ನಟ ಚೇತನ್ ದೇಶದಿಂದ ಗಡೀಪಾರು? ಏನು ಹೇಳುತ್ತೆ ಕಾನೂನು!

ಬೆಂಗಳೂರು : ಕನ್ನಡ ಚಿತ್ರನಟ ಚೇತನ್ ಮತ್ತೆ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬಹಳ ಸದ್ದು ಮಾಡಿರುವ ಹಿಜಾಬ್ ಕುರಿತು ನ್ಯಾಯಾಧೀಶರ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ, ಇತ್ತೀಚೆಗಷ್ಟೇ ಷರತ್ತುಬದ್ಧ ಜಾಮೀನು ಮೇಲೆ ಚೇತನ್ ಬಿಡುಗಡೆಯಾಗಿದ್ದರು.
ಅಮೇರಿಕಾದ ಗ್ರೀನ್ ಕಾರ್ಡ್ ಹೋಲ್ಡರ್ ಆಗಿರುವ ಚೇತನ್, ಆ ದಿನಗಳು ಎನ್ನುವ ಸಿನಿಮಾದ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶಿಸಿ, ಇದರ ಜೊತೆಗೆ ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ. ಚಿತ್ರದುರ್ಗ ಮೂಲದ ಲಿಂಗಾಯತ ಸಮಾಜದ ಚೇತನ್ ಅಮೆರಿಕಾದ ಚಿಕಾಗೋ ನಗರದಲ್ಲಿ ಜನಿಸಿದ್ದರು. ಬೇರೆ ದೇಶದ ಪ್ರಜೆಯಾಗಿ ಭಾರತದಲ್ಲಿ ಹೋರಾಟ ನಡೆಸುತ್ತಿರುವುದಕ್ಕಾಗಿ ಕಾನೂನಿನ ಉಲ್ಲಂಘನೆ ಆರೋಪ ಚೇತನ್ ವಿರುದ್ದ ಕೇಳಿ ಬಂದಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ರಾಜ್ಯ ಸರಕಾರಕ್ಕೆ ವಿಸ್ಕೃತವಾದ ವರದಿಯನ್ನು ಸಲ್ಲಿಸಿದ್ದಾರೆ. ಈ ಹಿಂದೆ, ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಚೇತನ್ ವಿರುದ್ಧ ಎರಡು ಎಫ್ಐಆರ್ ದಾಖಲಾಗಿತ್ತು. ಇದಾದ ನಂತರ ಅಮೆರಿಕ ನಾಗರೀಕತ್ವ ಹೊಂದಿರುವ ಇವರನ್ನು ಗಡಿಪಾರು ಮಾಡಬೇಕೆಂದು ವಿಎಚ್ಪಿ ಕಾರ್ಯಕರ್ತರೊಬ್ಬರು ಮನವಿ ಸಲ್ಲಿಸಿದ್ದರು.
ಏನಿದು ಆರೋಪ?
ಕಾನೂನಿನ ಪ್ರಕಾರ, ನಟ ಚೇತನ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎನ್ನುವ ವರದಿಯನ್ನು ಬೆಂಗಳೂರು ಪೊಲೀಸರು, ರಾಜ್ಯ ಗೃಹ ಸಚಿವಾಲಯಕ್ಕೆ ನೀಡಿದ್ದಾರೆ. ಓಸಿಐ ಕಾನೂನಿನ ಪ್ರಕಾರ, ಈ ಕಾರ್ಡ್ ಅನ್ನು ಹೊಂದಿರುವವರು ಸ್ಥಳೀಯ ಕಾನೂನು ಉಲ್ಲಂಘನೆ, ಹೋರಾಟ, ಪ್ರತಿಭಟನೆ ನಡೆಸುವಂತಿಲ್ಲ. ಈ ಸಂಬಂಧ ಈ ಕಾಯಿದೆಗೆ 2019ರಲ್ಲಿ ತಿದ್ದುಪಡಿಯನ್ನು ಮಾಡಿ, ಸಣ್ಣ ಅಪರಾಧ, ಗಂಭೀರ ಅಪರಾಧ, ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವ ವಿಶೇಷ ಅಧಿಕಾರವನ್ನು ಸರಕಾರಕ್ಕೆ ನೀಡಲಾಗಿತ್ತು.
