First reaction: ಯಡಿಯೂರಪ್ಪ ದಿ ಕಿಂಗ್ ಮೇಕರ್: ಬೊಮ್ಮಾಯಿ ದಿ ಬಾಸ್.! ನಾಳೆಯ ಯಾರೆಲ್ಲ ಪದಗ್ರಹಣ, ಸಿಎಂ ಏನು ಹೇಳಿದ್ರು

ಬೆಂಗಳೂರು: ಬಡವರ, ದಲಿತರ, ರೈತರ ಹಾಗೂ ಹಿಂದುಳಿದ ವರ್ಗದವರ, ಮಹಿಳೆಯರು ಮತ್ತು ಯುವಕರ ಕಲ್ಯಾಣಕ್ಕಾಗಿ ಬಿ ಎಸ್ ವೈ ಜಾರಿಗೆ ತಂದಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಮೂಲಕ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅಭ್ಯುದಕ್ಕೆ ಶ್ರಮಿಸುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸಿಎಂ ಘೋಷಣೆಯ ನಂತರ ಪ್ರಥಮವಾಗಿ ಮಾಧ್ಯಮ ದವರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಅತ್ಯಂತ ಕಷ್ಟ ಪರಿಸ್ಥಿತಿಯನ್ನು ಬಿ.ಎಸ್. ಯಡಿಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಎರಡು ಬಾರಿ ಕೋವಿಡ್ ಮತ್ತು ಇನ್ನೆರಡು ಬಾರಿ ಪ್ರವಾಹ ಪರಿಸ್ಥಿತಿಯಂತಹ ಸಂದರ್ಭವನ್ನು ಅವರು ನಿಭಾಯಿಸಿದ್ದಾರೆ. ನಾನು ಕೂಡ ಅವರ ಮಾರ್ಗದರ್ಶನದಲ್ಲಿ ಅವರು ಘೋಷಿಸಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರದ ವರಿಷ್ಠರು ಹಾಗೂ ರಾಜ್ಯದ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಜನಪರ, ನ್ಯಾಯ ಸಮ್ಮತವಾದ ಆಡಳಿತ ನಡೆಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈಗಾಗಲೇ ತಾವು ಶಾಸಕಾಂಗದ ನಾಯಕನಾಗಿರುವ ಬಗ್ಗೆ ರಾಜ್ಯಪಾಲರಿಗೆ ತಿಳಿಸಲಾಗಿದ್ದು, ಇಂದು ಚರ್ಚೆ ನಡೆಸಿರುವ ಪ್ರಕಾರ ನಾಳೆ 11 ಗಂಟೆಗೆ ತಾವು ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಇನ್ನೂ ಮಂತ್ರಿಮಂಡಲದ ಬಗ್ಗೆ ಚರ್ಚೆ ನಡೆಸಿಲ್ಲ ಎಂದರು.