Mayor breakfast: ಪೌರಕಾರ್ಮಿಕರ ಜೊತೆ ಉಪಹಾರ ಸೇವಿಸಿದ ಮೇಯರ್ ವಿರೇಶ್

ದಾವಣಗೆರೆ: ಅಧಿಕಾರದ ಕುರ್ಚಿ ಏರಿದರೆ ಸಾಕು ಹಮ್ಮು-ಬಿಮ್ಮು ಬರುವ ಮಂದಿಯೇ ಅಧಿಕ. ಆದರೆ, ಇದಕ್ಕೆ ಮೇಯರ್ ಎಸ್.ಟಿ. ವೀರೇಶ್ ವಿರುದ್ಧವೇ ಎನ್ನಬಹುದು!
ಅರೇ ಇದ್ಯಾಕೆ ಅಂತಿರಾ? ಕೆಳಮಟ್ಟದಿಂದ ಬೆಳೆದಯ ಬಂದು ಈಗ ಮೇಯರ್ ಕುರ್ಚಿ ಅಲಂಕರಿಸಿರುವ ಮೇಯರ್ ವೀರೇಶ್ ಇತ್ತೀಚೆಗಷ್ಟೆ ಪಾಲಿಕೆ ಎದುರಿರುವ ರೈಲ್ವೆ ಅಂಡರ್ ಪಾಸ್ ನಲ್ಲಿ ನಿಂತಿದ್ದ ಕೊಳಚೆ ನೀರು, ಕಸ-ಕಡ್ಡಿಗಳನ್ನೆಲ್ಲಾ ಸ್ವತಃ ತಾವೆ ಎತ್ತಿ ಹಾಕಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟು ಸುದ್ದಿಯಾಗಿದ್ದರು. ಈಗ ಪಾರ್ಕ್ ಕೂಡ ಸ್ವಚ್ಛಗೊಳಿಸಿ ಸುದ್ದಿಯಾಗಿದ್ದಾರೆ.
ಈಗ ಅದೇ ಮೇಯರ್ ವೀರೇಶ್ ಅವರು ಪೌರಕಾರ್ಮಿಕರೊಂದಿಗೆ ಕುಳಿತು ಉಪಹಾರ ಸೇವಿಸಿದ್ದಾರೆ! ಇತ್ತೀಚೆಗೆ ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲೂ ಕೂಡ ವೀರೇಶ್ ಅವರು ಯಾವ ಕೆಲಸವೂ ಮೇಲಲ್ಲ, ಇನ್ನ್ಯಾವ ಕೆಲಸವೂ ಕೀಳಲ್ಲ ಎಂದಿದ್ದರು. ನಡೆ ನುಡಿಯಲ್ಲೂ ಒಂದೇ ಆಗಿರುವ ಮೇಯರ್ ಅವರು ಇಂದು ಮಹಾನಗರ ಪಾಲಿಕೆಯ ವಾರ್ಡ್ ನಂ 25 ರಲ್ಲಿ ಬರುವ ಡಿಸಿಎಂ ಬಡಾವಣೆಯ ವಿವೇಕಾನಂದ ಪಾರ್ಕಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ತಮ್ಮ ನೇತೃತ್ವದಲ್ಲಿ ನಡೆಸಿ. ನಂತರ ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿ ಸರಳತನ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಎಂ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ತಿರುಮಲೇಶ, ಉಮೇಶ್ ಗುಜ್ಜಾರ್, ನಾಗರಾಜ್ ಕೆ,ಹುಲಿಕಟ್ಟೆ ರಾಜು, ಬಸವರಾಜ ಅಂಗಡಿ, ಶಿವನಪ್ಪ, ಅಕ್ಕಿ ವೀರಭದ್ರಪ್ಪ ಹಾಗೂ ಪೌರಕಾರ್ಮಿಕರು ಮತ್ತು ಬಿಜೆಪಿ ಕಾರ್ಯಕರ್ತರು ಮೇಯರ್ ಗೆ ಸಾತ್ ನೀಡಿದರು.