ಫಲ ನೀಡದ ಟೆಂಪಲ್ ರನ್.! ದಾವಣಗೆರೆಗೆ ಸಿಗದ ಸಚಿವ ಸ್ಥಾನ

ದಾವಣಗೆರೆ: ಕಳೆದ ಸಲ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಐವರು ಬಿಜೆಪಿ ಶಾಸಕರಿರುವ ದಾವಣಗೆರೆ ಜಿಲ್ಲೆಗೆ ಕೈತಪ್ಪಿದ್ದ ಸಚಿವ ಸ್ಥಾನ ಈ ಬಾರಿ ಸಿಕ್ಕೇ ಸಿಗುತ್ತದೆ ಎಂದೇ ಭಾವಿಸಲಾಗಿತ್ತಾದರೂ ಜನರ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.
ದಾವಣಗೆರೆ ಉತ್ತರ ಶಾಸಕ ಎಸ್.ಎ. ರವೀಂದ್ರನಾಥ್, ಜಗಳೂರು ಎಸ್.ವಿ. ರಾಮಚಂದ್ರ, ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ, ಮಾಯಕೊಂಡ ಪ್ರೊ. ಲಿಂಗಣ್ಣ, ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಪಕ್ಕಾ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ಸಚಿವ ಸ್ಥಾನಕ್ಕೆ ಎಸ್.ಎ. ರವೀಂದ್ರನಾಥ್ ಮತ್ತು ಎಂ.ಪಿ. ರೇಣುಕಾಚಾರ್ಯ ಇವರಿಬ್ಬರ ಹೆಸರು ಪೈಪೋಟಿಯಲ್ಲಿತ್ತು.
ಇದಕ್ಕೆ ಇಂಬು ನೀಡುವಂತೆ ನಿನ್ನೆಯೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಓಡಾಡಿದ್ದ ಸಚಿವರ ಪಟ್ಟಿಯಲ್ಲಿ ರೇಣುಕಾಚಾರ್ಯ ಅವರಿಗೆ ಸಣ್ಣ ನೀರಾವರಿ ಖಾತೆ ಸಿಕ್ಕಿರುವ ಬಗ್ಗೆ ನಮೂದಾಗಿತ್ತು. ಆದರೆ, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟ ಇದೆಲ್ಲವನ್ನು ತಲೆಕೆಳಗಾಗಿಸಿ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದ್ದು, ಇದರಲ್ಲಿ ಮತ್ತೆ ಜಿಲ್ಲೆಯ ಯಾವ ಶಾಸಕರಿಗೂ ಸಚಿವ ಸ್ಥಾನ ನೀಡದೆ ಇರುವ ಬಗ್ಗೆ ತಿಳಿದುಬಂದಿದೆ.
ಜಿಲ್ಲೆಯಲ್ಲಿರುವ ಐವರು ಶಾಸಕರಲ್ಲಿ ಒಬ್ಬರಿಗಾದರೂ ಹೈಕಮಾಂಡ್ ಸ್ಥಾನ ಕೊಡಬೇಕಿತ್ತು, ಆದರೆ, ಐವರಿದ್ದರೂ ಯಾರೊಬ್ಬರಿಗೂ ಸಚಿವ ಸ್ಥಾನ ನೀಡದೇ ಜನರ ನಂಬಿಕೆಯನ್ನು ಬಿಜೆಪಿ ಹೈಕಮಾಂಡ್ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರ ಹುಸಿ ಮಾಡಿದೆ.