ಅರಣ್ಯ ಭೂಮಿ ಹಕ್ಕುಪತ್ರ ನೀಡದ ಅಧಿಕಾರಿಗಳ ವಿರುದ್ದ ಆಕ್ರೋಶ

IMG-20210728-WA0013

 

ದಾವಣಗೆರೆ.ಜು.೨೮: ಅರಣ್ಯ ಭೂಮಿ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ತೀವ್ರವಾಗಿ ಖಂಡಿಸಿದೆ .

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ನೇತ್ರಾವತಿ, ರಾಜ್ಯದಲ್ಲಿ ಲಕ್ಷಾಂತರ ಮಂದಿ ಸಾಗುವಳಿದಾರರು ಕಳೆದ 3ತಲೆಮಾರುಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು ಇನ್ನೂ ಸಾಗುವಳಿ ಚೀಟಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚನ್ನಗಿರಿ ತಾಲ್ಲೂಕು ಒಂದರಲ್ಲೇ ಅರಣ್ಯ ಭೂಮಿಗಾಗಿ ಅರ್ಜಿ ಹಾಕಿರುವ ರೈತರು 10876, ಸುಮಾರು 35850 ಎಕರೆ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಆದರೆ ಈವರೆಗೆ ಯಾರಿಗೂ ಅರಣ್ಯಭೂಮಿ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡದೆ ಇಲಾಖೆಯ ಅಧಿಕಾರಿಗಳು ವಿನಾಕಾರಣ ಸಬೂಬು ಹೇಳುತ್ತಾ ಪರದಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು .

ಗ್ರಾಮೀಣ ಜನರ ಪ್ರಥಮಾದ್ಯತೆ ಜಮೀನು ಆಗಿದ್ದು ಉತ್ಪಾದನೆಯ ಏಕೈಕ ಮಾರ್ಗವಾಗಿದೆ ಅರಣ್ಯಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದರೂ ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ, ಎಸಿ ಸೇರಿದಂತೆ ಎಲ್ಲಾ ವರ್ಗದ ಅಧಿಕಾರಿಗಳಿಗೂ ಮನವಿ ಮಾಡಲಾಗಿದ್ದರೂ ಸಹ ಕಿಂಚಿತ್ತೂ ಆಸಕ್ತಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಕಾರಣ ಈ ಕಾಯಿದೆಯನ್ನು ಕೂಡಲೇ ಅನುಷ್ಠಾನಗೊಳಿಸಲು ಸೂಚಿಸಬೇಕೆಂದು ಮನವಿ ಮಾಡಿದರು .

ಅರಣ್ಯ ಹಕ್ಕು ಕಾಯ್ದೆ ಅಡಿ ಅನುಸೂಚಿತ ಬುಡಕಟ್ಟು ಹಾಗೂ ಇತರೆ ಸಾಂಪ್ರದಾಯಿಕ ಅರಣ್ಯವಾಸಿಗಳ ಅರ್ಜಿಗೆ ಸಂಬಂಧಿಸಿದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಆಗಬೇಕು. ಸುಪ್ರೀಂಕೋರ್ಟ್ ನ ಆದೇಶದ ಪ್ರಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸದೇ ಕಾಯ್ದೆಯಡಿ ಪುನಃ ಪರಿಶೀಲಿಸಿ ಹಕ್ಕುಪತ್ರ ನೀಡಬೇಕು. ಅರ್ಜಿಗಳನ್ನು ಪರಿಶೀಲಿಸಿ ಸ್ಥಳ ಪರಿಶೀಲನೆ ನಡೆಸಿ ಅರ್ಹ ರೈತರಿಗೆ ಭೂಮಿ ವಿತರಣೆ ಮಾಡಬೇಕು. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಕೇವಲ ಕಚೇರಿಯಲ್ಲೇ ಕುಳಿತು ದಾಖಲೆಗಳು ಸರಿ  ಸರಿ ಇಲ್ಲ ಎನ್ನುವ ಸಬೂಬು ನೀಡಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನವೂ ನೀಡಿರುವ ಮಾರ್ಗಸೂಚಿಯಂತೆ ಗ್ರಾಮಸಭೆ ಅಥವಾ ಅರಣ್ಯ ಹಕ್ಕು ಸಮಿತಿಗಳ ಅರ್ಜಿಗಳನ್ನು ಪುನರ್ ಪರಿಶೀಲಿಸುವ ಸಮಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ದಾಖಲೆಗಳನ್ನು ಸಂಪೂರ್ಣ ಪರಿಶೀಲಿಸಿ ರೈತರಿಗೆ ಈ ಕೂಡಲೇ ಭೂಮಿಯನ್ನು ನೀಡಬೇಕು ಅಲ್ಲದೆ ಅರಣ್ಯ ಭೂಮಿ ಹಕ್ಕು ಅರ್ಜಿದಾರರಿಗೆ ವೈಯಕ್ತಿಕ ಲಿಖಿತ ನೋಟಿಸ್ ನೀಡಿ ಅಹವಾಲು ಸಲ್ಲಿಸಲು ನೀಡಬೇಕೆಂದು ಮನವಿ ಮಾಡಿದರು .

ಸುದ್ದಿಗೋಷ್ಠಿಯಲ್ಲಿ ರೂಪಾ ನಾಯ್ಕ, ಷಣ್ಮುಖನಾಯ್ಕ, ರವಿಕುಮಾರ್, ವೀರಪ್ಪ, ಶಂಕರ್,  ವೆಂಕಟೇಶ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!