ತುಂಗಾ ಡಾಗ್ ನಿಂದ ಭರ್ಜರಿ ಬೇಟೆ: ಒಂಟಿ ವೃದ್ದೆ ಕೋಲೆ ಕೇಸ್ ಪತ್ತೆಗೆ ಪ್ರಮುಖ ರುವಾರಿ ತುಂಗಾ

ದಾವಣಗೆರೆ: ಒಂಟಿ ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಪೊಲೀಸ್ ಡಾಗ್ ತುಂಗಾ ಪತ್ತೆಹಚ್ಚಿದ್ದು, ಹತ್ಯೆಯಾಗಿ ಮೂರು ದಿನಗಳಲ್ಲಿಯೇ ಪ್ರಕರಣ ಬೇಧಿಸುವಲ್ಲಿ ಪೊಲೀಸ್ ಇಲಾಖೆಗೆ ನೆರವಾಗಿದೆ.
ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆ ಗೌರಮ್ಮ (75) ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಗ್ಗೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಜು.19 ರಂದು ದೂರು ದಾಖಲಾಗಿತ್ತು. ಪ್ತಕರಣದ ಜಾಡು ಹಿಡಿದು ಹೋದ ‘ತುಂಗಾ’ ಕೊಲೆ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದೆ.
ಅದೇ ಗ್ರಾಮದವನಾದ ಆರೋಪಿ ಬಿ.ಜಿ. ರೇವಣಸಿದ್ದಪ್ಪ (48) ಎಂದು ತಿಳಿದುಬಂದಿದ್ದು, ಆರೋಪಿಯಿಂದ 4.10 ಲಕ್ಷ ರೂ., ಮೌಲ್ಯದ ಚಿನ್ನಾಭರಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೃದ್ಧೆ ಗೌರಮ್ಮನಿಂದ ಆರೋಪಿ ರೇವಣಸಿದ್ದಪ್ಪ ಸಾಲ ಪಡೆದಿದ್ದ. ಸಾಲ ತೀರಿಸಲಾಗದೆ ವೃದ್ಧೆಯನ್ನು ಕೊಲೆ ಮಾಡಿ ಆಕೆಯ ಚಿನ್ನಾಭರಣಗಳನ್ನು ದೋಚಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಕಾರ್ಯ ಪ್ರವೃತ್ತರಾದ ಪಿಎಸ್ಐ ಲಿಂಗನಗೌಡ ನೆಗಳೂರು ತಂಡವು ಪೊಲೀಸ್ ಶ್ವಾನದಳದ ತುಂಗಾ ಶ್ವಾನದೊಂದಿಗೆ ಕೊಲೆ ಪ್ರಕರಣದ ಘಟನಾ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದು, ತುಂಗಾ ಶ್ವಾನವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಸ್ಪದ ಆರೋಪಿತನ ಮನೆಯ ಬಗ್ಗೆ ಸುಳಿವು ನೀಡಿತ್ತು. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.