Explosive Lorry Tyre Puncture: ಸ್ಫೋಟಕ ತುಂಬಿದ ಲಾರಿ ಟೈರ್ ಪಂಕ್ಷರ್.! ಐಜಿ ಸ್ಕ್ವಾಡ್ ವರ್ಗಾವಣೆಯಿಂದ ರೆಕ್ಕೆ ಬಿಚ್ಚಿದ ಅಕ್ರಮ ಸ್ಪೋಟಕ ಸಾಗಾಟ.?

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ 2021 ಜನವರಿ 21 ಮರೆಯಲಾಗದ ದಿನ. ಅಂದು ಶಿವಮೊಗ್ಗದ ಹುಣಸೋಡು ಬಳಿಯ ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಿಂದ 6 ಜನ ಸಾವನ್ನಪ್ಪಿದ್ದರು. ಅಲ್ಲದೆ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಶಯಾಸ್ಪದ ಶಬ್ದ ಕೇಳಿ ಬಂದಿತ್ತು. ಈ ಸ್ಥಳದಲ್ಲಿ ಮೃತರ ಇಬ್ಬರ ಗುರುತು ಇದುವರೆಗೂ ಸಿಗದೇ ಇವತ್ತಿಗೂ ನಿಗೂಢವಾದ ಕೆಲವೊಂದು ವಿಚಾರಗಳು ಜನರಲ್ಲಿ ಆತಂಕ ಮೂಡಿಸುತ್ತಲೇ ಇವೆ.
ಇದೆಲ್ಲದರ ನಡುವೆಯೂ ಈ ಆತಂಕ ಅವರುಗಳಿಗಿಲ್ಲ. ಹಾಗಾಗಿ ಶಿವಮೊಗ್ಗ ಜಿಲ್ಲೆಯನ್ನ ಮತ್ತೆ ಅಪಾಯಕ್ಕೆ ಎಡೆಮಾಡಿಕೊಡುವ ಸಂಭವವಿದೆ. ಟನ್ ಗಟ್ಟಲೆ ಸ್ಫೋಟಕ ತುಂಬಿದ ಲಾರಿ ಶಿವಮೊಗ್ಗ ಸಿಟಿಯಲ್ಲಿ ಯಾವುದೇ ಭಯವಿಲ್ಲದೆ ಸಂಚರಿಸುತ್ತಿದೆ ಹುಣಸೋಡು ರೀತಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದರೆ ಯಾರು ಹೊಣೆ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶಿವಮೊಗ್ಗದ ಹೊರಭಾಗದಲ್ಲಿ ಶೈನ್ ಹೋಟೆಲ್ ಸಮೀಪ ಇವತ್ತು ಬೆಳಗ್ಗೆಯಿಂದಲೂ ಲಾರಿಯೊಂದು ನಿಂತಿತ್ತು. ಮೇಲ್ನೋಟಕ್ಕೆ ಲಾರಿಯ ಮುಂಬಾಗದ ಟೈರ್ ಪಂಚರ್ ಆಗಿತ್ತು, ಅದನ್ನ ಪಂಕ್ಚರ್ ಶಾಪ್ ನ ಕಾರ್ಮಿಕರು ರಿಪೇರಿ ಮಾಡುತ್ತಿದ್ದರು. ಆದರೆ ದಾರಿಯಲ್ಲಿ ನಿಂತಿದ್ದ ಲಾರಿಯಲ್ಲಿ ಏನಿದೆ ಎಂದು ಯಾರು ವಿಚಾರಿಸಿಲ್ಲ. ಅದನ್ನು ಹೇಳುವ ಗೋಜಿಗೂ ಲಾರಿಯ ಸಿಬ್ಬಂದಿ ಹೋಗಿಲ್ಲ. ಆದರೆ ಲಾರಿಯಲ್ಲಿ ಬರೋಬ್ಬರಿ ಹತ್ತು ಟನ್ ಸ್ಪೋಟಕದ ವಸ್ತು ತುಂಬಿಡಲಾಗಿತ್ತು ಎಂಬ ಸಂಶಯವಿದೆ.! ಈ ವಿಚಾರ ತಿಳಿಯುತ್ತಲೇ ಪಂಕ್ಚರ್ ಹಾಕುತ್ತಿದ್ದ ಹುಡುಗರು ಕೂಡ ಹೆದರಿ ದೂರ ಸರಿದಿದ್ದಾರೆ. ಇನ್ನೂ ಜನರನ್ನ ಬೆಚ್ಚಿಬೀಳಿಸುವಂತ ಸ್ಫೋಟಕವನ್ನ ಲಾರಿಯಲ್ಲಿ ತುಂಬಿ ಕೊಂಡು ಕರಾವಳಿಯಿಂದ ಇಲ್ಲಿಯವರೆಗೂ ಸಾಗಿಸಿಕೊಂಡು ಬಂದವರಿಗೆ, ಪಂಕ್ಷರ್ ಶಾಪ್ ಸಿಬ್ಬಂದಿಗೆ ಇದ್ದ ಭಯ ಇವರಿಗೆ ಇರಲಿಲ್ಲ, ಲಾರಿಯವರಿಗೆ ಪ್ರತಿನಿತ್ಯ ಇದು ಮಾಮೂಲಿ ಆಗಿದೆ.
ಹುಣಸೋಡು ಸ್ಫೋಟದ ಬಳಿಕ, ಸ್ಫೋಟಕ ಸಾಗಾಣಿಕೆ ಸಂಬಂಧ ಈ ಹಿಂದೆ ಇದ್ದ ಕಠಿಣವಾಗಿದ್ದ ರೂಲ್ಸ್ ಗಳನ್ನ ಇನ್ನಷ್ಟು ಬಲಿಷ್ಟಗೊಳಿಸಲಾಗಿತ್ತು. ಆದರೆ ಇದನ್ನ ಪಾಲಿಸಲಾಗಿದೆಯಾ.? ಇಲ್ಲವಾ ಅಂತಾ ನೋಡಿದವರು ಕಡಿಮೆ. ನಿಯಮಗಳ ಪ್ರಕಾರ ಸ್ಫೋಟಕ ತುಂಬಿದ ಲಾರಿಗಳನ್ನ ಸಿಟಿಯೊಳಗೆ ಎಲ್ಲಿಯು ನಿಲ್ಲಿಸುವಂತಿಲ್ಲ ನಿಲ್ಕಿಸಿದರೂ ಸಂಬಂದಿಸಿದವರಿಗೆ ಮಾಹಿತಿ ನೀಡಬೇಕು.
ಸ್ಪೋಟಕ ಸಾಗಿಸುವಾಗಲು ತುಂಬಾ ಕಠಿಣವಾದ ನಿಯಮಗಳನ್ನ ಪಾಲಿಸಬೇಕು. ಸೂಕ್ಷ್ಮ ಸ್ಥಿತಿಯಲ್ಲಿ ಹೈ ಮೇಂಟೇನೆನ್ಸ್ ನೊಂದಿಗೆ ಲಾರಿಯನ್ನ ಜಾಗುರುಕತೆಯಿಂದ ಸಾಗಿಸಬೇಕು. ಆದರೆ ಇಲ್ಲಿ ಲಾರಿ ಸಿಬ್ಬಂದಿಗೆ ಯಾವುದೆ ರಕ್ಷಣೆ ಇಲ್ಲದೇ ಸಾಹಾಟ ನಡೆಯುತ್ತಿದೆ. ಅಕ್ಕಿ ಮೂಟೆ ತುಂಬಿಕೊಂಡ ಹಾಗೆ ಲಾರಿಯಲ್ಲಿ ಸ್ಫೋಟಕ ತುಂಬಲಾಗಿದೆ. ಇನ್ನೊಂದೆಡೆ ಯಾವುದೇ ಎಚ್ಚರಿಕೆಯನ್ನ ಇಲ್ಲಿ ವಹಿಸಲಾಗಿಲ್ಲ. ಮಾಹಿತಿಯಾದರಿಸಿ ಲಾರಿ ಇದ್ದ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಪೊಲೀಸರಿಗೆ ಈ ಬಗ್ಗೆ ಯಾವೊಂದು ಮಾಹಿತಿಯು ಇರಲಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ.
