APMC: ಕಳಪೆ ಕಾಮಗಾರಿ ನಡೆಯದಂತೆ ನಿಗಾವಹಿಸಿ: ಅಧಿಕಾರಿಗಳಿಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸೂಚನೆ

ದಾವಣಗೆರೆ: (APMC) ರಾಜ್ಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು ಪಣತೊಟ್ಟಿದ್ದು, ಹೆಚ್ಚು ಹೆಚ್ಚು ಅನುದಾನವನ್ನು ಜಿಲ್ಲೆಗೆ ತಂದು ಪ್ರಗತಿಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಗುರುವಾರ 2024-25 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ದಾವಣಗೆರೆ ಪಿ.ಬಿ ರಸ್ತೆಯಿಂದ ಈರುಳ್ಳಿ ಅಕ್ಕಿ ಮಾರುಕಟ್ಟೆ ಮೂಲಕ ಬಂಬೂ ಬಜಾರ್ ರಸ್ತೆಗೆ ಸೇರುವ ರೈಲ್ವೆ ಅಂಡರ್ ಬ್ರಿಡ್ಜ್ ರಸ್ತೆಯನ್ನು ಎತ್ತರಿಸಿ ಅಭಿವೃದ್ಧಿ ಪಡಿಸುವುದು. ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಜಿ-ಬ್ಲಾಕ್ ಮೆಟ್ಟಿಂಗ್ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ನಿರ್ಮಾಣ ಮಾಡುವವುದು. ಮಾರುಕಟ್ಟೆ ಪ್ರಾಂಗಣದಲ್ಲಿ ಜಿ-ಬ್ಲಾಕ್ 5 ಮತ್ತು 6ನೇ ಮೆಟ್ಟಿಂಗ್ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ನಿರ್ಮಾಣ, ಮಾರುಕಟ್ಟೆ ಪ್ರಾಂಗಣದ ಹಣ್ಣಿನ ಎಫ್ ಬ್ಲಾಕ್ ರಸ್ತೆಗಳಿಗೆ ಸಿಸಿ ಚರಂಡಿ ನಿರ್ಮಾಣ ಮಾಡುವ ಕಾಮಗಾರಿಯನ್ನು ಪಸ್ತುತ ಹಮ್ಮಿಕೊಳ್ಳಲಾಗಿದೆ.
ಸುಮಾರು 8 ಕೋಟಿ 55 ಲಕ್ಷ ವೆಚ್ಚದಲ್ಲಿ ಹಮ್ಮಿಕೊಂಡಿರುವ ಕಾಮಗಾರಿಯನ್ನು ಶ್ರದ್ಧೆಯಿಂದ ಪೂರೈಸಬೇಕು ಎಂದು ತಿಳಿಸಿದ ಸಚಿವರು ರಾಜ್ಯವು ಸೇರಿದಂತೆ ಎಲ್ಲಾ ಜಿಲ್ಲಾಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವು ಹೆಚ್ಚು ಹೆಚ್ಚು ಅನುದಾನವನ್ನು ಒದಗಿಸುತ್ತಿದೆ. ದಾವಣಗೆರೆ ಜಿಲ್ಲೆಗೆ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನತೆಯ ಅನುಕೂಲಕ್ಕೆ ಅವಶ್ಯಕವಾಗಿರುವ ರಸ್ತೆಗಳು, ನೀರು ಹಾಗೂ ಮೂಲ ಸೌಲಭ್ಯಗಳಿಗೆ ಶ್ರಮಿಸಲಾಗಿತ್ತಿದೆ. ಯಾವುದೇ ಕಾಮಗಾರಿಯು ಕಳಪೆಯಾಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಗಂಗಾಧರಸ್ವಾಮಿ, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರು, ಎಪಿಎಂಸಿಯ ಮಾರುಕಟ್ಟೆಯ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಕೆಪಿಸಿಸಿ ಸದಸ್ಯರು, ಮಹಾನಗರ ಪಾಲಿಕೆಯ ಮಾಜಿ ಸದಸ್ಯರುಗಳು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರುಗಳು, ಗ್ರಾಮ ಪಂಚಾಯ್ತಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಎಲ್ಲಾ ವಿಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.