ಆಶ್ರಯ ಸಮಿತಿಯಲ್ಲಿ ಲೋಪ, ನಾಗರೀಕರ ಪ್ರತಿಭಟನೆ

ದಾವಣಗೆರೆ.ಜು.೧೫; ಆಶ್ರಯ ಸಮಿತಿಯಲ್ಲಿ ಅರ್ಹ ಫಲಾನುಭವಿಗಳ ಬದಲು ಬದಲಿ ಫಲಾನುಭವಿಗಳ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡಿನ ನಾಗರೀಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಕರ್ನಾಟಕ ಮಾದಿಗ ದಂಡೋರ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯ ನಾಗರೀಕರು, ಪಾಲಿಕೆ ಅಧಿಕಾರಿಗಳಿಂದಲೇ ಈ ಲೋಪ ಆಗಿದ್ದು, ತಕ್ಷಣವೇ ಸರಿಪಡಿಸುವಂತೆ ಆಗ್ರಹಿಸಿದರು.
ಕಳೆದ 25-30 ವರ್ಷಗಳಿಂದ ಬಸಾಪುರದ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳಲಾಗಿದೆ. ಆದರೆ, ಆಶ್ರಯ ಸಮಿತಿ ನಿಜವಾದ ಫಲಾನುಭವಿಗಳ ಕೈ ಬಿಟ್ಟಿದೆ. ಅಲ್ಲದೇ ತನಗೆ ಬೇಕಾದವರ ಹೆಸರು ಸೇರಿಸಿದೆ. ಈ ಲೋಪ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕೂಡಲೇ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಬೇಕು. ಮನೆ ಇಲ್ಲದವರಿಗೆ ಮನೆ ನಿರ್ಮಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಪಾಲಿಕೆ ಆಯುಕ್ತ ವಿಶ್ವನಾಥ್ಮುದ್ದಜ್ಜಿ, ಈ ಕುರಿತಂತೆ ಆಶ್ರಯ ಶಾಖೆಯಲ್ಲಿ ಪರಿಶೀಲಿಸಿ ತಪ್ಪುಗಳು ಆಗಿದ್ದರೆ ಸರಿಪಡಿಸಿಕೊಳ್ಳೋಣ. ಯಾರಿಗೆ ಅಗತ್ಯವಿದೆಯೋ ಅವರಿಗೆ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು ಇದ್ದರು