ಅಮೆರಿಕಾದ ಪ್ರಜೆಯಾಗಿರುವ ಚೇತನ್
ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ನಟ ಚೇತನ್ ವಿರುದ್ದ ಪೊಲೀಸ್ ಠಾಣೆಯಲ್ಲಿ ಮತ್ತು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ), ವಿಎಚ್ಪಿ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ದೂರು ಸಲ್ಲಿಸಿದ್ದರು. “ಅಮೆರಿಕಾದ ಪ್ರಜೆಯಾಗಿರುವ ಚೇತನ್ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ವಿವಾದಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ, ಇದನ್ನು ಎಫ್ಆರ್ಆರ್ಒ ಗಂಭೀರವಾಗಿ ಪರಿಗಣಿಸಬೇಕು. ಅವರ ನಿವಾಸದ ಪರವಾನಗಿಯನ್ನು ವಿದೇಶಿಯರ ಕಾಯ್ದೆಯಡಿ ರದ್ದುಪಡಿಸಬೇಕು, ಭಾರತೀಯ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಗಡೀಪಾರು ಮಾಡಲು ಅಗತ್ಯ ಆದೇಶಗಳನ್ನು ನೀಡಲು ನಿಮ್ಮ ಕಚೇರಿಗೆ ವಿನಂತಿಸುತ್ತೇವೆ” ಎಂದು ದೂರಿನಲ್ಲಿ ಮನವಿ ಮಾಡಲಾಗಿತ್ತು. ಈ ಎಲ್ಲಾ ದೂರು, ಮನವಿಯನ್ನು ಆಧರಿಸಿ ಬೆಂಗಳೂರು ಪೊಲೀಸರು, ರಾಜ್ಯ ಗೃಹ ಸಚಿವರಿಗೆ ವರದಿಯನ್ನು ಸಲ್ಲಿಸಿದ್ದಾರೆ. ಓಸಿಐ ಕಾರ್ಡ್ ಹೊಂದಿರುವವರು ಭಾರತದಲ್ಲಿ ಯಾವುದೇ ಪ್ರತಿಭಟನೆ/ಹೋರಾಟದಲ್ಲಿ ಪಾಲ್ಗೊಳ್ಳುವಂತಿಲ್ಲ. ಇದನ್ನು ಆಧರಿಸಿ, ರಾಜ್ಯ ಸರಕಾರ, ಕೇಂದ್ರ ಸರಕಾರದ ವಿದೇಶಾಂಗ ಸಚಿವಾಲಯಕ್ಕೆ ಶಿಫಾರಸು ಸಮೇತ ರವಾನಿಸಲಿದೆ. ಈ ಸಂಬಂಧ ಮುಂದಿನ ಕ್ರಮವನ್ನು ಅಥವಾ ಗಡೀಪಾರು ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ.
ಅಮೆರಿಕದ ಪ್ರಜೆಯಾಗಿರುವ ನಟ ಚೇತನ್ ಹಲವು ಹಲವು ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಜಕೀಯ ವಿಚಾರಗಳಲ್ಲಿ ಬಗ್ಗೆ ಬಹಿರಂಗವಾಗಿ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿವಾದ ಸುತ್ತಿಸಿಕೊಂಡಿದ್ದಾರೆ. ಜೊತೆಗೆ, ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ಬಂಧನಕ್ಕೂ ಒಳಗಾಗಿದ್ದರು. ಯಾವುದೇ ವಿದೇಶಿ ಪ್ರಜೆ ಬಂಧನವಾದ ಕೂಡಲೇ ಸಂಬಂಧಪಟ್ಟ ದೇಶದ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ಅಂತೆಯೇ ಚೇತನ್ ವಿಚಾರದಲ್ಲೂ ಸಹ ಸರ್ಕಾರಕ್ಕೆ ಪೊಲೀಸ್ ಇಲಾಖೆಯಿಂದ ವರದಿ ನೀಡಲಾಗಿದೆ.
ಖ್ಯಾತ ಕರ್ನಾಟಕ ಹೈಕೋರ್ಟಿನ ಹಿರಿಯ ವಕೀಲ ಶಂಕರಪ್ಪ ಅಭಿಪ್ರಾಯ
“ಕೆಲಸ ಮತ್ತು ಇತರ ಕಾರಣಗಳಿಗಾಗಿ ದೇಶಕ್ಕೆ ಬರುವವರನ್ನು ಕಾಪಾಡುವುದು ಆಯಾಯ ದೇಶದ ಕರ್ತವ್ಯ. ರೈಟ್ ಟು ಸ್ಪೀಕ್, ರೈಟ್ ಟು ಲೀವ್ ಎನ್ನುವ ಹಾಗೇ ಅವರ ಹಕ್ಕನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ನಮ್ಮ ದೇಶದವರು ಅಮೆರಿಕಾದಲ್ಲಿ ಪ್ರತಿಭಟನೆ ನಡೆಸುವುದಿಲ್ಲವೇ? ಹಾಗೇ, ಡ್ಯೂಯಲ್ ಸಿಟಿಜನ್ಶಿಪ್ ಇರುವವರು ಎರಡೂ ದೇಶದ ಹಕ್ಕನ್ನು, ಸೌಲಭ್ಯವನ್ನು ಪಡೆಯಬಹುದಾಗಿದೆ. ಆದರೆ, ಎಲ್ಲರೂ ದೇಶದ ಸಂವಿಧಾನ, ಕಾನೂನಿಗೆ ಬೆಲೆ ಕೊಡಬೇಕಾಗುತ್ತದೆ”. “ಆದರೆ, ಒಂದೇ ದೇಶದ ಪೌರತ್ವವನ್ನು ಹೊಂದಿದವರು, ಬೇರೊಂದು ದೇಶಕ್ಕೆ ಹೋದಂತಹ ಸಂದರ್ಭದಲ್ಲಿ ಓವರ್ ಸೀಸ್ ಸಿಟಿಜನ್ ಶಿಪ್ ಆಕ್ಟ್ ಏನು ಹೇಳುತ್ತೆ ಅದನ್ನು ಪಾಲನೆ ಮಾಡಬೇಕಾಗುತ್ತದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ”ಎಂದು ಖ್ಯಾತ ಕರ್ನಾಟಕ ಹೈಕೋರ್ಟಿನ ಹಿರಿಯ ವಕೀಲ ಶಂಕರಪ್ಪ ಅಭಿಪ್ರಾಯ ಪಟ್ಟಿದ್ದಾರೆ.