ಬಸವಣ್ಣನವರು ಅನುಭವ ಮಂಟಪದ ಮೂಲಕ ವಿಶ್ವ ಪ್ರಜಾಪ್ರಭುತ್ವ ಸಂಸತ್ತಿಗೆ ನೆಲೆಗಟ್ಟನ್ನು ಒದಗಿಸಿದವರು ; ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ

ನವದೆಹಲಿ : ಇಲ್ಲಿನ ದೆಹಲಿ ಕರ್ನಾಟಕ ಸಂಘದ ಸಭಾ ಭವನದಲ್ಲಿ ಬಸವಣ್ಣನವರ ೪೪ ವಚನಗಳ ಆಧಾರಿತ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ನೃತ್ಯರೂಪಕದ
ಕನ್ನಡ ಅವತಣಿಕೆಯ ಪ್ರದರ್ಶನದ ಮುನ್ನ ಆಯೋಜಿಸಿದ್ದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕರ್ನಾಟಕ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳಿಗೆ ಹೆಸರಾದ ನಾಡು. ಅಂಥಹ ನಾಡಿನಲ್ಲಿ ಮತ್ತೆ ಮತ್ತೆ ಎಲ್ಲರೂ ನೆನಪಿಸಿಕೊಳ್ಳುವುದು ವಿಶ್ವಗುರು ಬಸವಣ್ಣನವರನ್ನು. ಬಸವಣ್ಣನವರು ಅನುಭವ ಮಂಟಪದ ಮೂಲಕ ವಿಶ್ವದ ಪ್ರಜಾಪ್ರಭುತ್ವದ ಸಂಸತ್ತಿಗೆ ನೆಲೆಗಟ್ಟನ್ನು ಒದಗಿಸಿದವರು.
ಈ ಕಾರಣಕ್ಕೇ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಮೋದಿಯವರು ದೇಶ-ವಿದೇಶಗಳಲ್ಲಿ ಮತ್ತೆ- ಮತ್ತೆ ಬಸವಣ್ಣನವರ ಹೆಸರನ್ನು ಹೇಳುತ್ತಿರುತ್ತಾರೆ. ಬಸವಣ್ಣ ಬಡವ-ಬಲ್ಲಿದ, ಗಂಡು-ಹೆಣ್ಣು, ಶ್ರೇಷ್ಠ-ಕನಿಷ್ಠ ಮೊದಲಾದ ಅಸಮಾನತೆಗಳನ್ನು ಹೋಗಲಾಡಿಸಲು, ದಲಿತ ವರ್ಗದವರು ತಲೆಯೆತ್ತಿ ಬಾಳುವಂತೆ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ದೊಡ್ಡ ಚಳುವಳಿಯನ್ನೇ ಮಾಡಿದರು. ಅದರ ಪರಿಣಾಮ ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿತು. ಬಸವಣ್ಣನವರದು ಮುಗಿದ ಕೈ, ಬಾಗಿದ ತಲೆ. ತನಗಿಂತ ಕಿರಿಯರಿಲ್ಲ ಎನ್ನುವ ವಿನೀತ ಭಾವ. ಅವರು ಕ್ರಾಂತಿಕಾರಿಗಳಾಗಿರುವಂತೆ ಭಕ್ತಿ ಭಂಡಾರಿಯೂ ಹೌದು.
