ಕನ್ನಡತ್ವವು ವಿಶ್ವವ್ಯಾಪಿ, ಕನ್ನಡಿಗರ ಹೃದಯದಲ್ಲಿ ಕನ್ನಡವೇ ಇರಲಿ

ದಾವಣಗೆರೆ: ಕನ್ನಡನುಡಿ (ಭಾಷೆ) ಅನೇಕ ಆವಸ್ಥೆಗಳನ್ನು, ಪ್ರಭೇಧಗಳನ್ನು, ಉಪಪ್ರಭೇದಗಳನ್ನು ಹೊಂದುತ್ತ ಕಾಲಕಾಲಕ್ಕೆ ಅನೇಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ ಬೆಳವಣಿಗೆ ಹೊಂದಿದೆ. ಕನ್ನಡದ ಮೊಟ್ಟ ಮೊದಲನೆಯ ಉಪಲಬ್ಧ ಶಾಸನ `ಹಲ್ಮಿಡಿ’ ಶಾಸನವಾದರೆ, ಮೊಟ್ಟಮೊದಲ ಉಪಲಬ್ಧ ಗ್ರಂಥ `ಕವಿರಾಜಮಾರ್ಗ’. ಮಾನ್ಯಖೇಟದ ಚಕ್ರವರ್ತಿ ರಾಷ್ಟ್ರಕೂಟ ದೊರೆ ನೃಪತುಂಗನ ಆಸ್ಥಾನಕವಿ (ಕ್ರಿ.ಶ. 814-880) ಶ್ರೀವಿಜಯ ರಚಿಸಿದ್ದು, ಅದರಲ್ಲಿ `ಕಾವೇರಿಯಿಂದ ಗೋದಾವರಿವರೆಗೆ ವಿರ್ದನಾಡದಾ ಕನ್ನಡದೊಳ್’ ಎಂದು ಹೇಳಿರುವುದನ್ನು ಗಮನಿಸಿದರೆ, ಕನ್ನಡನಾಡಿನ ವಿಸ್ತಾರದ ಸ್ಪಷ್ಟತೆ ಆಗುವುದು.
ಕನ್ನಡ ಬೆಳೆಸಿದ ಅರಸು ಮನೆತನಗಳು:
ಕನ್ನಡ ಅರಸು ಮನೆತನಗಳು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದ್ದರ ಪರಿಣಾಮವಾಗಿ ಕನ್ನಡ ಭಾಷೆಯ ಪ್ರಭಾವ ರಾಜಕೀಯವಾಗಿ, ಸಾಂಸ್ಕøತಿವಾಗಿ ಹಾಗೂ ಭಾಷಿಕವಾಗಿ ಅನೇಕ ಪ್ರದೇಶಗಳಲ್ಲಿ ಆಗಿದೆ. ಗಂಗರ ರಾಜಧಾನಿ `ಕಳಿಂಗ’ ನಗರವಾಗಿದ್ದರೆ, ಕದಂಬರ ಒಂದು ಶಾಖೆ ಓರಿಸ್ಸಾದ ಭುವನೇಶ್ವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿತ್ತು. ಚಾಲುಕ್ಯರು ಆಂಧ್ರದಲ್ಲಿ ರಾಜ್ಯವಾಳಿದರು. ಮಹಾರಾಷ್ಟ್ರದಲ್ಲಿ ಧಾರಾಶ್ರಯ ಜಯಸಿಂಹವರ್ಮ ಆಳಿದನು. ಹೀಗಾಗಿ ಮರಾಠಿ, ಕೊಂಕಣಿ, ತುಳು, ಗುಜರಾತಿ, ತೆಲುಗು ಹಾಗೂ ಬಂಗಾಲ ಭಾಷೆಗಳ ಮೇಲೂ ಕನ್ನಡದ ಪ್ರಭಾವವನ್ನು ಗುರುತಿಸಬಹುದು.
