Award: ಅಂಚೆ ಇಲಾಖೆಯ ವಿರೂಪಾಕ್ಷಪ್ಪರಿಗೆ ಕೇಂದ್ರದ ‘ಅನುಭವ’ ಪ್ರಶಸ್ತಿ

ದಾವಣಗೆರೆ:(Award) ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಒ. ವಿರೂಪಾಕ್ಷಪ್ಪ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಅನುಭವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಿವೃತ್ತರಾಗುತ್ತಿರುವ ಹಾಗೂ ನಿವೃತ್ತ ಕೇಂದ್ರ ಸರ್ಕಾರದ ನೌಕರರು ತಮ್ಮ ಅನುಭವ ಹಂಚಿಕೊಳ್ಳಲು ಅನುಭವ್ ಎಂಬ ಆನ್ಲೈನ್ ವೇದಿಕೆ ರೂಪಿಸಲಾಗಿತ್ತು. ಈ ವೇದಿಕೆಯಲ್ಲಿ ಅವರು ತಮ್ಮ ಅನುಭವ ಹಂಚಿಕೊಳ್ಳಬೇಕಿತ್ತು.
ಈ ವರ್ಷದ ರಾಷ್ಟ್ರೀಯ ಅನುಭವ ಪುರಸ್ಕಾರಕ್ಕೆ ಕೇಂದ್ರ ಸರ್ಕಾರದ ನೌಕರರಷ್ಟೇ ಅಲ್ಲದೇ, ಸರ್ಕಾರಿ ಸ್ವಾಮ್ಯದ ಉದ್ಯಮಗಳು ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಉದ್ಯೋಗಿಗಳನ್ನೂ ಪರಿಗಣಿಸಲಾಗಿತ್ತು.
42 ಸಚಿವಾಲಯಗಳು, ಇಲಾಖೆಗಳು ಹಾಗೂ ಸಂಘಟನೆಗಳ 1,459 ನಿವೃತ್ತರು ತಮ್ಮ ಅನುಭವ ಬರಹಗಳನ್ನು ಸಲ್ಲಿಸಿದ್ದರು.
ಈ ರೀತಿಯ ಬರಹ ಸಲ್ಲಿಸಿದ ಅಂಚೆ ಕಚೇರಿಗಳ ನಿವೃತ್ತ ಹಿರಿಯ ಅಧೀಕ್ಷಕ ಒ. ವಿರೂಪಾಕ್ಷಪ್ಪ ಅವರು ಅನುಭವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಒಟ್ಟು ಐವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ಬಂಗಾರದ ಪದಕ ಹಾಗೂ 10 ಸಾವಿರ ರೂ.ಗಳ ನಗದು ಬಹುಮಾನ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಬರುವ ಆಗಸ್ಟ್ 18ರಂದು ಕೇಂದ್ರ ಪಿಂಚಣಿ ಹಾಗೂ ಪಿಂಚಣಿದಾರರ ಅಭಿವೃದ್ಧಿ ಸಚಿವ ಜಿತೇಂದ್ರ ಸಿಂಗ್ ಅವರು ಪ್ರದಾನ ಮಾಡಲಿದ್ದಾರೆ.
ವಿರೂಪಾಕ್ಷಪ್ಪ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮದವರಾಗಿದ್ದಾರೆ. 41 ವರ್ಷ ಕಾಲ ಅವರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
1982ರಲ್ಲಿ ಅವರು ಇಂಚೆ ಇಲಾಖೆಗೆ ಪೋಸ್ಟಲ್ ಅಸಿಸ್ಟೆಂಟ್ ಆಗಿ ಸೇರ್ಪಡೆಯಾಗಿದ್ದರು. ನಂತರ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಧಾರವಾಡ ಜಿಲ್ಲಾ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ ನವೆಂಬರ್ 2023ರಲ್ಲಿ ನಿವೃತ್ತರಾಗಿದ್ದಾರೆ.
ಅವರು 2020ರಿಂದ ಮೂರು ವರ್ಷ ಕಾಲ ಚಿತ್ರದುರ್ಗದ ಅಂಚೆ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ದಾವಣಗೆರೆ ವಿಭಾಗ 2022ರ ಮೇ 1ರಂದು ಉದ್ಘಾಟನೆಯಾಗಿತ್ತು.
ದಾವಣಗೆರೆ ವಿಭಾಗದ ಸ್ಥಾಪನೆಯ ಕುರಿತ ಪ್ರಸ್ತಾಪ ರೂಪಿಸಿದ್ದು ಹಾಗೂ ಕಾರ್ಯಗತಗೊಳಿಸಿದ್ದು, ತಮ್ಮ ಅನುಭವ ಕಥನದಲ್ಲಿ ವಿಶೇಷವಾಗಿ ಉಲ್ಲೇಖಿಸಿದ್ದೆ. ತಮ್ಮ ಪ್ರಶಸ್ತಿಗೆ ಇದು ಪ್ರಮುಖ ಕಾರಣವಾಗಿದೆ ಎಂದು ವಿರೂಪಾಕ್ಷಪ್ಪ ತಿಳಿಸಿದ್ದಾರೆ.