ಇಎಸ್‍ಐ ಆಸ್ಪತ್ರೆಯಲ್ಲಿ 80 ಬೆಡ್ ವ್ಯವಸ್ಥೆ : ಡಿಸಿ ಮಹಾಂತೇಶ್ ಭೀಳಗಿ ಪರಿಶೀಲನೆ

dc at esi

ದಾವಣಗೆರೆ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನಗರದ ಇಎಸ್‍ಐ ಆಸ್ಪತ್ರೆಯಲ್ಲಿ 80 ಬೆಡ್ ವ್ಯವಸ್ಥೆಯುಳ್ಳ ಕೋವಿಡ್ ಸೆಂಟರ್ ತೆರೆಯುವ ಬಗ್ಗೆ ಪರಿಶೀಲಿಸಿ ವೈದ್ಯರುಗಳೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚರ್ಚೆ ನಡೆಸಿದರು.

ಬುಧವಾರ ಇಎಸ್‍ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಇಎಸ್‍ಐ ಆಸ್ಪತ್ರೆಯಲ್ಲಿ 40 ಆಕ್ಸಿಜನ್ ಮತ್ತು 40 ಐಸೊಲೇಶನ್ ಬೆಡ್‍ಗಳು ಸೇರಿದಂತೆ ಒಟ್ಟು 80 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಬೇಕಾದ ಅಗತ್ಯತೆಗಳ ಬಗ್ಗೆ ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ವೇಳೆ ಇಎಸ್‍ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಸವನಗೌಡ ಮಾತನಾಡಿ, ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆಗೆ 19 ಪಾಯಿಂಟ್‍ಗಳು ಇದ್ದು, ಅದರಲ್ಲಿ 2 ಕಡೆ ಲೀಕೇಜ್ ಆಗುತ್ತಿದೆ. ಆಸ್ಪತ್ರೆಯಲ್ಲಿ ಒಬ್ಬ ಟೆಕ್ನೀಷಿಯನ್ ಇದ್ದು ಇನ್ನೊಬ್ಬರ ಅಗತ್ಯವಿದೆ. ಹಾಗೂ ಬೆಡ್, ಸಿಲಿಂಡರ್ ವ್ಯವಸ್ಥೆ, ಫ್ಯಾನ್ ಸೇರಿದಂತೆ ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲ ಕೊರತೆ ಇದ್ದು, ಸಾಧ್ಯವಾದಷ್ಟು ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ತಾವು ಬದ್ಧರಿದ್ದೇವೆ ಎಂದರು.
ಅರಿವಳಿಕೆ ತಜ್ಞೆ ಡಾ.ನಂದಿನಿ ಮಾತನಾಡಿ, ಆಸ್ಪತ್ರೆಯಲ್ಲಿ ಐಸಿಯು ಇಲ್ಲವಾದ್ದರಿಂದ ಇಲ್ಲಿರುವ ಸಿಬ್ಬಂದಿಗಳಿಗೆÉ ಐಸಿಯು ನಿರ್ವಹಣೆ ಅನುಭವ ಇಲ್ಲ. ಅವರಿಗೆ ಒಂದು ವಾರದ ಮಟ್ಟಿಗೆ ತರಬೇತಿ ಕೊಟ್ಟಲ್ಲಿ ಅನುಕೂಲವಾಗುತ್ತದೆ. ಈಗಾಗಲೇ ಆಸ್ಪತ್ರೆಯಲ್ಲಿ 19 ಬೆಡ್‍ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದೆ. 11 ಜಂಬೋ ಸಿಲಿಂಡರ್‍ಗಳು, 26 ಸಣ್ಣ ಸಿಲಿಂಡರ್‍ಗಳು ಹಾಗೂ 15 ಔಟ್‍ಲೆಟ್‍ಗಳು ಬೇಕಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗೆ 100 ಜಂಬೋ ಸಿಲಿಂಡರ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ವಹಿಸಲಾಗುವುದು. ಆಸ್ಪತ್ರೆಗೆ ಬೇಕಾದ 70 ಮಂಚಗಳನ್ನು ಹೊರಗಡೆಯಿಂದ ತರಿಸುತ್ತೇವೆ. ಹಾಗೂ ಕಾಟನ್ ಬೆಡ್, ಫ್ಯಾನ್, ಐವಿ ಡ್ರಿಪ್, ಆಕ್ಸಿಜನ್ ಸಿಲಿಂಡರ್, ಬಿಪಿ ಆಪರೇಟರ್ಸ್‍ಗಳನ್ನು ದಾನಿಗಳಿಂದ ಪೂರೈಸುತ್ತೇವೆ. ಅಲ್ಲದೇ ಆಸ್ಪತ್ರೆಗೆ ಬೇಕಾದ ಟ್ರಾಲಿಗಳು, ವ್ಹೀಲ್‍ಚೇರ್‍ಗಳು, ಐವಿ ಸ್ಟ್ಯಾಂಡ್ ಇತರೆ ಸವಲತ್ತುಗಳ ಕುರಿತು ಮಾಹಿತಿ ನೀಡಿದರೆ ಜಿಲ್ಲಾಡಳಿತದಿಂದ ಪೂರೈಸುತ್ತೇವೆ ಎಂದರು.