ಕನ್ನಡ ಲಿಪಿಯ ಮಾತುೃಮೂಲ `ಬ್ರಾಹ್ಮಿಲಿಪಿ’:
ಕರ್ನಾಟಕದಲ್ಲಿ ಕಂಡು ಬರುವ ಪ್ರಥಮ ಬರವಣಿಗೆ ಅಶೋಕನ ಶಾಸನ (ಕ್ರಿ.ಶ.ಪೂ. 300) ಕನ್ನಡ ಲಿಪಿಯ ಮಾತುೃಮೂಲ `ಬ್ರಾಹ್ಮಿಲಿಪಿ’. ಹೀಗಾಗಿ ಬ್ರಾಹ್ಮಿಲಿಪಿ ಕರ್ನಾಟಕದಲ್ಲಿ ವಿಕಸನಗೊಳ್ಳುತ್ತ ಕನ್ನಡ ಬರವಣೆಗೆಗಳು ಆರಂಭಗೊಂಡಿವೆ. ಸಮಸ್ತ ಭಾರತದ ಶಾಸನದಲ್ಲಿ `ಕನ್ನಡ’ವನ್ನು ಸಂಸ್ಕøತದ ಮಗ್ಗಲಿಗೆ ನಿಲ್ಲಿಸಿದವರು ಈ ನಾಡಿನ ಶಾಸನ ಕವಿಗಳು. ನೃಪತುಂಗ ಹೇಳುವಂತೆ ಗದ್ಯ, ಪದ್ಯ ಗ್ರಂಥ ಕತುೃಗಳಾದ ವಿಮಲ, ಉದಯ, ನಾಗಾರ್ಜುನ, ಜಯಸಿಂಧು, ದುರ್ವಿನೀತ, ಶ್ರೀವಿಜಯ, ಕವೀಶ್ವರ ಹಾಗೂ ಚಂದ್ರಲೋಕಪಾಲ ಮುಂತಾದ ಕವಿಗಳು ಕನ್ನಡ ನಾಡಿನವರು.ಒಂದು ಭಾಷೆಯನ್ನು ಮತ್ತು ಅದರ ಸಾಹಿತ್ಯದ ಉನ್ನತಿಯನ್ನು ಕವಿಗಳ ಸಂಖ್ಯೆಯಿಂದ ನಿರ್ಣಯಿಸಲು ಅಸಾಧ್ಯ. ಇದುವರಿಗೆ ಸಿಕ್ಕಿರುವ ಆಧಾರಗಳಿಂದ ಕನ್ನಡ ಸಾಹಿತ್ಯದ ಆರಂಭದ ಕಾಲ 5ನೆಯ ಶತಮಾನವೆಂದು ತಿಳಿದು ಬಂದಿದೆ. 5 ರಿಂದ 9ನೆಯ ಶತಮಾನದವರೆಗೆ ಶಾಸನಗಳೇ ಹೆಚ್ಚಾಗಿ ದೊರೆತ ಪ್ರಯುಕ್ತ ಈ ಕಾಲವನ್ನು ಶಾಸನಯುಗ ಎಂದು ಕರೆಯಲಾಗಿದೆ.
ಕನ್ನಡ ನುಡಿ, ಸಾಹಿತ್ಯಕ್ಕೆ ಜೈನರ ಕೊಡುಗೆ:
ಕರ್ನಾಟಕದ ಪ್ರಾಚೀನ ಕಾಲದ ರಾಜಕೀಯ ಶಕ್ತಿ ಹೆಚ್ಚಾಗಿ ಜೈನ ಮತಾವಲಂಬಿಗಳ ಕೈಯಲ್ಲಿ ಇದ್ದುದರಿಂದ ಕನ್ನಡ ನುಡಿ, ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ. ಕನ್ನಡದ ಮೊದಲ ಗ್ರಂಥ `ಕವಿರಾಜಮಾರ್ಗ’ ಜೈನ ಕವಿಯದ್ದು. ಆತನೇ ಶ್ರೀವಿಜಯ ಕನ್ನಡ ಭಾಷೆಗೆ ಜೈನರೇ ಆದಿಕವಿಗಳು. ಕನ್ನಡ ಭಾಷೆಯ ಸೌಂದರ್ಯ ಮತ್ತು ಕಾಂತಿಗಳಿಗೆ ಕಾರಣೀಭೂತರು. ವೈದಿಕ ಧರ್ಮಾನುಯಾಯಿಗಳು ಸಂಸ್ಕøತ ಪ್ರೀಯರಾದ ಕಾರಣ `ಕನ್ನಡದತ್ತ’ ಗಮನಹರಿಸಲಿಲ್ಲ. ಜೈನ ಧರ್ಮದ ಸಾಹಿತ್ಯವೆಂದರೆ ಕನ್ನಡ ಸಾಹಿತ್ಯವೇ ಆಗಿದೆ. ಕನ್ನಡದ ಆದಿ ಕವಿ ಪಂಪನಯುಗವು ಜೈನ ಕವಿಗಳದ್ಧೇ ಆಗಿದೆ. ಹೀಗಾಗಿ ಕನ್ನಡ ಸಾರಸ್ವತ ಲೋಕಕ್ಕೆ ಜೈನರು ನೀಡಿದ ಕೊಡುಗೆ ಅಪಾರ.
