ಮತದಾರರ ಪಟ್ಟಿ ಹೆಸರು ಸೇರ್ಪಡೆ ಕಾಲಾವಕಾಶ ವಿಸ್ತರಣೆಗೆ ಮನವಿ.

ದಾವಣಗೆರೆ: ಮತದಾರರ ಪಟ್ಟಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿನಾಕಾರಣಕೈಬಿಟ್ಟು ಹೋಗಿರುವ ಹೆಸರುಗಳನ್ನು ಸೇರ್ಪಡೆಗೊಳಿಸಲು ಕಾಲಾವಕಾಶ ವಿಸ್ತರಣೆಗೊಳಿಸುವಂತೆ ದಾವಣಗೆರೆ ಮತದಾರರ ಜಾಗೃತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ವೇದಿಕೆಯ ಸಂಯೋಜಕ ಇಬ್ರಾಹೀಂ ಕಲೀಲ್ ಉಲ್ಲಾ, ೨೦೨೨ರ ಜನರಿಯಲ್ಲಿ ಮತ್ತು ನವಂಬರ್ ೨೦೨೨ರಲ್ಲಿ ಬಿಡುಗಡೆಗೊಂಡಿರುವ ಮತದಾರರ ಈ ಎರಡು ಪಟ್ಟಿಗಳನ್ನು ಪರಿಶೀಲಿಸಿದಾಗಅನೇಕ ಹೆಸರುಗಳು ಕೈಬಿಟ್ಟಿರುವುದು ಕಂಡು ಬಂದಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಕೊಟ್ಟ ಕಾಲಾವಧಿಯಲ್ಲಿ ಬಿಎಲ್ಓಗಳು ಹಾಗೂ ಸಂಬಂಧಿಸಿದ ಕೆಲ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ಮತ್ತು ಇಂಟರ್ನೆಟ್ ವೋಟರ್ ಹೆಲ್ಪ್ಲೈನ್ ಸರ್ವರ್ ನಿರಂತರವಾಗಿ ಬ್ಯುಸಿಯಾಗಿರುವುದರಿಂದ ಮತದಾರರಿಗೆಪರಿಷ್ಕರಣೆಗೆ ನೀಡಿದ ಕಾಲಾವಧಿಯೊಳಗೆ ತಮ್ಮ ವೋಟರ್ ಐಡಿ ಯಲ್ಲಿರುವ ಎಪಿಕ್ ನಂಬರ್ನಿಂದ ಪರಿಶೀಲಿಸಲು ಸಾಧ್ಯವಾಗದೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಲು ಆಗದೆ ತೊಂದರೆಯಾಗಿದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಭಾರತೀಯ ನಾಗರೀಕನಿಗೆ ಮತದಾನ ಸಂವಿಧಾನಿಕವಾಗಿ ನೀಡಿರುವ ಹಕ್ಕಾಗಿದ್ದು, ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟು ಹೋಗಿರುವ ಮತದಾರರ ಹೆಸರನ್ನು ಸೇರಿಸಲು ಕ್ರಮ ಕೈಗೊಳ್ಳದಿದ್ದರೆ ಅವರ ಮತದಾನದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಆದ್ದರಿಂದ ಮತದಾರರ ಪಟ್ಟಿಯ ಪರಿಷ್ಕರಣೆಗೆ ಕಾಲಾವಧಿ ವಿಸ್ತರಣೆ ಮಾಡಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಖಲೀಲವುಲ್ಲಾ, ನಜೀರ್ ಅಹ್ಮದ್, ಟಿ.ಅಸ್ಗರ್, ಬಿ.ವಿರಣ್ಣ, ಫಾರೂಕ್ ಖಾನ್, ಶೋಯೇಬ್, ಇಸ್ಮಾಯಿಲ್, ಆದಿಲ್ ಖಾನ್, ಆಯುಬ್ ಪೈಲ್ವಾನ್, ಇಮ್ರಾನ್ ರಜಾ, ಅನಿಲ್ ಕುಮಾರ್, ಜಬೀವುಲ್ಲಾ, ಯು.ಎಂ ಮನ್ಸೂರ್ ಅಲಿ, ಜಮೀರ್ ಅಹ್ಮದ್ ಖಾನ್, ಅಲಿ ರಹಮತ್, ಮಹಬೂಬ್ ಬಾಷಾ, ಹರೀಶ್, ಪ್ರಮೋದ್, ಸತೀಶ್ ಮತ್ತಿತರರಿದ್ದರು.