ಸ್ವಾತಂತ್ರ ಹೋರಾಟಗಾರರ ಸವಿನೆನಪಿಗಾಗಿ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮ! ಜಿ.ಎಂ.ಸಿದ್ದೇಶ್ವರ್

amruta barati

ದಾವಣಗೆರೆ: ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ತಮ್ಮ ಜೀವವನ್ನೇ ಪಣಕ್ಕಿಟ್ಟು ನಾಡಿ, ನುಡಿಗೆ ತಮ್ಮ ಜೀವಿತಾವಧಿಯನ್ನೇ ಅರ್ಪಿಸಿದ ಮಹನೀಯರ ನೆನಪಿಗಾಗಿ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಬಂದು 75 ವರ್ಷವಾಗಿದೆ. ಅದಕ್ಕಾಗಿ ಹೋರಾಡಿದವರು, ಜೈಲಿಗೆ ಹೋದವರು ಬಹಳಷ್ಟು ಹಿರಿಯರಿದ್ದಾರೆ. ಅನೇಕರು ಸ್ವಾತಂತ್ರ‍್ಯಕ್ಕಾಗಿ ಜೀವವನ್ನೇ ಅರ್ಪಿಸಿದ್ದಾರೆ. ಹೋರಾಟ ಮಾಡಿದ ಎಲ್ಲಾ ಮಹನೀಯರ ನೆನಪಿಗಾಗಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಈ ಕಾರ್ಯಕ್ರಮ ಬಹು ವಿಶೇಷವಾದದ್ದು, ನಾವೆಲ್ಲರೂ ಸ್ವಾತಂತ್ರ‍್ಯ ಹೋರಾಟಗಾರರ ಸ್ಮರಣೆ ಮಾಡಬೇಕು. ಜಿಲ್ಲೆಯಲ್ಲಿ ಈ ಸಮಾರಂಭದ ಮೂಲಕ ಹೋರಾಟಗಾರರಿಗೆ ಗೌರವ ನೀಡಲಾಗುತ್ತಿದೆ. ಇದೇ ವೇಳೆ ಹೋರಾಟಗಾರರಿಗೆ ಸನ್ಮಾನ ಮಾಡಬೇಕು ಎಂದು ಸಲಹೆ ನೀಡಿದರು.

 

ಭಾಷಣಕ್ಕಿಂತ ಕೃತಿ ಮುಖ್ಯ ಇದನ್ನು ನಿರೂಪಿಸಿದವರು ಪ್ರಧಾನಿ ನರೇಂದ್ರ ಮೋದಿ. ಕೋವಿಡ್ ಸಮಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿದರು. ವೈದ್ಯರು, ಶ್ರುಶೂಷಕರು ಕೆಲಸ ಮಾಡಿದ್ದಾರೆ. ಅವರೆಲ್ಲರ ಶ್ರಮದಿಂದ ನಾವಿಂದು ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಪ್ರಧಾನಿ ಮೋದಿ ವಿಶ್ವ ನಾಯಕರಾಗಿದ್ದಾರೆ. 18 ರಿಂದ 20 ತಾಸು ಕೆಲಸ ಮಾಡಿದವರು ಪ್ರಧಾನಿ. ಹೊರದೇಶದವರು ಇನ್ನೂ ಕೋವಿಡ್ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಆದರೆ ನಮ್ಮ ದೇಶ ಕೋವಿಡ್ ನಿರ್ವಹಣೆಯಲ್ಲಿ ಯಶಸ್ಸು ಕಂಡಿದೆ ಎಂದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಬೆಂಗಳೂರಿನ ಪ್ರಾಧ್ಯಾಪಕಿ ಡಾ. ವನಜಾಕ್ಷಿ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಕಾಣುವ ನಮ್ಮ ಭಾರತ ಜಗತ್ತಿನ ಏಳಿಗೆಗಾಗಿ ಉಳಿದುಕೊಳ್ಳಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಮೃತ ಮಥನದ ವೇಳೆ ಅಮೃತದ ಜೊತೆಗೆ ಹಾಲಾಹಲ ಬಂದಾಗ ಶಿವ ಅದನ್ನು ಕುಡಿದು, ಜೀವ ಸಂಕುಲವನ್ನು ಉಳಿಸಿದಂತೆ, ದೇಶಕ್ಕೆ ಸ್ವಾತಂತ್ರ‍್ಯ ತರುವ ನಿಟ್ಟಿನಲ್ಲಿ ಹಲವಾರು ಮಹನೀಯರು ತ್ಯಾಗ, ಬಲಿದಾನಗೈದಿದ್ದಾರೆ. ಅವರನ್ನು ಸ್ಮರಿಸುವ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಅಮೃತ ಭಾರತಿ ಆತ್ಮನಿರ್ಭರತೆಯ ಹಾಗೂ ಸ್ವಾಭಿಮಾನದ ಸಂಕೇತವಾಗಬೇಕಿದೆ ಎಂದು ಹೇಳಿದರು.

ಯಾವ ರಾಷ್ಟ್ರ ನಾಗರೀಕತೆ ಕಲಿಸಿತೋ, ಜ್ಞಾನದ ತಾಣವಾಗಿತ್ತೋ ಹಾಗೂ ಸಂಪತ್ತಿನ ಗಣಿಯಾಗಿತ್ತೋ ಅಂತಹ ಭಾರತದ ಮೇಲೆ ಅನೇಕ ಪರಕೀಯರ ಆಕ್ರಮಣಗಳು ಹಲವು ವರ್ಷಗಳ ಕಾಲ ನಡೆದಿದೆ. ಬ್ರಿಟೀಷರನ್ನು ಹೊಡೆದೋಡಿಸುವಲ್ಲಿ ಲಕ್ಷಾಂತರ ಸ್ವಾತಂತ್ರ‍್ಯ ಹೋರಾಟಗಾರರು ಪ್ರಾಣತೆತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ವೀರ ಸಾವರ್ಕರ್, ಭಗತ್ ಸಿಂಗ್, ಬಾಲಗಂಗಾಧರ ತಿಲಕ್, ವಲ್ಲಭಭಾಯ್ ಪಟೇಲ್, ಚಂದ್ರಶೇಖರ ಆಜಾದ್, ಸುಭಾಶ್ಚಂದ್ರ ಬೋಸ್, ಗಾಂಧೀಜಿ, ಅಂಬೇಡ್ಕರ್ ಅಂತಹವರನ್ನು ಸ್ಮರಿಸುವ ದಿನ ಇದಾಗಿದೆ. ಇಂದು ಸಾವರ್ಕರ್ ಜನ್ಮದಿನವೂ ಹೌದು ಎಂದರು.

ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಸ್ವಾಗತಿಸಿದರು. ದೀಪಾ ನಿರೂಪಿಸಿದರು. ಸಮಾರಂಭದಲ್ಲಿ ಶಾಸಕ ಎಸ್.ಎ ರವೀಂದ್ರನಾಥ್, ಮೇಯರ್ ಜಯಮ್ಮ ಗೋಪಿನಾಯ್ಕ್, ಉಪಮೇಯರ್ ಗಾಯತ್ರಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ ರಿಷ್ಯಂತ್, ಸಿಇಒ ಡಾ. ಚನ್ನಪ್ಪ, ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹೆಚ್.ಬಿ ಮಂಜುನಾಥ್ ಎಸ್.ಟಿ ವೀರೇಶ್ ಇನ್ನು ಹಲವರಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!