ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಮೇ 12ರಿಂದ ಆನ್ಲೈನ್ ತರಗತಿ ಆರಂಭಿಸಲು ನಿರ್ದಾರ-ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾಹಿತಿ

ದಾವಣಗೆರೆ : ಕೋವಿಡ್-19 ಸಂದರ್ಭದಲ್ಲಿ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗದಂತೆ ತಡೆಯುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಮೇ 12ರಿಂದ ಆನ್ಲೈನ್ ತರಗತಿ ಆರಂಭಿಸಲು ನಿರ್ಧರಿಸಿದೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪದವಿ ಕಾಲೇಜು ಪ್ರಾಚಾರ್ಯರ ಜೊತೆಗಿನ ಆನ್ಲೈನ್ ಸಭೆಯ ನಂತರ ಈ ನಿರ್ಧಾರ ಮಾಡಲಾಯಿತು.
ಈಗಾಗಲೇ ಪರೀಕ್ಷೆ ಮುಗಿದು 15 ದಿನಗಳಾಗಿದ್ದು, ವಿಶ್ರಾಂತಿ ನೀಡಿದಂತಾಗಿದೆ. ಇನ್ನೂ ಒಂದು ವಾರ ಮಾಹಿತಿ ನೀಡಿ ಮೇ 12ರಿಂದ ಆನ್ಲೈನ್ ತರಗತಿ ಆರಂಭಿಸಲಾಗುತ್ತದೆ. ಅದಕ್ಕೆ ಮುನ್ನ ಪ್ರಾಧ್ಯಾಪಕರೂ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಕುಲಪತಿಗಳು ತಿಳಿಸಿದರು.
ಪ್ರಸ್ತುತ ಪದವಿ ಪರೀಕ್ಷೆ ಮುಗಿದಿದ್ದರಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಅವರಿಗೆ ಆನ್ಲೈನ್ ಮೂಲಕ ಮುಂದಿನ ಸೆಮಿಸ್ಟರ್ ಅಂದರೆ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ ಪಠ್ಯ ಪಾಠಗಳನ್ನು ಆರಂಭಿಸುವುದು ಅಗತ್ಯವಾಗಿದೆ. ಇದರಿಂದ ಅವರ ಶೈಕ್ಷಣಿಕ ಭವಿಷ್ಯಕ್ಕೂ ತೊಂದರೆ ಆಗುವುದಿಲ್ಲ. ವಿದ್ಯಾರ್ಥಿಗಳನ್ನು ಶೈಕ್ಷಣಿಕ ವಾತಾವರಣದಲ್ಲಿ ತೊಡಗಿಸಿಕೊಂಡರೆ ಅನಗತ್ಯ ಆತಂಕಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳ ನಿರಂತರ ಮೇಲ್ವಿಚಾರಣೆಗೂ ಸಹಕಾರ ಆಗಲಿದೆ ಎಂದು ಅವರು ನುಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಪಾಠ ಕೇಳುವುದಕ್ಕೆ ತೊಂದರೆಯಾದರೆ ಪಠ್ಯಪೂರಕ ಮಾಹಿತಿಯನ್ನು ಲಭ್ಯವಿರುವ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಅದಕ್ಕಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ವಾಟ್ಸಪ್, ಇನ್ಸ್ಟಾಗ್ರಾಂ, ಗೂಗಲ್ ಕ್ಲಾಸ್ ರೂಂ ಅಥವಾ ಇನ್ನಿತರ ಮಾಧ್ಯಮಗಳಲ್ಲಿ ಗುಂಪು ರಚಿಸಿ ಪೂರಕ ಮಾಹಿತಿ ಒದಗಿಸಬೇಕು. ಯಾವುದೇ ವಿದ್ಯಾರ್ಥಿಯೂ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸದಂತೆ ಗಮನ ನೀಡಬೇಕು ಎಂದು ಅವರು ಸೂಚಿಸಿದರು.
ಕಳೆದ ವರ್ಷದ ಅನುಭವ ಮತ್ತು ಸಮಸ್ಯೆಗಳನ್ನು ಗಮನಿಸಿ ಪರಿಹಾರ ಮಾರ್ಗ ಕಂಡುಕೊಳ್ಳಲು ಗಮನ ಹರಿಸಬೇಕು. ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಚಲನವಲನ, ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಪ್ರತಿ ವಾರಕ್ಕೊಮ್ಮೆ ಸಲ್ಲಿಸಲು ಎಲ್ಲ ಪ್ರಾಚಾರ್ಯರರಿಗೂ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಈಗಾಗಲೇ ವಿಶ್ವವಿದ್ಯಾಲಯದ ಎಲ್ಲ ಪದವಿ ತರಗತಿಗಳ ಪರೀಕ್ಷೆಗಳು ಪೂರ್ಣಗೊಂಡಿವೆ. ಇದರಲ್ಲಿ ಶೇ.90ರಷ್ಟು ವಿಷಯಗಳ ಮೌಲ್ಯಮಾಪನವೂ ನಡೆದಿದೆ. ಸ್ನಾತಕೋತ್ತರ ಪದವಿ ಮತ್ತು ಬಿ.ಇಡ್ ಪದವಿ ಪರೀಕ್ಷೆಗಳು ಬಾಕಿ ಇವೆ. ಅವುಗಳನ್ನು ನಡೆಸುವ ಸಂದರ್ಭದಲ್ಲಿ ಕೋವಿಡ್-19 ಹೆಚ್ಚಾಗಿ ಪರೀಕ್ಷೆ ಮುಂದೂಡಲಾಗಿದೆ ಎಂದು ಕುಲಪತಿ ಪ್ರೊ.ಎಸ್.ವಿ.ಹಲಸೆ ತಿಳಿಸಿದರು.
ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಸಭೆಯಲ್ಲಿ ಭಾಗವಹಿಸಿದ್ದರು.