ಅಕಾಲಿಕವಾಗಿ ಅಗಲಿದ ಪುನೀತ್.! ಕಂಬನಿ ಮಿಡಿದ ಸಚಿವ ಕಾರಜೋಳ

ಬೆಂಗಳೂರು: ಆಡಿಸಿ ನೋಡು, ಬೀಳಿಸಿ ನೋಡು,ಎಂದೂ ಸೋಲದು, ಸೋತು ತಲೆಯಾ ಬಾಗದು, ಎಂದು ಹೇಳುತ್ತಲೇ ನಮ್ಮನ್ನೆಲ್ಲಾ ಅಗಲಿದ *ಪುನೀತ್ ರಾಜ್ ಕುಮಾರ್* ಅವರು ನಮ್ಮ ಗಂಧದ ಗುಡಿಯ ನಿಜವಾದ ರಾಜರತ್ನ ಎಂದು ಜಲಸಂಪನ್ಮೂಲ ಸಚಿವ ಶ್ರೀ ಗೋವಿಂದ ಕಾರಜೋಳ ಕಂಬನಿ ಮಿಡಿದಿದ್ದಾರೆ.
ಪವರ್ ಸ್ಟಾರ್ ಆಗಿದ್ದರೂ ಯಾವುದೇ ಗರ್ವವಿಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಸಚಿವ ಕಾರಜೋಳ ಕಂಬನಿ ಮಿಡಿದಿದ್ದಾರೆ.
ತಂದೆ ಡಾ.ರಾಜ್ ಕುಮಾರ್ ಅವರಂತೆಯೆ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಪುನೀತ್, ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅವರ ಅಭಿನಯ ಜನ ಮಾನಸದಲ್ಲಿ ಅಚ್ಚಳಿಯದೇ ನಿಂತಿದೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ನಾಯಕ ನಟನಾಗಿ ಅನೇಕ ಚಿತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದ ಪುನೀತ್ ಅವರ ಮೃತ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಗೋವಿಂದ ಕಾರಜೋಳ ಪ್ರಾರ್ಥಿಸಿದ್ದಾರೆ.