ಆರು ಜನರ ಜೀವ ನುಂಗಿದ ಸ್ಫೋಟಕಗಳು ಮತ್ಯೆ ಯಾರ ಜೀವ ಬಲಿ ತೆಗೆಯಬಲ್ಲದು ಎನ್ನುವುದು ಅದನ್ನ ಸಾಗಿಸಬಲ್ಲವರಿಗೆ ಗೊತ್ತಿಲ್ಲದೆ ಇಲ್ಲ. ಆದರೆ ಶಿವಮೊಗ್ಗದ ನಗರದೊಳಗೆ 2 ರಿಂದ ಮೂರು ಲಾರಿಗಳು ಬ್ಲಾಸ್ಟಿಗ್ ಮೆಟಿರಿಯಲ್ ಗಳನ್ನ ಟನ್ ಗಟ್ಟೆಲೆ ತುಂಬಿಸಿಕೊಂಡು ಸಾಗುತ್ತವೆಯಂತೆ. ಇದಕ್ಕೆ ಸಾಕ್ಷಿ ಇವತ್ತು ಪಂಕ್ಚರ್ ಆಗಿ ನಿಂತಿದ್ದ ಲಾರಿ, ಕಾರ್ಕಳ ಮೂಲದ ಕೆಲ್ಟೆಕ್ ಸಂಸ್ಥೆಯ ಲಾರಿ ಸ್ಪೋಟಕವನ್ನು ಸಾಗಿಸಲಾಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಕಾನೂನು ಬದ್ಧವಾಗಿ ಸ್ಫೋಟಕ ಸಾಮಗ್ರಿಗಳನ್ನ, ಅದನ್ನ ಸಾಗಿಸುವ ರೀತಿಯಲ್ಲಿ ಕಡ್ಡಾಯವಾಗಿ ವಹಿಸಲೇಬೇಕಾದ ಎಚ್ಚರಿಕೆಯನ್ನು ವಹಿಸಿಲ್ಲ ಎನ್ನುವುದು ಸ್ಪೋಟಕ ಲಾರಿಯನ್ನ ನೋಡಿದ್ರೆ ಗೊತ್ತಾಗುತ್ತೆ. ! ಈ ಸಂಬಂಧ ಪೊಲೀಸರಿಗೂ ಸ್ಫೋಟಕ ಸಾಗಾಟದ ಬಗ್ಗೆ ಮಾಹಿತಿಯಿರಲಿಲ್ಲ ಎನ್ನುವುದು ಸಹ ವ್ಯವಸ್ಥೆಯಲ್ಲಿ ಲೋಪ ಇದೆ ಎನ್ನುವ ಸಂಶಯ ಮೂಡಿಸುತ್ತಿದೆ.
