ಅಬ್ಬಬ್ಬಾ! ಮೇ.16ರಿಂದ ದಾವಣಗೆರೆಯಲ್ಲಿ ಬಿದ್ದ ಮಳೆಗೆ ಎಷ್ಟು ಕೋಟಿ ನಷ್ಟ ಗೊತ್ತಾ?

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಜಯಂತಿನಗರ, ಕೋಟೆಹಾಳ್, ಚಿಕ್ಕಕುರುಹಳ್ಳಿ ಹಾಗೂ ಚಿರಡೋಣಿ ಗ್ರಾಮಗಳ ಒಟ್ಟು 33 ಮನೆಗಳಿಗೆ ನೀರು ನುಗ್ಗಿದ್ದು, 87 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಊಟೋಪಚಾರ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಮೇ.16ರಿಂದ 18ರವರೆಗೆ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯಿಂದ 1878.06 ಹೆಕ್ಟೇರ್ ಕೃಷಿ ಬೆಳೆ (ಭತ್ತ) ಹಾಗೂ 65.92 ಹೆಕ್ಟೇರ್ ತೋಟಗಾರಿಕೆ ಬೆಳೆ (ಅಡಿಕೆ, ಬಾಳೆ, ತೆಂಗು, ಇತರೆ) ಒಟ್ಟಾರೆ 1943,98 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು ಬೆಳೆ ಹಾನಿ ಸಂಭವಿಸಿದ್ದು, ರೂ. 5.50 ಕೋಟಿ ಅಂದಾಜು ನಷ್ಟ ಸಂಬ0ಧಿಸಿರುತ್ತದೆ. ಮಳೆ ನಿಂತ ನಂತರ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ನಿಖರ ವರದಿ ಸಲ್ಲಿಸಲಾಗುತ್ತದೆ ಎನ್ನಲಾಗಿದೆ.
ಜಿಲ್ಲೆಯ 17 ಮನೆಗಳು ಸಂಪೂರ್ಣ ಹಾಗೂ 67 ಮನೆಗಳು ಭಾಗಶ: ಒಟ್ಟು 84 ಮನೆಗಳು ಹಾನಿಯಾಗಿದ್ದು, ಅಂದಾಜು ರೂ.2,50 ಕೋಟಿ ನಷ್ಟ ಸಂಭವಿಸಿರುತ್ತದೆ. ಅತೀವೃಷ್ಟಿಯಿಂದ ಜಿಲ್ಲೆಯಲ್ಲಿ 1 ಪ್ರಾಥಮಿಕ ಶಾಲೆ, 16 ವಿದ್ಯುತ್ ಕಂಬಗಳು, 4 ಟ್ರಾನ್ಸ್ಫಾರ್ಮರ್, 7.5 ಕಿಮೀ ಗ್ರಾಮೀಣ ರಸ್ತೆ, 3 ಸೇತುವೆಗಳು ಹಾನಿಯಾಗಿದ್ದು, ರೂ.32.28 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಕೃಷಿ/ತೋಟಗಾರಿಕೆ ಅಧಿಕಾರಿಗಳು ಅತೀವೃಷ್ಠಿ/ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿದ್ದು, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸೂಚಿಸಲಾಗಿರುತ್ತದೆ. ಏಪ್ರಿಲ್ 2022 ರಿಂದ ಮೇ 2022ರ ಮೊದಲನೇ ವಾರದವರೆಗೆ ಸಿಡಿಲು ಬಡಿದು 1 ಜೀವ ಹಾನಿ, 30 ಜಾನುವಾರು ಹಾನಿ, 70 ಮನೆಗಳು ಹಾನಿಯಾಗಿದ್ದು, ಎಸ್ಡಿಆರ್ಎಫ್ / ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲಾಗಿರುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.
garudavoice21@gmail.com 9740365719