ಆದರೂ ಬಸವಣ್ಣ `ಭಕ್ತಿ ಇಲ್ಲದ ಬಡವ ನಾನಯ್ಯ’ ಎಂದು ವಿನೀತತೆಯನ್ನು ತೋರಿಸುತ್ತಾರೆ. ಬಸವಣ್ಣನವರ ಭಕ್ತಿಯ ಪರಿಮಳವನ್ನು ಹೊರಸೂಸುವ ಅವರ ೪೪ ವಚನಗಳನ್ನು `ನೀನಲ್ಲದೆ ಮತ್ತಾರು ಇಲ್ಲವಯ್ಯಾ’ ಎನ್ನುವ ನೃತ್ಯ ರೂಪಕದಲ್ಲಿ ನಮ್ಮ ಕಲಾವಿದರು ಇದೀಗ ನಿಮ್ಮ ಮುಂದೆ ಪ್ರದರ್ಶಿಸಲಿದ್ದಾರೆ. ಬಸವಣ್ಣನವರು ತಳ ಸಮುದಾಯದ ಚೆನ್ನಯ್ಯ, ಕಕ್ಕಯ್ಯ, ಹರಳಯ್ಯ ಮೊದಲಾದವರು ನನ್ನ ಬಂಧುಗಳು ಎನ್ನುವ ಮೂಲಕ ಹುಟ್ಟಿನಿಂದ ಬಂದ ಶ್ರೇಷ್ಠತನವನ್ನು ಹೋಗಲಾಡಿಸಿಕೊಂಡಿದ್ದಾರೆ. ಬಸವಣ್ಣನವರಂತಹ ವ್ಯಕ್ತಿತ್ವವದವರನ್ನು ವಿಶ್ವದಲ್ಲಿ ಮತ್ತೊಬ್ಬರನ್ನು ಕಾಣಲಾರೆವು.
ನಮ್ಮ ಈ ನೃತ್ಯರೂಪಕವನ್ನು ನೋಡಿದ ಉತ್ತರ ಭಾರತೀಯರು ನಮಗೆ ಮೀರಾ, ಕಬೀರ್, ತುಲಸೀದಾಸ್ ಮೊದಲಾದ ಸಂತಕವಿಗಳು ಗೊತ್ತು ಆದರೆ ಬಸವಣ್ಣ ಗೊತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಬಸವಣ್ಣನವರ ಪರಿಚಯ ಇನ್ನೂ ನಮ್ಮ ದೇಶದಲ್ಲಿಯೇ ಸರಿಯಾಗಿ ಆಗಿಲ್ಲವೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಡೀ ಜಗತ್ತಿಗೇ ಬಸವಾದಿ ಶರಣರನ್ನು ಪರಿಚಯಿಸುವುದು ಕನ್ನಡಿಗರೆಲ್ಲರ ಜವಾಬ್ದಾರಿ. ಆದರೆ ಭಾಷೆ, ಜಾತಿ, ಧರ್ಮ ಮೊದಲಾದವುಗಳ ಹೆಸರಿನಲ್ಲಿ ಬಸವಣ್ಣನವರಿಗೆ ಚೌಕಟ್ಟನ್ನು ಹಾಕಿ ಅವರನ್ನು ಹೊರಗೇ ಬಿಟ್ಟಿಲ್ಲ. ಆಯಾ ಭಾಷೆಯ ನಾಟಕ, ನೃತ್ಯರೂಪಕ, ಸಂಗೀತಗಳ ಮೂಲಕ ಬಸವಾದಿ ಶರಣರನ್ನು ಪರಿಚಯಿಸುವ ಅಗತ್ಯತೆ ಎಂದಿಗಿಂತ ಇಂದಿದೆ.
ನಮ್ಮ ಶಿವಕುಮಾರ ಕಲಾಸಂಘದ್ದು ಇದು ದುಸ್ಸಾಹಸದ ಕಾರ್ಯ. ಇದುವರೆಗೂ ಸಾಮಾನ್ಯ ಬಸ್ಸಿನಲ್ಲಿ ೫೦೦೦ ಕಿ. ಮೀ. ಪ್ರಯಾಣಿಸಿ ೨೧ ಪ್ರದರ್ಶನಗಳನ್ನು ನೀಡಿದ್ದಾರೆ. ಕಲಾವಿದರಿಗೆ ನಮಗೆ ಊಟ, ವಸತಿ ಮುಖ್ಯವಲ್ಲ; ತತ್ವ ಪ್ರಚಾರಕ್ಕಾಗಿ ಬಂದಿದ್ದೇವೆ ಎನ್ನುವ ಛಲ ಇದೆ, ಮನೋಬಲ ಇದೆ. ನಮ್ಮಲ್ಲಿರುವ ಕಲಾವಿದರೆಲ್ಲರೂ ಪದವೀಧರರು. ಇದರಲ್ಲಿ ಕೆಲವರು ಉದ್ಯೋಗವನ್ನೂ ಬಿಟ್ಟು ಬಂದಿದ್ದಾರೆ. ಅನಾರೋಗ್ಯಕ್ಕೆ ತುತ್ತಾದರೂ ಪ್ರದರ್ಶನ ನಿಲ್ಲಿಸಿಲ್ಲ. ಅವರ ಈ ಸೇವೆ ಶ್ಲಾಘನೀಯವಾದುದು. ಕೇಂದ್ರ ಮಂತ್ರಿಗಳಾದ ನಾರಾಯಣ ಸ್ವಾಮಿ ಯವರು ಅತ್ಯಂತ ಸರಳ ವ್ಯಕ್ತಿತ್ವದವರು.
ನಮ್ಮ ಫೋನ್ ಕರೆಗೂ ಸ್ಪಂಧಿಸುವರು. ಜನಪ್ರತಿನಿಧಿಗಳಾದವರು ಹೀಗಿರಬೇಕು. ಆಗ ಅವರು ಸಮಾಜ ಸೇವಕರಾಗಲು ಸಾಧ್ಯ. ನಮ್ಮ ಈ ನೃತ್ಯಪ್ರದರ್ಶನದ ಕಾರ್ಯಯೋಜನೆಗೆ ೬೦ ಲಕ್ಷ ಹಣ ವೆಚ್ಚವಾಗುವುದು. ಹಣದ ಕೊರತೆಯ ಕಾರಣಕ್ಕೆ ತತ್ವ ಪ್ರಚಾರಕ್ಕೆ ಹಿನ್ನಡೆಯಾಗಬಾರದು. ನಾರಾಯಣ ಸ್ವಾಮಿಯವರು ಕೇಂದ್ರ ಸರಕಾರದಿಂದ ಅನುದಾನ ಕೊಡಿಸುವೆವೆಂದು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಈ ಕೆಲಸ ಮಾಡಿದರೆ ನಮ್ಮ ಕಾರ್ಯ ಇನ್ನಷ್ಟು ಸುಗಮವಾಗಿ ನಡೆಯುವುದು. ಕರ್ನಾಟಕ ಸಂಘದವರು ನಮ್ಮ ಕಲಾವಿದರು ಇಲ್ಲಿ ಇರುವಷ್ಟು ದಿನ ಅಂದರೆ ೪-೫ ದಿನ ಊಟ-ವಸತಿ ಕೊಡಲು ಒಪ್ಪಿದ್ದಾರೆ. ಇಲ್ಲಿ ಇನ್ನೂ ೪-೫ ಪ್ರದರ್ಶನಗಳಿವೆ.