ಇನ್ನೂ ಹೆಬ್ರಿ, ತೀರ್ಥಹಳ್ಳಿ ಮೂಲಕ ರಸ್ತೆ ಮೂಲಕ ಹೊಳೆಹೊನ್ನೂರು, ಚಿತ್ರದುರ್ಗ, ದಾವಣಗೆರೆಯಲ್ಲಿನ ವ್ಯಕ್ತಿಗಳಿಗೆ ಈ ಸ್ಫೋಟಕಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಶಿವಮೊಗ್ಗ ನಗರದ ಮುಖ್ಯರಸ್ತೆಯ ಬದಿಯಲ್ಲಿ ನಿಂತಿದ್ದ ಸ್ಫೋಟಕ ತುಂಬಿದ ಲಾರಿ ಎನ್ನುವ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಲಾರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಹುಣಸೋಡು ಘಟನೆ ನಡೆದು ಕೆಲವೇ ದಿನಗಳಲ್ಲಿ ಮತ್ತೆ ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ಗೆ ಪರ್ಮಿಶನ್ ನೀಡಲಾಗಿತ್ತು. ಅದಕ್ಕೆ ಬೇಕಾದ ಮೆಟಿರಿಯಲ್ಸ್ ಸಾಗಾಣಿಕೆಗೂ ಕಠಿಣ ನಿಯಮದೊಂದಿಗೆ ಅನುಮತಿ ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಈ 9 ತಿಂಗಳಿನಲ್ಲಿ ಶಿವಮೊಗ್ಗ ನಗರದಲ್ಲಿ ಹಲವು ಸಲ ಸ್ಫೋಟಕ ತುಂಬಿದ ಲಾರಿಗಳು ಒಡಾಡಿವೆ. ಆದರೆ ಎಚ್ಚರಿಕೆ ವಹಿಸುವ ಕೆಲಸ ಹಾಗೂ ಜನರ ಪ್ರಾಣ ರಕ್ಷಣೆಯ ಮಹತ್ವವನ್ನು ಯಾರೊಬ್ಬರು ಕಾಳಜಿ ಮಾಡುತ್ತಿಲ್ಲ ಎನ್ನುವುದಕ್ಕೆ ಇವತ್ತು ಜನ ಸಂಧಣಿ ನಡುವೆ ಅನಾಥವಾಗಿ ಎಚ್ಚರಿಕೆ ನೀಡುತ್ತಿದ್ದ ಲಾರಿಯೇ ಸಾಕ್ಷಿ. ಅದೃಷ್ಟಕ್ಕೆ ನಿಂತ ಲಾರಿಯಲ್ಲಿ ಸ್ಫೋಟಕಗಳಿಂದ ಯಾವುದೇ ತೊಂದರೆಯಾಗಿಲ್ಲ, ಏನಾದ್ರೂ ಗೃಹಚಾರ ಕೆಟ್ಟು ಅನಾಹುತ ಸಂಭವಿಸಿದ್ರೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡುತ್ತಿದೆ.
“ಐಜಿಪಿ ತಂಡಕ್ಕೆ ಬೆದರಿದ್ದ ಸ್ಪೋಟಕ ಸಾಗಾಟದಾರರು”
ಇತ್ತೀಚೆಗೆ ಪೂರ್ವ ವಲಯ ಐಜಿಪಿ ತಂಡ ಸ್ಪೋಟಕ ಸಾಗಿಸುವವರಿಗೆ ಎಡೆಮುರಿ ಕಟ್ಟಿದ್ದರು. ಆದರೆ ಐಜಿಪಿ ತಂಡದವರು ವರ್ಗಾವಣೆಯಾದ ಸುದ್ದಿ ಮಿಂಚಿನ ರೂಪದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದವರಿಗೆ ಮುಟ್ಟಿದೆ. ಇದರಿಂದ ಎಗ್ಗಿಲ್ಲದೆ ಅಕ್ರಮವಾಗಿ ನಿಯಮಬಾಹಿರವಾಗಿ ಯಾವುದೇ ಸರಿಯಾದ ನಿಯಮ ಪಾಲಿಸದೇ ಸ್ಫೋಟಕಗಳನ್ನು ಸಾಗಾಟ ಹಾಗೂ ಮಾರಾಟ ನಡೆಸುತ್ತಿದ್ದಾರೆ ಎಂಬುದು ಈ ಘಟನೆಯಿಂದ ಗೊತ್ತಾಗುತ್ತಿದೆ.