Corporation: ದಾವಣಗೆರೆ ಪಾಲಿಕೆ 3ರ ವಲಯ ಆಯುಕ್ತೆ ಈರಮ್ಮ, ವಿಷಯ ನಿರ್ವಾಹಕಿ ನೇತ್ರಾ ಅಮಾನತಿಗೆ ಸೂಚನೆ, ಪಾಲಿಕೆಯ 115 ವಾಹನ ಜಪ್ತಿ

ಮಹಾನಗರ ಪಾಲಿಕೆ ಕಚೇರಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ
ಅಧಿಕಾರಿಗಳ ಕರ್ತವ್ಯ ನಿರ್ವಹಣೆಯ ಲೋಪ : ಸ್ವಯಂ ಪ್ರೇರಿತ ದೂರು ದಾಖಲಿಸಲು ನ್ಯಾಯಮೂರ್ತಿ ಬಿ.ವೀರಪ್ಪ ಸೂಚನೆ
ದಾವಣಗೆರೆ: (Corporation) ದಾವಣಗೆರೆ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಬುಧವಾರ ಅನಿರೀಕ್ಷಿತವಾಗಿ ಮಹಾನಗರ ಪಾಲಿಕೆಯ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಶಾಖೆಗಳ ಕಡತ ಹಾಗೂ ಇತರೆ ದಾಖಲೆಗಳ ಪರಿಶೀಲನೆ ನಡೆಸಿದರು.
ಪಾಲಿಕೆ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಮತ್ತು ನಗದು ಘೋಷಣಾ ವಹಿಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರಲ್ಲದೇ, ಸರಿಯಾಗಿ ನಿರ್ವಹಿಸದಿರುವ ಕುರಿತು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಅಭಿಯಂತರರು ವಿಭಾಗ ಶಾಖೆಗಳಿಗೆ ನೀಡಿ ಪರಿಶೀಲಿಸಿ, ಸೂಕ್ತ ದಾಖಲೆಗಳು ನೀಡದ ಕಾರಣ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿದರು.
ನಗರದಲ್ಲಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆಯೇ, ಒಂದು ವೇಳೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಅಂತವರಿಗೆ ನೋಟಿಸ್ ನೀಡಲಾಗಿದೆಯೇ?, ಇಲ್ಲಿಯವರೆಗೆ ಎಷ್ಟು ನೋಟಿಸ್ಗಳನ್ನು ನೀಡಿದ್ದೀರಿ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಪ್ರಶ್ನಿಸಿದರು.
ವಲಯ ಮೂರರ ಅಧಿಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೋರ್ವ ಯಾವುದೇ ರೀತಿಯ ಅಧಿಕಾರ ಇಲ್ಲದೆ ಮಹಾನಗರ ಪಾಲಿಕೆ ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಕುರಿತು, ವಿಡಿಯೋ ತುಣುಕು ಹರಿದಾಡುತ್ತಿದೆ. ಈ ಸಂಬಂದ ಮಹಾನಗರ ಪಾಲಿಕೆ ಅಯುಕ್ತರು ಏನು ಕ್ರಮಕೈಗೊಂಡಿದ್ದೀರಿ ಎಂದು ನ್ಯಾ.ಬಿ.ವೀರಪ್ಪ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತೆ ರೇಣುಕಾ ಕಚೇರಿಯ ಸಂಬಂದಪಟ್ಟ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆ ವಿಡಿಯೋ ಸತ್ಯಾಸತ್ಯತೆ ತಿಳಿಯಲು ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದರು.
ಆಯುಕ್ತ ಉತ್ತರಕ್ಕೆ ಅಸಮಾಧನಗೊಂಡ ನ್ಯಾ.ಬಿ.ವೀರಪ್ಪ, ಸಂಬಂದ ಪಟ್ಟ ಅಧಿಕಾರಿಯನ್ನು ಈ ಕೂಡಲೇ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಬೇಕು. ಖಾಸಗಿ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು ಎಂದು ಆಯುಕ್ತರಿಗೆ ನಿರ್ದೇಶನ ನೀಡಿದರು.
ನ್ಯಾ.ಬಿ.ವೀರಪ್ಪ ಸೂಚನೆಯಂತೆ ವಲಯ ಮೂರರ ಉಪ ಆಯುಕ್ತೆ ಈರಮ್ಮ ಹಾಗೂ ವಿಷಯ ನಿರ್ವಾಹಕಿ ನೇತ್ರಾ ಅವರನ್ನು ಅಮಾನತ್ತು ಮಾಡುವಂತೆ ಆಯುಕ್ತೆ ರೇಣುಕಾ ಶಿಫಾರಸ್ಸು ಮಾಡಿದ್ದಾರೆ.
*ಪಾಲಿಕೆಯ 115 ವಾಹನ ಜಪ್ತಿ:*
ಕಸ ಸಂಗ್ರಹ, ವಿಲೇವಾರಿ, ಅಧಿಕಾರಿಗಳ ವಾಹನ ಸೇರಿ ದಾವಣಗೆರೆ ಮಹಾನಗರ ಪಾಲಿಕೆ ಬಳಿ 200 ವಾಹನಗಳು ಕಾರ್ಯಚರಣೆ ನಡೆಸುತ್ತಿವೆ. ಆದರೆ ನ್ಯಾ.ಬಿ.ವೀರಪ್ಪ ನವರು ಮಹಾನಗರ ಪಾಲಿಕೆಯ ಒಟ್ಟು ವಾಹನಗಳು ಎಷ್ಟು ಅವುಗಳಲ್ಲಿ ಎಷ್ಟು ವಾಹನಗಳಿಗೆ ಎಫ್.ಸಿ ಮುಗಿದಿದೆ ಎಂದು ಪ್ರಶ್ನಿಸಿದಾಗ ಸಂಬಂದ ಪಟ್ಟ ಅಧಿಕಾರಿ 200 ಕ್ಕೂ ವಾಹನಗಳು ಇದ್ದು ಇದರಲ್ಲಿ 15 ವಾಹನಗಳ ಎಫ್.ಸಿ ಮುಗಿದಿದೆ ಎಂದು ತಪ್ಪಾಗಿ ಮಾಹಿತಿ ನೀಡಿದರು.
ನ್ಯಾ.ಬಿ.ವೀರಪ್ಪ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮಹಾನಗರ ಪಾಲಿಕೆಯ ಒಟ್ಟು ವಾಹನ ಪರಿಶೀಲನೆ ನಡೆಸುವಂತೆ ಸೂಚಿಸಿ, ಒಂದೆರಡು ಗಂಟೆಯಲ್ಲಿ ವರದಿ ನೀಡುವಂತೆ ಸೂಚಿಸಿದರು.
ಸಂಜೆಯ ವೇಳೆ ಸಾರಿಗೆ ಅಧಿಕಾರಿಗಳ ವರದಿ ನೀಡಿ, ಮಹಾನಗರ ಪಾಲಿಕೆಯ 200 ವಾಹನಗಳಲ್ಲಿ 115 ವಾಹನಗಳಿಗೆ ಎಫ್.ಸಿ ಮುಗಿದಿದೆ ಎಂದು ತಿಳಿಸಿದರು. ಇದರ ಮೇರೆಗೆ ಪಾಲಿಕೆ 115 ವಾಹನಗಳ ಜಪ್ತಿಗೆ ನ್ಯಾ.ಬಿ.ವೀರಪ್ಪ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಮಂಜುನಾಥ್, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ, ವಿ.ಎನ್.ಮಿಲನ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
=======