Fake: ನಕಲಿ ದಾಖಲೆ ಸೃಷ್ಟಿಸಿ ನಿರ್ಮಿತಿ ಕೇಂದ್ರದಲ್ಲಿ ವೃತ್ತಿ.! 12 ಜನರ ವಜಾಕ್ಕೆ ಲೋಕಿಕೆರೆ ನಾಗರಾಜ್ ಡಿಸಿಗೆ ಆಗ್ರಹ

ದಾವಣಗೆರೆ (Fake): ವಿದ್ಯಾರ್ಹತೆ ಪ್ರಮಾಣಪತ್ರಗಳನ್ನು ನಕಲು ಮಾಡಿ ಹಾಗೂ ರಾಜಕೀಯ ಪ್ರಭಾವದಿಂದ ದಾವಣಗೆರೆ ನಿರ್ಮಿತಿ ಕೇಂದ್ರದಲ್ಲಿ 10 ಅಧಿಕಾರಿಗಳು ಸೇರಿದಂತೆ ಇತರೆ ಸಿಬ್ಬಂದಿಗಳನ್ನು ದಾವಣಗೆರೆ ಜಿಲ್ಲಾಧಿಕಾರಿಗಳು ಈ ಕೂಡಲೇ ಅಮಾನತು ಮಾಡಿ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿಯ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಆಗ್ರಹಿಸಿದರು
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ನಿರ್ಮಿತಿ ಕೇಂದ್ರವು ಪರಿಣತರಲ್ಲದ ಇಂಜಿನಿಯರ್ಗಳ ಕೇಂದ್ರವಾಗಿದೆ, ದಾವಣಗೆರೆ ನಿರ್ಮಿತಿ ಕೇಂದ್ರದಿಂದ ಕೈಗೊಳ್ಳುವ ಕಾಮಗಾರಿಗಳು ಆ ದೇವರಿಗೆ ಪ್ರೀತಿ ಪಾತ್ರವಾಗಬೇಕಿವೆ ಎಂದು ವ್ಯಂಗವಾಡಿದರು.
ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ್ದರೂ ಬಿಇ ಇಂಜಿನಿಯರಿಂಗ್ ಪದವಿ ಪಡೆದಿರುವಂತೆ ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯವನ್ನು ಮಾಡುತ್ತಿರುವುದು, ಡಿಪ್ಲೋಮಾ ಫೇಲಾದ ಅಭ್ಯರ್ಥಿಗಳು, ಡಿಪ್ಲೋಮಾವನ್ನು 12 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದವರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿರುವ ಅಧಿಕಾರಿಗಳಿಗೆ ಅನುಭವದ ಕೊರತೆ ಇರುತ್ತದೆ, ಹಾಗೂ ಇವರಲ್ಲಿ ರಾಜಕೀಯ ಮತ್ತು ಹಣಬಲದ ಆಧಾರದ ಮೇಲೆ ನಿರ್ಮಿತಿ ಕೇಂದ್ರದಲ್ಲಿ ನೇಮಕಾತಿಗೊಂಡಿರುವ ಇಲ್ಲಿನ ಇಂಜಿನಿಯರಿಂಗ್ ಸಿಬ್ಬಂದಿಗಳ ಕೆಲಸ ಕಾರ್ಯಗಳಿಂದ ಸಾರ್ವಜನಿಕರ ಮೂಲಭೂತ ಸೌಲಭ್ಯ, ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ
ಕೂಡಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಪ್ರಭಾವಕ್ಕೆ ಒಳಗಾಗಿ ಜಾಣ ಮೌನ ವಹಿಸಿರುವುದು ಖಂಡನೀಯ ಎಂದು
ಹೇಳಿದರು.
ನಿರ್ಮಿತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಾದ
ಕೆ.ಜೆ. ಚಂದನ್, ಯೋಜನಾ ಅಭಿಯಂತರಾದ ಮಂಜುನಾಥ್,
ಎಸ್.ಎಸ್.ಶಿವಕುಮಾರ್, ಮಹಾಂತೇಶ್ ಬಸವನಗೌಡ, ಎಂ.ಗಿರೀಶ್, ವೀರೇಶ್ ಹುಗ್ಗಿ, ಹೆಚ್.ಕೆ.ಶಿವಕುಮಾರ್,
ಜಿ.ಬಿ.ನಾಗರಾಜ್, ವೈ.ಜಯಶ್ರೀ, ಲೆಕ್ಕಿಗ ಎಂ.ರಾಘವೇಂದ್ರ, ಕಚೇರಿ
ಸಹಾಯಕಿ ನಂದಮ್ಮ ವಾಹನ ಚಾಲಕ ಎನ್. ವೆಂಕಟೇಶ್ ಇವರುಗಳ ವಿದ್ಯಾರ್ಹತೆ ಬಗ್ಗೆ ದಾಖಲೆಗಳನ್ನು ತೋರಿಸಿ ಮಾಹಿತಿ ನೀಡಿದರು.
ದಾವಣಗೆರೆ ನಿರ್ಮಿತಿ ಕೇಂದ್ರದಲ್ಲಿ ಅನುತ್ತೀರ್ಣಗೊಂಡ ಮತ್ತು
ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇಲ್ಲದ ಸಿಬ್ಬಂದಿಗಳಿಂದ ಕೈಗೊಂಡಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಮತ್ತು ನೇಮಕಾತಿ ಸಮಯದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸದೇ ಕಾನೂನು ಬಾಹೀರವಾಗಿ ನೇಮಕಗೊಂಡ ಎಲ್ಲಾ ಸಿಬ್ಬಂದಿಗಳನ್ನು ಕೂಡಲೇ ವಜಾಗೊಳಿಸಿ ಇವರ ಮೇಲೆ ನಕಲಿ ದಾಖಲೆ ನೀಡಿ
ಕೆಲಸ ನಿರ್ವಹಿಸುತ್ತಿರುವವರ ಮೇಲೆ ಹಾಗೂ ಇವರುಗಳ ನೇಮಕಾತಿಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ಹಣ ಪೋಲಾಗುವುದನ್ನು ತಪ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೇ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿರುವುದು
ಖಂಡನೀಯವಾಗಿದೆ. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಮೌನವಾಗಿದ್ದಾರೆ. ಈ ಬಗ್ಗೆ ಕೂಡಲೇ ದಾಖಲೆ ಬಿಡುಗಡೆ
ಮಾಡುವಂತೆ ಆಗ್ರಹಿಸಿದರು. ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹಾಲೇಶ್ ನಾಯ್ಕ, ರಾಜು ತೋಟಪ್ಪನವರ, ವಾಟರ್ ಮಂಜು ಇದ್ದರು.