ಕನ್ನಡ ಭಾಷೆಗೆ ವಚನಕಾರರ ಪಾತ್ರ:
ಸಾಹಿತ್ಯ ಮಾನ್ಯವಾಗಬೇಕಾದರೆ ಜನಸಾಮಾನ್ಯರಿಂದ ರಚಿತವಾಗಿ ಜನತೆಗೆ ಉಪಯೋಗವಾಗಬೇಕು ಎಂಬುದು ವಚನಕಾರರ ಆಶಯವಾಗಿತ್ತು. ವಚನಸಾಹಿತ್ಯ ಅಚ್ಚ ಕನ್ನಡದಲ್ಲಿ ಆಡು ಭಾಷೆಯಲ್ಲಿ ರಚನೆಗೊಂಡು ಜನಸಮುದಾಯವನ್ನು ಎಚ್ಚರಗೊಳಿಸುವಲ್ಲಿ, ಕನ್ನಡ ನಾಡು, ನುಡಿ ಬೆಳವಣಿಗೆಯಲ್ಲಿ ವಚನಕಾರರ ಪಾತ್ರ ಹಿರಿದಾದುದು. ಹನ್ನರಡನೆಯ ಶತಮಾನದಲ್ಲಿಯ ಶರಣ ಸಮುದಾಯ ನಾಡು-ನುಡಿಗೆ ಘನತೆ ತರುವಲ್ಲಿಯ ಪ್ರಯತ್ನ ಶ್ರೇಷ್ಠವಾದದ್ದು.
ಕನ್ನಡದ ಮೇಲೆ ಉರ್ದುಭಾಷೆಯ ಪ್ರವೇಶ:
ಕನ್ನಡನಾಡು ಮಹಮ್ಮದೀಯ ರಾಜರ ಕೈವಶವಾಗಿ ಕನ್ನಡದಲ್ಲಿ ಉರ್ದುಭಾಷೆ ಬೆರೆಯಿತು. ಕ್ರಿ.ಶ. 1349 ರಿಂದ 1700ರ ವರೆಗೆ ನಾಲ್ಕುನೂರು ವರ್ಷಗಳ ಕಾಲ ಕನ್ನಡನಾಡು ಸುಲ್ತಾನರ ಕೈವಶದಲ್ಲಿದ್ದ ಪ್ರಯುಕ್ತ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಮೇಲೆ ಇಸ್ಲಾಂಭಾಷೆಯ ಪ್ರಭಾವವಾಯ್ತು. ಕನ್ನಡಿಗರ ಸಂಸ್ಕøತಿ, ನಡೆ-ನುಡಿಗಳು, ಜೀವನ ವಿಧಾನದ ಮೇಲೆ ಉರ್ದುಭಾಷೆ ತನ್ನ ಪ್ರಭಾವದ ಮುದ್ರೆಯನ್ನೊತ್ತಿದೆ.
ಹೈದ್ರಾಬಾದ್ ಕರ್ನಾಟಕದ ಕನ್ನಡ ಭಾಷೆ:
ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ)ದ ಕನ್ನಡ ಭಾಷೆಯಲ್ಲಿ ಅನೇಕ ಉರ್ದು ಪದಗಳು ಕಾಣಸಿಗುತ್ತವೆ. ಕರ್ನಾಟಕದ ಗಡಿಸೀಮೆಗಳಲ್ಲಿ ಉರ್ದು-ಕನ್ನಡ, ಮರಾಠಿ-ಕನ್ನಡ, ತೆಲುಗು-ಕನ್ನಡ, ಈ ನಾಲ್ಕು ಭಾಷೆಗಳು ಒಟ್ಟೊಟ್ಟಿಗೆ ಇರುವ ಭಾಷಿಕ ಪರಿಸರವನ್ನು ಈ ಪ್ರದೇಶದಲ್ಲಿ ಕಾಣಬಹುದು.
