಇದೇ 26ಕ್ಕೆ ಸಿಎಂ ಬದಲಾವಣೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅಂದು ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಔತಣ ಕೂಟ ಏರ್ಪಡಿಸಲಾಗಿದೆಯಷ್ಟೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದ ಜಿಎಂಐಟಿ ಅತಿಥಿ ಗೃಹದ ಬಳಿ ಬೀಜದುಂಡೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 26ಕ್ಕೆ ಸಿಎಂ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ರಾಜ್ಯ ಉಸ್ತುವಾರಿ ಅರುಣಕುಮಾರ್, ಸಿಎಂ ಬದಲಾವಣೆ ಇಲ್ಲ ಅಂತ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಅಂದು ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಶಾಸಕ, ಸಚಿವರಿಗೆ ಔತಣ ಕೂಟಕ್ಕೆ ಸಿಎಂ ಆಹ್ವಾನಿಸಿದ್ದಾರೆ ಎಂದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ 2 ಸಾವಿರ ಕೋಟಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಯತ್ನಾಳ್ಗೆ ಮತಿಭ್ರಮಣೆಯಾಗಿದೆ. ಅವರ ಮಾತಿಗೆ ಮಹತ್ವ ಕೊಡುವುದಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಯತ್ನಾಳ್ ವಿರುದ್ಧ ಹರಿಹಾಯ್ದರು.
ರಾಷ್ಟ್ರೀಯ ಅಧ್ಯಕ್ಷ, ಪ್ರಧಾನಿಯವರನ್ನ ಭೇಟಿಯಾಗಲು ಹೋಗಿದ್ದರು. ಕೇಂದ್ರದ ವರಿಷ್ಠರು ಕೂಡ ಬಿಎಸ್ವೈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಯ ನೇತೃತ್ವ ವಹಿಸಲು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.