3 ಮಹಾನಗರ ಪಾಲಿಕೆ ಚುನಾವಣೆ ಘೋಷಣೆ: ಆಯೋಗದ ವಿರುದ್ಧ ಅಸಮಾಧಾನ – ಸಚಿವ ಈಶ್ವರಪ್ಪ

ಬೆಳಗಾವಿ: ಕೋವಿಡ್ ಇರುವಂತಹ ಈ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಮೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಿಸುವ ಅಂತಹ ತುರ್ತು ಏನಿತ್ತು ಚುನಾವಣೆ ಆಯೋಗ ತಗೆದುಕೊಂಡಿರುವ ತೀರ್ಮಾನದ ಬಗ್ಗೆ ನನಗೆ ಸಮಾಧಾನ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಬೆಳಗಾವಿ ಸೇರಿ 3 ನಗರಗಳ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೋವಿಡ್ ಇರುವಂತಹ ಸಂದರ್ಭದಲ್ಲಿ ಅಂತಹ ತುರ್ತು ಏನಿತ್ತು? ಮಹಾನಗರ ಪಾಲಿಕೆ ಚುನಾವಣೆ ಮಾಡಲೇಬೇಕು ಅಂತಾ ಏನಿದೆ? ಈಗ ಚುನಾವಣೆ ನಡೆಸಬೇಕೆಂದು ಯಾರು ಕೇಳಿದರು ಎಂದು ಪ್ರಶ್ನಿಸಿದ ಅವರು, ಡಿಸೆಂಬರ್ ವರೆಗೂ ಯಾವ ಚುನಾವಣೆಯೂ ಬೇಡವಾಗಿತ್ತು ಎಂದರು.
ಚುನಾವಣೆ ಘೋಷಣೆ ಏಕೆ ಘೋಷಣೆ ಮಾಡಿದರೋ ನನಗಂತೂ ಆಶ್ಚರ್ಯವಾಗುತ್ತಿದೆ. ಕೋವಿಡ್ ಮೂರನೇ ಅಲೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಪ್ರಧಾನಿ ತಿಳಿಸುತ್ತಿದ್ದಾರೆ. ನ್ಯಾಯಾಲಗಳು ಸಹ ಈ ಬಗ್ಗೆ ಸಲಹೆ ನೀಡುತ್ತಿವೆ. ಆದರೆ, ಇಂತಹ ಹೊತ್ತಲ್ಲಿ ಚುನಾವಣೆ ಆಯೋಗ ಚುನಾವಣೆ ಘೋಷಿಸಿದರೆ ನಾವು
ಯಾರನ್ನು ಕೇಳೋಣ ಎಂದು ಪ್ರಶ್ನಿಸಿದರು.
ಬೆಳಗಾವಿ, ಕಲಬುರಗಿ ಈ ಎರಡು ಜಿಲ್ಲೆಗಳು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿವೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಎದ್ದಿದ್ದು, ಈಗ ಚುನಾವಣೆ ಘೋಷಣೆ ಮಾಡಿದರೆ ಹೇಗೆ? ಆಯೋಗದ ಬಗ್ಗೆ ಹೇಳುವಷ್ಟು ನಾನು ದೊಡ್ಡವನಲ್ಲ. ಚುನಾವಣೆ ಆಯೋಗದವರೇ ಇದನ್ನೇ ಗಮನಿಸಬೇಕು ಎಂದು ಹೇಳಿದರು.
ಇವತ್ತು ಕೋರ್ಟ್ ಅಭಿಪ್ರಾಯ ತಿಳಿಸಲು ಸರ್ಕಾರಕ್ಕೂ ಕೇಳಿದೆ. ಕೋರ್ಟ್ ಇಂಟರಿಮ್ ಆರ್ಡರ್ ಕೊಟ್ಟಿದ್ದಾರೆ. ಎಜಿ ಹತ್ತಿರ ಮಾತನಾಡಿ ಯಾವುದೇ ಕಾರಣಕ್ಕೂ ಚುನಾವಣೆ ಬೇಡ ಅಂತಾ ವರದಿ ಕೊಟ್ಟಿದ್ದೇವೆ. ಅಷ್ಟರಲ್ಲೇ ಚುನಾವಣೆ ಘೋಷಣೆ ಮಾಡಿದರೆ ನಾನೇನು ಹೇಳಲಿ ಎಂದು ಅಸಹನೆ ವ್ಯಕ್ತಪಡಿಸಿದರು.
ಕೋವಿಡ್ ಇರುವುದರಿಂದಲೇ ಅದನ್ನು ನಿಯಂತ್ರಣದಲ್ಲಿಡಲು ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ಮಾಡುತಿದ್ದೇವೆ. ಹಾಗೊಂದು ವೇಳೆ ಚುನಾವಣೆ ಮಾಡುವುದೇ ಅಂತಿಮ ನಿರ್ಧಾರವಾದರೆ ಒಂದು ರಾಜಕೀಯ ಪಕ್ಷವಾಗಿ ನಾವು ನಮ್ಮ ಡ್ಯೂಟಿ ಮಾಡ್ತೀವಿಯಷ್ಟೆ. ಚುನಾವಣೆ ಫೈಟ್ ಮಾಡ್ತೀವಿ ಯಾರು ಗೆಲ್ತಾರೋ ಸೋಲ್ತಾರೋ ಆ ಪ್ರಶ್ನೆ ಬೇರೆ ಎಂದರು.