ಕನ್ನಡ ಭಾಷೆ ಬೆಳಗಿಸಿದ ಹರಿದಾಸರು:
ಕನ್ನಡವನ್ನು ಸಂಗೀತ ಭಾಷೆಯನ್ನಾಗಿಸಿದವರು ಹರಿದಾಸರು, ಕನ್ನಡದಲ್ಲಿ ಕೀರ್ತನೆ ಎಂಬುದು ಹೊಸದಲ್ಲವಾದರೂ, ವೈದಿಕ ಪರಂಪರೆಯಿಂದ ಬಂದದ್ದೆಂಬುದು ದೂರದಮಾತು. ಕನ್ನಡದಮಟ್ಟಿಗೆ ಭಜನೆಗಳಿದ್ದವು. ಆ ಮೇಲೆ ಶಿವಶರಣರು ಪದಗಳನ್ನು ಹಾಡಿದರು. ಅದೇ ಹರಿದಾಸರ ಬಾಯಲ್ಲಿ ಕೀರ್ತನೆ, ಅಂದರೆ ಹರಿಸ್ತುತಿ ಪರವಾದ ಹಾಡಾಯಿತು. ಹರಿದಾಸರ ಕೀರ್ತನೆಗಳಲ್ಲಿ ಸಾಹಿತ್ಯ ರಚನೆಯ ಉದ್ಧೇಶವಿರಲಿಲ್ಲ. ಅವೆಲ್ಲ ದೈನಂದಿನ ಅಗುಹೋಗುಗಳಿಗೆ ಪಡಿಮಿಡಿದ ಪ್ರತಿಕ್ರಿಯೆಗಳು. ಸಮಾಜದ ಹಿತ ಮುಖ್ಯವಾಗಿತ್ತು. ಒಟ್ಟಾರೆ ಕನ್ನಡವನ್ನು ಸಂಗೀತ ಭಾಷೆಯನ್ನಾಗಿ ಮಾಡಿದವರು ಹರಿದಾಸರು. ಕನ್ನಡವು ಎಳೆದಂತೆ ಬರುವ ಸರಳ ಭಾಷೆಯೆಂಬುದನ್ನು ದಾಸ ಸಾಹಿತ್ಯ ಸಾಧಿಸಿ ತೋರಿಸಿದೆ. ಕನ್ನಡ ನುಡಿಯ ಸೊಬಗು, ಸಂಭ್ರಮ, ಶಬ್ದಗಳ ಮಧುರ ಜೋಡಣೆ, ಲೀಲಾಜಾಲ ಶೈಲಿಯಿಂದ ಹೊಸಮಾರ್ಗ ಸ್ಥಾಪಿಸಿ ಹರಿದಾಸರು `ಕನ್ನಡ ಭಾಷೆ’ಯನ್ನು ಬೆಳಗಿಸಿದ್ದಾರೆ.
