ಮಳೆಗಾಲದಲ್ಲಿ ಪಾಲಿಕೆ ಮುಂಬಾಗದ ಬ್ರಿಡ್ಜ್ ನಲ್ಲಿ ವಾಟರ್ ಪಾರ್ಕ್ ನಿರ್ಮಾಣ.!

ದಾವಣಗೆರೆ: ಮಳೆಗಾಲ ಬಂತೆಂದರೆ ಸಾಕು ದಾವಣಗೆರೆ ಜನರು ವಾಟರ್ ಪಾರ್ಕ್ ಗಳಿಗೆ ಹಣ ನೀಡಿ ಹೋಗಬೇಕಾದ ಅಗತ್ಯವೇ ಇಲ್ಲ. ಇಲ್ಲೇ ಪಾಲಿಕೆ ಮುಂಭಾಗದ ಅಂಡರ್ ಬ್ರಿಡ್ಜ್ ಗೆ ಬಂದರೆ ಸಾಕು. ಉಚಿತವಾಗಿ ವಾಟರ್ ಪಾರ್ಕ್ ನೋಡುವ ಭಾಗ್ಯ ನಿಮ್ಮದಾಗಲಿದೆ!
ಅಯ್ಯೋ ಇದೇನಪ್ಪ ಹೀಗಂತೀರಾ ಅಂತಿದೀರಾ? ಹೌದು! ಇಲ್ಲಿನ ಅಂಡರ್ ಬ್ರಿಡ್ಜ್ ಮಳೆಗಾಲ ಬಂತೆದರೆ ಸಾಕು ಹೊಳೆಯಾಗಿ ಹರಿಯುತ್ತದೆ.
ವಾಹನ ಸವಾರರ ಜತೆಗೆ ಪಾದಚಾರಿಗಳಿಗೂ ಈ ಮಾರ್ಗದಲ್ಲಿ ಸಂಚರಿಸುವುದು ತೀವ್ರ ತಲೆಬಿಸಿ ತಂದೊಡ್ಡುತ್ತದೆ. ದಶಕಗಳ ಸಮಸ್ಯೆಯಾಗಿರುವ ಪಾಲಿಕೆ ಮುಂಭಾಗದ ರೈಲ್ವೆ ಅಂಡರ್ ಬ್ರಿಡ್ಜ್ ರಸ್ತೆ ಮಳೆಗಾಲದಲ್ಲಿ ನೀರು ನಿಂತು ಹೊಳೆಯಂತಾಗಿರುತ್ತದೆ.
ಕಳೆದ ನಾಲ್ಕೈದು ತಿಂಗಳ ಹಿಂದಷ್ಟೆ ಮೇಯರ್ ಎಸ್.ಟಿ. ವೀರೇಶ್ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲದೇ, ಖುದ್ದು ತಾವೇ ಆಗಮಿಸಿ ಇಲ್ಲಿನ ನೀರು, ನಿಂತಿದ್ದ ಕೊಚ್ಚೆಯನ್ನು ಎತ್ತಿಹಾಕಿ ಸಾರ್ವಜನಿಕರ ಪ್ರಶಂಸೆಗೂ ಪಾತ್ರರಾಗಿದ್ದರು.
ಆದರೆ, ಈ ಸಮಸ್ಯೆ ಬಗೆಹರಿಯುವ ಲಕ್ಷಣಗಳಂತೂ ಕಾಣುತ್ತಿಲ್ಲ. ಕಳೆದ ಒಂದು ವಾರಗಳಿಂದ ಸುರಿದ ಭಾರೀ ಮಳೆಗೆ ಮತ್ತೆ ಈ ಮಾರ್ಗ ಜಲಾವೃತಗೊಂಡಿದೆ. ವಾಹನಸವಾರರು ಪಾಲಿಕೆಗೆ ಹಿಡಿ ಶಾಪ ಹಾಕುತ್ತಾ ಇನ್ನೂ ಯಾವಾಗ ಇದರ ಮುಕ್ತಿ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ಮಹಾಪೌರರೆ ಕೊಡಬೇಕಷ್ಟೆ.