ಮಾನವ ಬಂಧುತ್ವದಿಂದ ಬಸವ ಪಂಚಮಿ ಆಚರಣೆ

ದಾವಣಗೆರೆ: ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ನಾಗರಪಂಚಮಿ ಹಬ್ಬವನ್ನು ಬಸವ ಪಂಚಮಿ ಹೆಸರಿನಲ್ಲಿ ನಗರದ ಸರಸ್ವತಿ ಬಡಾಣೆಯಲ್ಲಿನ ದುರ್ಗಾಂಬಿಕಾ ಪ್ರೌಢ ಶಾಲೆಯಲ್ಲಿ ಆಚರಿಸಲಾಯಿತು.
ಇದೇ ವೇಳೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಮಲ್ಲಿಕಾರ್ಜುನ ಆರ್. ಹಲಸಂಗಿ, ೧೨ನೇ ಶತಮಾನದಲ್ಲಿ ಬಸವಣ್ಣ ಪ್ರಶ್ನೆಮಾಡುವ ಮೂಲಕ ವೈಚಾರಿಕ, ವೈಜ್ಞಾನಿಕ ಮಾನವಿಯತೆಯ ಚಳುವಳಿಯ ಕಟ್ಟಿದರು, ಅದೇ ರೀತಿ ವಿದ್ಯಾರ್ಥಿಗಳು ಸಹ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಸಂಚಾಲಕ ಶಿವಕುಮಾರ್ ಮಾಡಾಳ್ ಪ್ರಸ್ತಾವಿಕವಾಗಿ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಅನೇಕ ಪ್ರಗತಿ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೌಢ್ಯದ ವಿರುದ್ಧ ಸಮರ ಸಾರಿದೆ. ಸಾಂಸ್ಕೃತಿಕ ಹಬ್ಬಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹಬ್ಬದಲ್ಲಿ ಅಡಗಿರುವ ಮೌಢ್ಯವನ್ನ ಬದಲಿಸುವ ಸಣ್ಣ ಪ್ರಯತ್ನ ವೇದಿಕೆ ಮಾಡುತ್ತ ಬರುತ್ತಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಪರಮೇಶ್ವನಾಯ್ಕ ಅಧ್ಯಕ್ಷತೆ ವಹಿಸಿದ್ದರು, ಮಂಜುನಾಥ ವೈ. ಕಬ್ಬೂರು, ವಸಂತ ಹೊನ್ನೂರು, ಕಂಬರಾಜ್ ಕೆ.ಜಿ., ತೋರಣ ಕುಮಾರ್, ಗುರುರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶ್ರೀನಿವಾಸ್ ನಿರೂಪಿಸಿದರು, ಚಿದಂನದ ರೆಡ್ಡಿ ಸ್ವಾಗತಿಸಿದರು.