ಆಸ್ಪತ್ರೆಯಲ್ಲಿ ಈಗಾಗಲೇ ಹೊರರೋಗಿಗಳ ಚಿಕಿತ್ಸೆ ನಡೆಯುತ್ತಿದ್ದು ಈ ವ್ಯವಸ್ಥೆಗೆ ಧಕ್ಕೆ ಆಗದಂತೆ ಕೋವಿಡ್ ಸೆಂಟರ್‍ನ್ನು ತೆರೆಯಬೇಕು. ಸಾಮಾನ್ಯ ರೋಗಿಗಳು ಹಾಗೂ ಕೋವಿಡ್ ಸೋಂಕಿತ ರೋಗಿಗಳಿಗೆ ಪ್ರತ್ಯೇಕ ದ್ವಾರಗಳನ್ನು ಮಾಡಬೇಕು ಹಾಗೂ ಸಂಬಂಧಪಟ್ಟ ವೈದ್ಯರು, ಸಿಬ್ಬಂದಿಗಳು ಸಹ ಆಯಾ ದ್ವಾರಗಳ ಮೂಲಕವೇ ಹೋಗಿಬರಬೇಕು. ಹಾಗೂ ಸೋಂಕಿತರಿಗೆ ಬಿಸಿನೀರು ವ್ಯವಸ್ಥೆ ಮಾಡಲು ಮತ್ತು ಆಸ್ಪತ್ರೆಗೆ ಬಂದ ರೋಗಿಗಳು ಬಿಸಿ ನೀರು ಕುಡಿಯಲು 2 ಯೂನಿಟ್‍ಗೆ ಒಂದರಂತೆ ಸ್ಟೌವ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಸಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜಯ್ ಮಾತನಾಡಿ, ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಇಲ್ಲ. ಎಕ್ಸ್‍ರೇ ಯೂನಿಟ್ ಇದೆ ಆದರೆ ಫಿಲ್ಮ್‍ಗಳು ಇಲ್ಲ. ಆದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಮೊದಲ ಹಂತದ ಚಿಕಿತ್ಸೆ ಪೂರೈಸಿದ ಬಳಿಕ ಚೇತರಿಸಿಕೊಂಡ ರೋಗಿಗಳನ್ನು ಈ ಆಸ್ಪತ್ರೆಗೆ ವರ್ಗಾವಣೆ ಮಾಡಬಹುದು ಎಂದರು..

 ಕೋವಿಡ್ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಡಿ ಗ್ರೂಪ್ ನೌಕರ ವರ್ಗದವರು ಸೇರಿ ಒಟ್ಟು 3 ತಂಡಗಳನ್ನು ರಚಿಸಿಕೊಳ್ಳಬೇಕು. ಪ್ರತಿ ತಂಡಕ್ಕೂ 3 ವೈದ್ಯರು, 3 ಸ್ಟಾಫ್ ನರ್ಸ್, 3 ಡಿ-ಗ್ರೂಪ್ ಸೇರಿದಂತೆ 9 ಜನರ ತಂಡ ರಚಿಸಬೇಕು. ಮಹಾಂತೇಶ್ ಭೀಳಗಿ ಜಿಲ್ಲಾಧಿಕಾರಿ.

ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಈಗಾಗಲೇ ಮನವಿ ಮಾಡಲಾಗಿದೆ. ಪ್ರತಿ ಆಸ್ಪತ್ರೆಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಆಸ್ಪತ್ರೆಯ ಪ್ರತಿ ವಿಭಾಗದ ವರದಿಯನ್ನು ನೋಡಿಕೊಳ್ಳುವ ಮೂಲಕ ಪ್ರತಿನಿತ್ಯ ವರದಿ ನೀಡುತ್ತಿದ್ದಾರೆ. ಅನಗತ್ಯವಾಗಿ ಆಕ್ಸಿಜನ್ ಬಳಕೆ ಮಾಡಬಾರದು. ಅದನ್ನು ಔಷಧಿಯಂತೆ ಸಮರ್ಪಕವಾಗಿ ಬಳಸಬೇಕು ಎಂದು ತಿಳಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿರುವ ವೈದ್ಯರು ಅನಗತ್ಯವಾಗಿ ಅಲ್ಲಿರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಗುಣಮುಖರಾಗುವ ರೋಗಿಗಳನ್ನು ಆದಷ್ಟು ಅಲ್ಲಿಯೇ ಚಿಕಿತ್ಸೆ ನೀಡಬೇಕೇ ಹೊರತು ನಗರದ ಆಸ್ಪತ್ರೆಗಳಿಗೆ ಕಳುಹಿಸಬಾರದು ಎಂದು ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್‍ನಾಯಕ್, ಆರ್.ಎಂ.ಒ ಡಾ.ಸಂಧ್ಯಾರಾಣಿ, ಹಿರಿಯ ತಜ್ಞ ಡಾ.ಅಣ್ಣಪ್ಪಸ್ವಾಮಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಚಿದಾನಂದ್, ಡಾ.ನಂದಿನಿ, ಡಾ.ಚಂದನ, ಡಾ.ಪ್ರಸನ್ನ, ಡಾ.ಅನಿತರಾಣಿ ಸೇರಿದಂತೆ ಹಿರಿಯ ತಜ್ಞರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!