ದಾವಣಗೆರೆ: (Blast) ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಕಟ್ಟಡದ ಮುಂಬಾಗದ ಬಳಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಲು ಬೃಹತ್ ಬಂಡೆ ಒಡೆಯಲು ಡಿಟೋನೇಟರ್ ಬಳಸಿ ಕಲ್ಲು ಬಂಡೆಯನ್ನು ಬ್ಲಾಸ್ಟ್ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ.
ಚರಂಡಿ ನಿರ್ಮಾಣಕ್ಕೆ ಕಲ್ಲಿನ ಬಂಡೆಯನ್ನು ಒಡೆಯಲು ಯಾವುದೇ ಪರವಾನಿಗೆ ಪಡೆಯದೇ ಕಲ್ಲಿನ ಬಂಡೆಯನ್ನು ಬ್ಲಾಸ್ಟ್ ಮಾಡಿದ ವೇಳೆ ಭಾರಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಜಗಳೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ಬಂಡೆ ಬ್ಲಾಸ್ಟ ನಿಂದ ಕಲ್ಲಿನ ಬೃಹತ್ ಚೂರುಗಳು ಚೆಲ್ಲಾಪಿಲ್ಲಿಯಾಗಿವೆ, ತಾ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ತಾಲ್ಲೂಕು ಕಛೇರಿ ಬಳಿಯ ದೇವೇಗೌಡ ಬಡಾವಣೆ, ಹೌಸಿಂಗ್ ಬೋರ್ಡ್ ಬಡಾವಣೆ, ಸೇರಿದಂತೆ ಜಗಳೂರು ನಗರದ ಜನರು ಆತಂಕಗೊಂಡಿದ್ದರು.
ಭಾನುವಾರ ದಾವಣಗೆರೆಯಿಂದ ಬ್ಲಾಸ್ಟ್ ಮಾಡಿದ್ದ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬೆಂಗಳೂರು ಮೂಲದ ಗುತ್ತಿಗೆದಾರನಿಂದ ಈ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿತ್ತು ಎನ್ನಲಾಗಿದೆ. ಚರಂಡಿ ನಿರ್ಮಾಣ ಸಂದರ್ಭದಲ್ಲಿ ಬೃಹತ್ ಗಾತ್ರದ ಬಂಡೆ ಕಂಡುಬಂದಿದ್ದು ಈ ಬಂಡೆಯನ್ನು ಒಡೆಯಲಾಗದೆ ಡಿಟೋನೇಟರ್ ಬಳಸಿ ಬಂಡೆಯನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಡಿಟೋನೆಟರ್ ಬಳಸಿ ಬಂಡೆ ಹೊಡೆಯಲು ಯಾವುದೇ ಇಲಾಖೆಯಿಂದ ಪರವಾನಿಗೆ ಪಡೆಯದೆ ಇರುವುದು ಬೆಳಕಿಗೆ ಬಂದಿದೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ರಾತ್ರಿ ವೇಳೆ ಶಬ್ದದಿಂದ ಸ್ಥಳೀಯರಲ್ಲಿ ಆತಂಕ ಮೂಡಿತ್ತು, ಬಂಡೆ ಬ್ಲಾಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಹಾಗೂ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.