14 ನೇ ವರ್ಷದ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ 2021 ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್ಬಾಲ್ ಕ್ರಿಕೆಟ್ ಟೂರ್ನಿಗೆ ತೆರೆ

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪನವರ ಧರ್ಮಪತ್ನಿ ದಿ.ಪಾರ್ವತಮ್ಮ ಅವರ ಸವಿನೆನಪಿನ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ೧೪ನೇ ವರ್ಷದ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ೨೦೨೧ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್ಬಾಲ್ ಕ್ರಿಕೆಟ್ ಟೂರ್ನಿಗೆ ತೆರೆ ಬಿದ್ದಿತು.
೧೪ ನೇ ಬಾರಿ ೪ ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಕೋವಿಡ್ ಕಾರಣದಿಂದ ಹೊರ ರಾಜ್ಯದ ಕೇರಳ, ಚನ್ನೈ, ಗೋವಾ, ಮಹಾರಾಷ್ಟ್ರ, ಹಾಗೂ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಸೇರಿದಂತೆ ೩೬ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ನ್ಯಾಶ್ ಮತ್ತು ಜಯಕರ್ನಾಟಕ ತಂಡಗಳ ಮಧ್ಯೆ ನಡೆದ ಹಣಾಹಣಿಯಲ್ಲಿ ಬೆಂಗಳೂರಿನ ನ್ಯಾಶ್ ವಿಜಯ ದಾಖಲಿಸುವ ಮೂಲಕ ಪ್ರಥಮ ಸ್ಥಾನ ಪಡೆಯಿತು. ಈ ಮೂಲಕ ಪ್ರಥಮ ಸ್ಥಾನ ೩.೫೫ ಲಕ್ಷ ರು., ಹಾಗೂ ಶಾಮನೂರು ಡೈಮಂಡ್ ಕಪ್ ಪಡೆಯಿತು. ಜಯಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆಯುವ ಮುಖೇನ ೨.೨೫ ಲಕ್ಷ ರು., ಹಾಗೂ ಶಿವಗಂಗಾ ಕಪ್ ಮುಡಿಗೇರಿಸಿಕೊಂಡಿತು. ಬೆಂಗಳೂರಿನ ಫ್ರೆಂಡ್ಸ್ ತಂಡ ತೃತೀಯ ಸ್ಥಾನವನ್ನು ಪಡೆದು ೧.೨೫ ಲಕ್ಷ ರು., ನಗದು ಬಹುಮಾನ ಪಡೆದರೆ, ಉಡುಪಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.
ಆಫಿಶಿಯಲ್ ಕಪ್ ಪ್ರಥಮ ಬಹುಮಾನವನ್ನು ಪೊಲೀಸ್ ತಂಡ ಪಡೆದುಕೊಂಡರೆ, ಮರ್ಚೆಂಟ್ಸ್ ತಂಡ ದ್ವೀತಿಯ ಸ್ಥಾನ ಪಡೆಯಿತು.
ಬಹುಮಾನ ವಿತರಣೆ ಸಮಾರಂಭದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಹಾದೇವ್ ಸಿ.ಹಂಪನೂರು, ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕುರುಡಿ ಗೀರೀಶ್ (ಸ್ವಾಮಿ), ಖಜಾಂಚಿ ಜಯಪ್ರಕಾಶ್ ಗೌಡ, ಪಿ.ಸಿ.ರಾಮನಾಥ್, ವಿರೇಶ್ ಪಟೇಲ್, ರಂಗಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಗಿರೀಶ್, ಶಂಕರ್, ಸುರೇಶ್ ಮತ್ತಿತರರಿದ್ದರು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಹಾಗೂ ಕ್ರೀಡಾ ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು.