Lokayukta Trap: ಚನ್ನಗಿರಿ ಬೆಸ್ಕಾಂ ಎಇ ಮೋಹನ್ 10 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಅಧಿಕಾರಿಗಳಿಂದ ಟ್ರ್ಯಾಪ್,

ದಾವಣಗೆರೆ: (Lokayukta Trap) ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬೆಸ್ಕಾಂ ಅಧಿಕಾರಿಗಳು ಗಣೇಶನ ದೇವಸ್ಥಾನದಲ್ಲಿ ಯಾರಿಂದಲೂ ಕಂಚ ಸ್ವೀಕರಿಸುವುದಿಲ್ಲ ಎಂದು ಇತ್ತೀಚಿಗೆ ಆಣೆ ಮಾಡಿದ್ದರು, ಆಣೆ ಮಾಡಿದ್ದ ಅಸಿಸ್ಟೆಂಟ್ ಇಂಜಿನಿಯರ್ ಮೋಹನ್ ಕುಮಾರ್ ಚನ್ನಗಿರಿಯಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪಿರ್ಯಾದುದಾರರಾದ ಶ್ರೀ ಮಂಜುನಾಥ ಬಿ.ಎಂ. ತಂದೆ ಮಹೇಶ್ವರಪ್ಪ, ಮಲ್ಲಾಪುರ ಗ್ರಾಮ, ಚನ್ನಗಿರಿ ತಾಲ್ಲೂಕ್ ರವರ ಚಿಕ್ಕಪ್ಪ ಸೋಮಶೇಖರಪ್ಪ ರವರ ಹೊಲದಲ್ಲಿ ಅಳವಡಿಸಿದ್ದ ಆರ್ಆರ್ ನಂ.ಕೆಜಿಐಪಿ-7574ನೇ ಟಿಸಿಯು ಈಗ್ಗೆ ಸುಮಾರು 01 ವರ್ಷದ ಹಿಂದೆ ಸುಟ್ಟು ಹೋಗಿದ್ದು, ಸದರಿ ಟಿಸಿಯನ್ನು ಬದಲಾಯಿಸಿ ಬೇರೆ ಟಿಸಿಯನ್ನು ಅಳವಡಿಸಿಕೊಡುವ ಬಗ್ಗೆ ಶ್ರೀ ಮೋಹನ್ ಕುಮಾರ್, ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಸೆಕ್ಷನ್ ಆಪೀಸರ್, ಬೆಸ್ಕಾಂ ಕಛೇರಿ, ಸಂತೆಬೆನ್ನೂರು ರವರು ರೂ.10,000/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ದಿನಾಂಕ.29-03-2025 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆ ಮೊಕದ್ದಮೆ ಸಂ:04/2025 ಕಲಂ: 7(2) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತದೆ.
ದಿನಾಂಕ.29-03-2025 ರಂದು ಮೇಲ್ಕಂಡ ಆರೋಪಿತ ಅಧಿಕಾರಿ ಶ್ರೀ ಮೋಹನ್ ಕುಮಾರ್, ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಸೆಕ್ಷನ್ ಆಪೀಸರ್ ರವರು ಪಿರ್ಯಾದಿಯವರಿಂದ ರೂ.10,000/-ಗಳ ಲಂಚದ ಹಣವನ್ನು ಸ್ವೀಕರಿಸಿದ್ದು, ಆರೋಪಿತ ಅಧಿಕಾರಿಯನ್ನು ದಸ್ತಗಿರಿ ಮಾಡಿ ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿಯಾಗಿರುತ್ತದೆ.
ಮಾನ್ಯ ಶ್ರೀ ಎಂ.ಎಸ್.ಕೌಲಾಪೂರೆ, ಪೊಲೀಸ್ ಅಧೀಕ್ಷಕರು ಮತ್ತು ಶ್ರೀಮತಿ ಕಲಾವತಿ, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರಾದ ಶ್ರೀ ಹೆಚ್.ಗುರುಬಸವರಾಜ ಮತ್ತು ಶ್ರೀಮತಿ ಸರಳ. ಪಿ. ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಆರೋಪಿತರಾದ ಶ್ರೀ ಮೋಹನ್ ಕುಮಾರ್, ಅಸಿಸ್ಟೆಂಟ್ ಇಂಜಿನಿಯರ್ ರವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.