ಕೃಷಿ ಸಚಿವರಿಂದ ಮುಂಗಾರು ಸಿದ್ಧತೆ ಪರಿಶೀಲನೆ ಸಭೆ: ಬಿತ್ತನೆ ಬೀಜ ಸಬ್ಸಿಡಿಗಾಗಿ 80 ಕೋಟಿ ರೂ. ಬಿಡುಗಡೆ- ಬಿ.ಸಿ. ಪಾಟೀಲ್

minister bc patil agriculture review meeting Davanagere garudavoice

ದಾವಣಗೆರೆ:ರಾಜ್ಯದಲ್ಲಿ ಈ ವರ್ಷದ ಮುಂಗಾರು ಹಂಗಾಮಿಗೆ 1.63 ಲಕ್ಷ ಕ್ವಿಂಟಾಲ್‍ನಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನಿದ್ದು, ಬೀಜ ಹಾಗೂ ರಸಗೊಬ್ಬರದ ಯಾವುದೇ ಕೊರತೆಯಿಲ್ಲ. ಬಿತ್ತನೆ ಬೀಜದ ಸಬ್ಸಿಡಿಗಾಗಿ ಈ ವರ್ಷ ಒಟ್ಟು 80 ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.ಪ್ರಸಕ್ತ ವರ್ಷದ ಮುಂಗಾರು ಸಿದ್ಧತೆ ಕುರಿತಂತೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಹಂಗಾಮಿಗಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಯಾವುದೇ ಬಗೆಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇಲ್ಲ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ಗೊಬ್ಬರ ಲಭ್ಯವಿದ್ದು, ರೈತರು ಮುಗಿಬಿದ್ದು ಬೀಜ ಹಾಗೂ ಗೊಬ್ಬರ ಖರೀದಿಸುವ ಅಗತ್ಯವಿಲ್ಲ. ಈಗಾಗಲೆ ರಾಜ್ಯದಲ್ಲಿ 87629 ಕ್ವಿಂ. ಬಿತ್ತನೆ ಬೀಜವನ್ನು ವಿತರಿಸಲಾಗಿದ್ದು, ಇನ್ನೂ 1.63 ಲಕ್ಷ ಕ್ವಿಂ. ಬಿತ್ತನೆ ಬೀಜ ದಾಸ್ತಾನಿದೆ. ಸರ್ಕಾರದಿಂದ 14 ಬಗೆಯ ಬೆಳೆಗಳ ಬೀಜಗಳಿಗೆ ಸಬ್ಸಿಡಿ ನೀಡಲಾಗುತ್ತಿದ್ದು, ಬಿತ್ತನೆ ಬೀಜದ ಸಬ್ಸಿಡಿಗಾಗಿ ಮೊದಲು 50
ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿತ್ತು. ಕಳೆದ ಭಾನುವಾರವಷ್ಟೇ ಇನ್ನೂ 30 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟಾರೆ 80 ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಸೆಣಬು, ಹಸಿರೆಲೆ ಗೊಬ್ಬರಕ್ಕೆ ಪ್ರೋತ್ಸಹ ನೀಡಲು 5 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಈ ವರ್ಷ ರೈತರಿಗೆ ಯಾವುದೇ ಕೊರತೆಯಾಗದ ರೀತಿ ಬೀಜ ಹಾಗೂ ಗೊಬ್ಬರ ಪೂರೈಕೆಗೆ ಸರ್ಕಾರ ಬದ್ಧವಾಗಿದೆ. ಕಳಪೆ ಬಿತ್ತನೆ ಬೀಜ ಪೂರೈಸುವ ಹಾಗೂ ಹೆಚ್ಚಿನ ದರದಲ್ಲಿ ಬೀಜ ಹಾಗೂ ಗೊಬ್ಬರ ಮಾರಾಟ ಮಾಡುವ ಅಲ್ಲದೆ ಕೃತಕ ಅಭಾವ ಸೃಷ್ಟಿಸುವ ಕಾಳಸಂತೆಕೋರರನ್ನು ಕೃಷಿ ಇಲಾಖೆಯ
ಜಾಗೃತ ದಳ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿದ್ದು, ಇಂತಹ ಯಾವುದೇ ಪ್ರಕರಣ ಕಂಡುಬಂದಲ್ಲಿ ಅಂತಹವರ ವಿರುದ್ಧ ಐಪಿಸಿ 420 ರನ್ವಯ ಕೇಸ್ ದಾಖಲಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು, ಹಾಗೂ ಲೈಸೆನ್ಸ್ ರದ್ದುಪಡಿಸಲಾಗುವುದು. ದಾವಣಗೆರೆ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಜೈವಿಕ ಕೀಟನಾಶಕ ಪೂರೈಸಿದ 59 ಪ್ರಕರಣಗಳನ್ನು ಪತ್ತೆಹಚ್ಚಿ, ಮೊಕದ್ದಮೆ ಹೂಡಲಾಗಿದೆ, ಕೃಷಿ ಪರಿಕರ ಮಾರಾಟ ಮಾಡುವ 10 ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದರು.

ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾಹಿತಿ ನೀಡಿ:
ಜಿಲ್ಲೆಯಲ್ಲಿ ಈ ವರ್ಷ 120 ಮಿ.ಮೀ. ವಾಡಿಕೆ ಮಳೆ ಬದಲಿಗೆ 203 ಮಿ.ಮೀ. ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 2.43 ಲಕ್ಷ ಹೆ. ಬಿತ್ತನೆ ಕ್ಷೇತ್ರದ ಗುರಿ ಇದ್ದು, ಈವರೆಗೆ 8002 ಹೆ. ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳ ಅಲ್ಲದೆ ಶೇಂಗಾ ಬೆಳೆಯನ್ನು ಪ್ರಮುಖವಾಗಿ ಬೆಳೆಯುತ್ತಿದ್ದು, ಭತ್ತ-16750 ಕ್ವಿಂ., ಮುಸುಕಿನಜೋಳ-19288 ಕ್ವಿಂ., ಶೇಂಗಾ 5100 ಕ್ವಿಂ. ಬಿತ್ತನೆ ಬೀಜ ದಾಸ್ತಾನಿದೆ, ಜೊತೆಗೆ ರಾಗಿ, ಜೋಳ, ತೊಗರಿ, ಹೆಸರು, ಅಲಸಂದೆ, ಸೂರ್ಯಕಾಂತಿ, ಹತ್ತಿ ಬೀಜ ಕೂಡ ಸಾಕಷ್ಟು ಲಭ್ಯವಿದ್ದು, ಒಟ್ಟು 46922 ಕ್ವಿಂ. ಬೀಜ ದಾಸ್ತಾನಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 29345 ಮೆ.ಟನ್ ರಸಗೊಬ್ಬರ ವಿತರಿಸಲಾಗಿದ್ದು, ಯೂರಿಯಾ-19558 ಮೆ.ಟನ್, ಡಿಎಪಿ-1604, ಎನ್‍ಪಿಕೆ ಕಾಂಪ್ಲೆಕ್ಸ್-17162, ಎಮ್‍ಒಪಿ-2474
ಸೇರಿದಂತೆ ಒಟ್ಟು 40798 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ಬಗೆಯ ಬೀಜ, ಹಾಗೂ ಗೊಬ್ಬರದ ಕೊರತೆಯಾಗದಂತೆ, ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಕೃಷಿ ಸಾಮಗ್ರಿ ಪೂರೈಕೆಗೆ ಸರ್ಕಾರ ಬದ್ಧವಿದೆ ಎಂದರು.ಅಂತರಬೆಳೆ ಅಭಿಯಾನ : ಜಿಲ್ಲೆಯಲ್ಲಿ ಮೆಕ್ಕೆಜೋಳದೊಂದಿಗೆ ತೊಗರಿ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡಬೇಕು. ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಏಕ ಪ್ರಮುಖ ಬೆಳೆಯಾಗಿ ಬೆಳೆಯುತ್ತಿರುವುದು ಸರಿಯಲ್ಲ, ಇದರಿಂದ ರೈತರಿಗೆ ಲಾಭದ ಬದಲು ನಷ್ಟವೇ ಆಗುವ
ಸಾಧ್ಯತೆ ಇರುತ್ತದೆ. ಹೀಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯವನ್ನು ಅಂತರ ಬೆಳೆಯಾಗಿ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸೂರ್ಯಕಾಂತಿ, ನೆಲಗಡಲೆಗೂ ಸಬ್ಸಿಡಿ ನೀಡುತ್ತಿದ್ದೇವೆ. ರೈತರು ಮೆಕ್ಕೆಜೋಳದ ಜೊತೆಗೆ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆದಲ್ಲಿ ಲಾಭದಾಯಕದ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ರೈತರು ಎಣ್ಣೆಕಾಳು, ಬಹುಬೆಳೆಗಳಿಗೆ ಆದ್ಯತೆ ನೀಡಬೇಕು, ಸಮಗ್ರ ಕೃಷಿ ನೀತಿ ಅನುಸರಿಸಬೇಕು, ಬಹುಬೆಳೆ ಬೆಳೆಯುವಂತೆ ರೈತರನ್ನು ಹುರಿದುಂಬಿಸಬೇಕಿದೆ. ಈ ನಿಟ್ಟಿನಲ್ಲಿ
ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಸಚಿವರು ಸೂಚನೆ ನೀಡಿದರು.

ಜಂಟಿಕೃಷಿ ನಿರ್ದೇಶಕರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಈಗಾಗಲೆ ಅಂತರ ಬೆಳೆ ಅಭಿಯಾನವನ್ನು ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 5 ಸಾವಿರ ಹೆ. ನಲ್ಲಿ ಮಾತ್ರ ತೊಗರಿ ಬೆಳೆಯಲಾಗುತ್ತಿತ್ತು. ಈ ವರ್ಷ ಒಟ್ಟು 16 ಸಾವಿರ ಹೆ. ನಲ್ಲಿ ತೊಗರಿಯನ್ನು ಅಂತರಬೆಳೆಯಾಗಿಸಲು ಗುರಿ ಹೊಂದಿದ್ದು, ಸುಮಾರು 1 ಲಕ್ಷ ಕ್ವಿಂ. ತೊಗರಿ ಉತ್ಪಾದನೆಯ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಇಲಾಖೆಯಿಂದಲೇ 02 ಕೆ.ಜಿ. ತೊಗರಿ ಬೀಜದ ಪಾಕೆಟ್‍ಅನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ನೀಡಲಾಗುತ್ತಿದೆ. ಅಲ್ಲದೆ 500 ಹೆ. ನಲ್ಲಿ ಶೇಂಗಾ ಹಾಗೂ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ ಎಂದರು.

ಸಬ್ಸಿಡಿ ಮುಂದುವರಿಕೆಗೆ ಶೀಘ್ರ ಆದೇಶ :
ಹನಿ ನೀರಾವರಿಗೆ ಪ.ಜಾತಿ, ಪ.ಪಂಗಡದವರಿಗೆ ಶೇ. 90 ಹಾಗೂ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಬ್ಸಿಡಿಯನ್ನು ಕಳೆದ 2004 ರಿಂದಲೂ ನೀಡಲಾಗುತ್ತಿತ್ತು, ಈಗ ಸಬ್ಸಿಡಿ ಕಡಿತಗೊಳಿಸಲಾಗಿದ್ದು, ರೈತರಿಗೆ ತೊಂದರೆಯಾಗಿದೆ, ಇದನ್ನು ಮುಂದುವರೆಸುವಂತೆ ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹನಿ ನೀರಾವರಿಗೆ ಪ.ಜಾತಿ, ಪಂಗಡದವರಿಗೆ ಕೇಂದ್ರದಿಂದ ಶೇ. 50 ಹಾಗೂ ರಾಜ್ಯ ಸರ್ಕಾರದಿಂದ ಶೇ. 40 ಸಬ್ಸಿಡಿ ನೀಡಲಾಗುತ್ತಿತ್ತು. ಅಲ್ಲದೆ ಕೃಷಿ ಯಂತ್ರೋಪಕರಣಗಳಿಗೆ ಪ.ಜಾತಿ, ಪ.ಪಂಗಡದವರಿಗೆ ಶೇ. 90, ಸಾಮಾನ್ಯ
ವರ್ಗದವರಿಗೆ ಶೇ. 50 ಸಬ್ಸಿಡಿ ನೀಡಲಾಗುತ್ತಿತ್ತು, ಆದರೆ ಆಥಿ೵ಕ ಇಲಾಖೆಯಿಂದ ತಡೆಹಿಡಿದ ಕಾರಣಕ್ಕಾಗಿ ತೊಂದರೆಯಾಗಿತ್ತು. ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ, ಕೋವಿಡ್ ಸಂದರ್ಭದಲ್ಲಿ ಮೊದಲೇ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಅವರಿಗೆ ತೊಂದರೆಯಾಗುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ತೀರ್ಮಾನಿಸಿ, ಸಬ್ಸಿಡಿ ಮುಂದುವರೆಸಲು ಸೂಚಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಆದೇಶ ಹೊರಬೀಳಲಿದೆ ಎಂದು ಕೃಷಿ ಸಚಿವರು ಹೇಳಿದರು.

ಚೀನಾದಿಂದ ನಕಲಿ ಬೀಜ ಎಚ್ಚರಿಕೆ :
ಚೀನಾದಿಂದ ನಕಲಿ ಬೀಜಗಳ ಪ್ಯಾಕೆಟ್‍ಗಳು ರೈತರಿಗೆ ಅನಾಮಧೇಯವಾಗಿ ಪೂರೈಕೆಯಾಗುತ್ತಿದ್ದು, ರೈತರಲ್ಲಿ ಸೂಕ್ತ ಮಾಹಿತಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ರೈತರು ಅನಾಮಧೇಯ ವಿಳಾಸದಿಂದ ಯಾವುದೇ ಬಗೆಯ ಬೀಜದ ಪ್ಯಾಕೆಟ್‍ಗಳನ್ನು ಸ್ವೀಕರಿಸಬಾರದು, ಈಗಾಗಲೆ ಆರ್ಥಕ ಸಂಕಷ್ಟದಲ್ಲಿರುವ ರೈತರು ಇಂತಹ ಬೀಜದಿಂದ ಇನ್ನಷ್ಟು ತೊಂದರೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ
ಸಚಿವ ಬಿ.ಎ. ಬಸವರಾಜ ಸೂಚನೆ ನೀಡಿದರು.

ಕೃಷಿ ಸಚಿವರು ಪ್ರತಿಕ್ರಿಯಿಸಿ, ಕಳೆದ ವರ್ಷವೂ ಇಂತಹ ಪ್ರಕರಣಗಳು ವರದಿಯಾಗಿತ್ತು. ಹೀಗಾಗಿ ಕೃಷಿ ಇಲಾಖೆ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅನಾಮಧೇಯ ವಿಳಾಸದಿಂದ ಬೀಜದ ಪಾಕೆಟ್ ಬಂದಲ್ಲಿ ರೈತರು ಸ್ವೀಕರಿಸಬಾರದು, ಬಿತ್ತನೆ ಮಾಡಬಾರದು. ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಜಾಗರೂಕತೆ ವಹಿಸಿ, ಪ್ರಕರಣ ಕಂಡುಬಂದಲ್ಲಿ ಸೂಕ್ತ ತನಿಖೆ ನಡೆಸಬೇಕು. ಯಾವುದೇ ಕಳಪೆ ಬೀಜದ ಪ್ರಕರಣ ಕಂಡುಬಂದರೂ, ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಫಸಲ್‍ಬೀಮಾ ಯೋಜನೆ :
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಅತ್ಯುತ್ತಮ ಬೆಳೆ ವಿಮಾ ಯೋಜನೆಯಾಗಿದ್ದು, ಅಧಿಕಾರಿಗಳು ಈ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಯೋಜನೆ ಬಗ್ಗೆ ರೈತರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಹೆಚ್ಚು ಹೆಚ್ಚು ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್, ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಕೃಷಿ ಇಲಾಖೆ ಅಪರ ಆಯುಕ್ತ ವೆಂಕಟರಾವ್ ಪಾಟೀಲ್, ಜಿಲ್ಲಾಧಿಕಾರಿ ಮಹಾಂತೇಶ್ ಭೀಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ಹನುಮಂತರಾಯ, ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!