ಕನ್ನಡತ್ವವು ವಿಶ್ವವ್ಯಾಪಿ ಪರಿಕಲ್ಪನೆ:
ಕನ್ನಡಿಗರೆಂದರೆ ಕನ್ನಡ ತಾಯ್ನುಡಿಯಾಗಿ ಉಳ್ಳವರು. ಭಾಷವಾರು ಪ್ರಾಂತದಿಂದ ಒಳನಾಡ, ಹೊರನಾಡ, ಗಡಿನಾಡ ಕನ್ನಡಿಗರು ಎಂಬ ಪ್ರಭೇದ ಉಂಟಾಯಿತು. ದೇಶದ ವಿವಿಧ ಬಾಗಗಳಲ್ಲಿ ಮುಖ್ಯವಾಗಿ ದೆಹಲಿ, ಮುಂಬಯಿ, ಚೆನೈ, ಹೈದ್ರಾಬಾದ್, ಗೋವಾ, ಕಲ್ಕತ್ತ ಹಾಗೂ ವಿಶಾಖಪಟ್ಟಣ ಮುಂತಾದ ನಗರಗಳಲ್ಲಿ ವಾಸಿಸುವ ಕನ್ನಡಿಗರಿದ್ದಾರೆ, ಅಲ್ಲೆಲ್ಲ ಕನ್ನಡ ಸಂಘಗಳಿವೆ.ವಿದೇಶಗಳಲ್ಲಿ ಕನ್ನಡನುಡಿಯ ಬೆಳವಣಿಗೆಗಾಗಿ ಕನ್ನಡ ಸಂಘ-ಸಂಸ್ಥೆಗಳನ್ನು ಕಾಣಬಹುದು. ಆಸ್ಟ್ರೇಲಿಯಾದ ಮೇಲ್ಬೋರ್ನ್, ಸಿಡ್ನಿ, ಅಮೇರಿಕಾ, ಇಲಿನಾಯ, ಹ್ಯೂಸ್ಟನ್, ಜಾರ್ಜಿಯಾ, ನ್ಯೂಯಾರ್ಕ್, ವಾಷಿಂಗ್ಟನ್, ಹಾಂಗ್ಕಾಂಗ್, ಸಿಂಗಾಪೂರ, ನ್ಯೂಜಿಲೆಂಡ್, ದುಬೈ, ಕುವೈತ್ಗಳಲ್ಲಿ ಕನ್ನಡ ಸಂಘ-ಸಂಸ್ಥೆಗಳಿವೆ. ಕನ್ನಡನುಡಿ, ಸಂಸ್ಕøತಿಯನ್ನು ಹೆಚ್ಚಿಸುವಲ್ಲಿ ಕ್ರಿಯಾಶೀಲವಾಗಿವೆ.
ಕನ್ನಡ ಭಾಷೆಯ ಏರಿಳಿತಗಳು:
ಹಲ್ಮಿಡಿ ಶಾಸನದಿಂದ ಕಂಪ್ಯೂಟರ್, ಇಂಟರ್ನೆಟ್ ವರೆಗೆ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸಾಕಷ್ಟು ಏರಿಳಿತಗಳಾಗಿವೆ. ಕನ್ನಡದ ರಾಜರು ಕನ್ನಡ ಭಾಷಾ ಬೆಳವಣಿಗೆಗೆ ಮಹತ್ವಕೊಟ್ಟರು, ಅನ್ಯರು ನಮ್ಮನ್ನು ಸುದೀರ್ಘಕಾಲ ಆಳ್ವಿಕೆ ನಡೆಸಿದ ಸಂದರ್ಭದಲ್ಲಿ ಕನ್ನಡವು ಕುಗ್ಗುವಿಕೆಯನ್ನು, ಕಲಬರಿಕೆಯನ್ನು ಅನುಭವಿಸಿದೆ. ಆದರೂ ಕನ್ನಡವು ತನ್ನ ತನವನ್ನು ಕಳೆದುಕೊಳ್ಳದೇ ಬೆಳೆದಿದೆ. ಭಾರತದಲ್ಲಿಯ 1600 ಭಾಷೆಗಳಲ್ಲಿ ಕನ್ನಡವು ಪ್ರಮುಖ ಸ್ಥಾನ ಪಡೆದಿದೆ. ಇಂದು ಕನ್ನಡಿಗರೇ ಕನ್ನಡನಾಡಿನ ಅರಸರಾಗಿದ್ದರೂ ಕನ್ನಡ ಉಳಿವಿಗೆ ಹೋರಾಟ, ಸಂಘಟನೆ, ಪ್ರಚಾರ ಮಾಡುವ ಪರಿಸ್ಥಿತಿ ಬಂದದ್ದು ವಿಶಾದದ ಸಂಗತಿ. ಕನ್ನಡಿಗರಲ್ಲಿ ಕನ್ನಡಾಭಿಮಾನ ಹೋಗದೇ ಪ್ರತಿಯೊಬ್ಬ ಕನ್ನಡಿಗರ ರಕ್ತದಲ್ಲಿ ಹೃದಯದಲ್ಲಿ ಕನ್ನಡವೇ ಬೇರೂರಬೇಕು. ಕನ್ನಡದಲ್ಲಿ ಉತ್ಕøಷ್ಟ ಸಾಹಿತ್ಯ ರಚನೆಯಾಗಬೇಕು. `ಸಿರಗನ್ನಡಂಗೆಲ್ಗೆ’..
ಡಾ|| ಗಂಗಾಧರಯ್ಯ ಹಿರೇಮಠ
ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ.