ಆಳ್ವಾಸ್ ‘ಜಾಂಬೂರಿ’: ಅಂತರಾಷ್ಟ್ರೀಯ ಸಾಂಸ್ಕೃತಿಕ ಹಬ್ಬದಲ್ಲಿ ರಾಷ್ಟ್ರನಿರ್ಮಾಣದ ಸಂಕಲ್ಪ

Alva's 'Jamboori': Nation-Building Commitment at an International Cultural Festival

ಮಂಗಳೂರು: ಸಣ್ಣವಯಸ್ಸಿನಲ್ಲಿ ಚರಿತ್ರೆ ಮತ್ತು ಶಿಸ್ತು ರೂಪಿಸುವ ಸುಸಮಯವಾಗಿದ್ದು, ಚರಿತ್ರೆಯ ಜೊತೆಗೆ ಚಾರಿತ್ರ್ಯ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಭಾನುವಾರ ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿ ಮೌಲ್ಯ, ಆದರ್ಶಗಳನ್ನು ತುಂಬಿ, ಹಿರಿಯರಿಗೆ ಗೌರವಾದರಗಳನ್ನು ತೋರುವ, ಕಿರಿಯರಿಗೆ ಪ್ರೀತಿಯನ್ನು ತೋರುವ ಗುಣಧರ್ಮವನ್ನು ಇಲ್ಲಿ ತಿಳಿಹೇಳಲಾಗುತ್ತದೆ. ದೇಶದಲ್ಲಿ ಚರಿತ್ರೆ ಇದೆ. ಆದರೆ ಚಾರಿತ್ರ್ಯ ಬೇಕಾಗಿದೆ ಎಂದರು.

ಸಾಂಸ್ಕೃತಿಕವಾದ ಹಾಗೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಕಾರ್ಯಕ್ರಮ ಜಂಬೂರಿ. ರಾಷ್ಟ್ರ ಶಕ್ತಿಯುತವಾಗಿ, ಸುಸಂಸ್ಕೃತವಾಗಿ, ಜಾಗತಿಕವಾಗಿ ಗಟ್ಟಿಗೊಂಡಿದೆ ಎಂಬುದು ಇಂದಿನ ಕಾರ್ಯಕ್ರಮದಲ್ಲಿ ತಿಳಿಯುತ್ತದೆ. ಪ್ರಧಾನ ಮಂತ್ರಿ ಮೋದಿಯವರ ರಾಷ್ಟ್ರನಿರ್ಮಾಣದ ಕರೆಯನ್ನು ಸಾಕಾರಗೊಲಿಸುವ ಸಂಕಲ್ಪವನ್ನು ಇಲ್ಲಿ ಮಾಡಲಾಗಿದೆ. ಭಾರತ ದೇಶ ಶ್ರೇಷ್ಟ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯಿಂದ ಕೂಡಿದೆ. ಭಾರತೀಯತೆ ಎಂದರೆ ಮಾನವೀಯತೆ, ಇಂತಹ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ 100 ವರ್ಷದ ಸಾಧನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚರಿತ್ರೆಯನ್ನು ನಿರ್ಮಿಸುವ ಸಂಸ್ಥೆ. ದೇಶದಲ್ಲಿ ಆಚಾರರಿದ್ದಾರೆ. ಬೇಕಾಗಿರುವುದು ಆಚರಣೆ. ಸ್ವಾಮಿ ವಿವೇಕಾನಂದರು, ಶಂಕರಾಚಾರ್ಯರು,ದಾಸವರೇಣ್ಯರು ಇರುವ ದೇಶದಲ್ಲಿ ದೊಡ್ಡ ತತ್ವಭಂಡಾರವಿದೆ ಎಂದರು.

ಸದ್ಚಾರಿತ್ರ್ಯ ಹಾಗೂ ಮೌಲ್ಯಗಳನ್ನು ಅಳವಡಿಸುವ ಆಳ್ವಾಸ್ ಸಂಸ್ಥೆ :

ಪಾಶ್ಚಿಮಾತ್ಯದ ದಾಳಿಯಿಂದ ಸಾಂಸ್ಕೃತಿಕ ಗೊಂದಲ ಯುವಪೀಳಿಗೆಗೆ ಉಂಟಾಗಿದೆ. ನಮ್ಮಲ್ಲೇನಿದೆ ಎಂಬುದು ನಾಗರಿಕತೆ , ನಾವೇನಾಗಿದ್ದೇವೆ ಎಂಬುದು ಸಂಸ್ಕೃತಿ. ಪರೋಪಕಾರಿ ಧರ್ಮ, ದಯೆ, ಸತ್ಯಮಾರ್ಗಗಳನ್ನು ಮುಂದುವರೆಯುತ್ತಿದ್ದೇವೆ ಎಂಬುದು ತಿಳಿದುಕೊಳ್ಳಬೇಕು. ಸದ್ಚಾರಿತ್ರ್ಯ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿಗೆ ಆಳವಾದ ಬೇರುಗಳನ್ನು ಸ್ಥಾಪಿಸುವ ಕೆಲಸವನ್ನು ಆಳ್ವಾಸ ಸಂಸ್ಥೆ ಮಾಡುತ್ತಿದೆ. ಈ ದೇಶದಲ್ಲಿ ವಿವಿಧ ಜಾತಿ ಭಾಷೆಗಳಿದ್ದರೂ , ನಮ್ಮನ್ನೆಲ್ಲ ಒಂದುಗೂಡಿಸಿರುವುದು ಭಕ್ತಿಯ ಚಳವಳಿ. ಭಕ್ತಿಯ ಚಳವಳಿ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ. ರಾಮಾಯಣ, ಶಂಕರಾಚಾರ್ಯ ರಿಂದ ಬಸವ, ಗಾಂಧೀಜೀ,ಅಂಬೇಡ್ಕರ್ ರ ವರೆಗೆ ಅನೇಕ ಭಕ್ತಿ ಚಳವಳಿಗಳು ನಡೆದಿವೆ ಎಂದರು.

ವಿಶ್ವದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆಗಳು ನಡೆಯುತ್ತಿರುವುದು ಖೇದಕರ ಸಂಗತಿ. ಶಾಂತಿ ಪರಿಪಾಲನೆ, ಇನ್ನೊಬ್ಬರನ್ನು ಗೌರವದಿಂದ ಕಾಣುವುದನ್ನು ತಿಳಿಸುವುದೇ ಧರ್ಮ. ಆದರೆ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದ್ದು , ಇದು ಅಂತ್ಯದ ಆರಂಭ ಎಂಬುದು ನನ್ನ ಅನಿಸಿಕೆ. ಇದನ್ನು ತಡೆಗಟ್ಟುವ ಶಕ್ತಿ ಭಾರತಕ್ಕೆ ಮಾತ್ರ ಇದೆ. ಮನ:ಪರಿವರ್ತನೆಯಿಂದ ಮಾತ್ರ ಇದು ಸಾಧ್ಯ. ಮನ:ಪರಿವರ್ತನೆ ಸಾಂಸ್ಕೃತಿಕ ಚಳುವಳಿಗೆ ಕಾರಣವಾಗಿದ್ದು, ಇದನ್ನು ಆಳ್ವಾಸ್ ಸಂಸ್ಥೆ ಸಾಧ್ಯವಾಗಿಸುತ್ತಿದೆ. 21ನೇಯ ಶತಮಾನ, ಜ್ಞಾನದ ಶತಮಾನ. ಆಳ್ವಾಸ್ ಸಂಸ್ಥೆ ಸರಸ್ವತಿಯ ಮಂದಿರ. ಪರಮಹಂಸ ಸರಸ್ವತಿ ದೇವರ ವಾಹನ. ಈ ಪಕ್ಷಿ ಎತ್ತರಕ್ಕೆ ಹಾರುವ ಎತ್ತರಕ್ಕೆ ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಕೀರ್ತಿ ಗಳಿಸಬೇಕು ಎಂದರು.

ಸ್ಕೌಟ್ ಗೈಡ್ಸ್ ನ ರಾಷ್ಟ್ರೀಯ ಅಧ್ಯಕ್ಷ, ಹಾಗೂ ರಾಜ್ಯಸಭಾ ಸದಸ್ಯರಾದ ಅನಿಲ್ ಜೈನ್ ಮಾತನಾಡಿ, ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಜಾಂಬೂರಿ ಆಯೋಜನೆಗೆ ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಕೃತಜ್ಞತೆಗಳು, ಜಾಂಬೂರಿ ಮೂಲಕ ಪ್ರಧಾನ ಮಂತ್ರಿಯವರ ಏಕ್ ಭಾರತ್-ಶ್ರೇಷ್ಠ ಭಾರತ್ ಪರಿಕಲ್ಪನೆ ಅನಾವರಣಗೊಂಡಿದೆ. ಸಾಂಸ್ಕೃತಿಕ, ಪರಂಪರೆ, ಸಾಂಪ್ರದಾಯಿಕ ವೈಭವ ಈ ಮೂಲಕ ಮೇಳೈಸಿದ್ದು, ಯುವ ಸಾಂಸ್ಕೃತಿಕ ಒಗ್ಗಟ್ಟು ಎದ್ದುಕಾಣುತ್ತಿದೆ ಎಂದು ಹೇಳಿದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಶಾಸಕರಾದ ಉಮನಾಥ್ ಕೋಟ್ಯಾನ್, ಸಿ.ಟಿ.ರವಿ,
ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ಪಿ‌ಜಿ.ಆರ್. ಸಿಂಧ್ಯಾ, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ,ಶ್ರೀಪತಿ ಭಟ್
ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ಡಾ. ಮೋಹನ್ ಆಳ್ವಾ ಸ್ವಾಗತಿಸಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!