ಒಟ್ಟು ೨ ತಿಂಗಳ ಕಾಲಾವಧಿಯಲ್ಲಿ ಈಗಾಗಲೇ ಒಂದು ತಿಂಗಳು ಮುಗಿದಿದೆ. ಇದುವರೆಗೂ ಕಲಾವಿದರು ೨೧ ಪ್ರದರ್ಶನಗಳನ್ನು ನೀಡಿದ್ದಾರೆ. ಮುಗಿಯುವುದರೊಳಗೆ ೬೦ ಪ್ರದರ್ಶನಗಳನ್ನು ನೀಡಬಹುದು. ಪ್ರದರ್ಶನಕ್ಕೆ ಹೆಚ್ಚಿನ ಬೇಡಿಕೆ ಇದೆ. ೨೪ ಜನ ಕಲಾವಿದರೆಲ್ಲರೂ ಹೆಣ್ಣುಮಕ್ಕಳಾಗಿದ್ದು ಮನೆ-ಉದ್ಯೋಗ-ಓದನ್ನು ಬಿಟ್ಟು ಬಂದಿದ್ದಾರೆ. ಅವರ ಮಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಪ್ರದರ್ಶನದ ಬೇಡಿಕೆಗಳನ್ನು ಈಡೆರಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಸಚಿವರಾದ ನಾರಾಯಣ ಸ್ವಾಮಿ ಮಾತನಾಡಿ `ತುಮ್ಹಾರೆ ಸಿವಾ ಔರ್ ಕೋಯಿ ನಹಿ’ ವಚನ ಸಂಸ್ಕೃತಿ ಅಭಿಯಾನ ಕನ್ನಡದ ಸಂಸ್ಕೃತಿ, ಜೀವನ ಪದ್ಧತಿ, ಸಂಸ್ಕಾರಗಳಿಗೆ ಬೆಳಕು ಚೆಲ್ಲುವ ಕಾರ್ಯಕ್ರಮ. ಇದು ಕನ್ನಡಿಗರ ಹೃದಯವನ್ನು ಮುಟ್ಟುವಂತಹದ್ದು. ಪAಡಿತಾರಾಧ್ಯ ಶ್ರೀಗಳು ಸಾನ್ನಿಧ್ಯವಹಿಸಿರುವುದು ಸಭೆಗೆ ಮತ್ತಷ್ಟು ಮೆರಗು ನೀಡಿದೆ. ಪೂಜ್ಯರು ಬಸವಣ್ಣನವರ ರೀತಿಯಲ್ಲಿ ಸಾಮಾಜಿಕ ಪರಿವರ್ತನೆ ಮತ್ತು ತತ್ವಗಳನ್ನು ತಿಳಿಸುವ ಕಾರ್ಯವನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ.
ಬಸವಣ್ಣನವರು ಸ್ಥಾಪಿಸಿದ `ಅನುಭವ ಮಂಟಪ’ ವಿಶ್ವಕ್ಕೇ ಪ್ರಜಾಪ್ರಭುತ್ವದ ತಳಹದಿಯ ಒದಗಿಸಿಕೊಟ್ಟಿದೆ. ಬಸವಣ್ಣನವರ ತತ್ವ ಸಿದ್ಧಾಂತಗಳು ಎಂದೆAದಿಗೂ ಪ್ರಸ್ತುತವಾದವು. ಅವರು ಆರ್ಥಿಕ ಸಚಿವರಾಗಿ, ಜನಪ್ರತಿನಿಧಿಯಾಗಿ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಮೊಟ್ಟಮೊದಲಬಾರಿಗೆ ಮಹಿಳೆಯರಿಗೆ ಸಮಾನತೆಯನ್ನು ನೀಡಿದವರು. ಶ್ರೀಮಠದಲ್ಲಿ ಬಸವಾದಿ ಶರಣರ ತತ್ವ-ಸಿದ್ಧಾಂತಗಳನ್ನು ಶಿಕ್ಷಣ, ಸಂಸ್ಕೃತಿ, ಕಲೆ, ನಾಟಕ, ಸಾಹಿತ್ಯ ಮೊದಲಾದವುಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಿತ್ಯವೂ ಶ್ರಮಿಸುತ್ತಿದ್ದಾರೆ.
ಪೂಜ್ಯರ ಈ ಕಾರ್ಯಕ್ಕೆ ನನ್ನಿಂದಾದ ಎಲ್ಲ ಸಹಕಾರವನ್ನೂ ನೀಡುವೆ ಎಂದರು. ವೇದಿಕೆಯ ಮೇಲೆ ಉಪಸ್ಥಿತರಿದ್ದ ರಂಗಸಂಘಟಕರಾದ ಶ್ರೀನಿವಾಸ ಜಿ ಕಪ್ಪಣ್ಣ ಮಾತನಾಡಿ ಸಚಿವರಾದ ನಾರಾಯಣ ಸ್ವಾಮಿಯವರು `ತುಮ್ಹ್ಹಾರೆ ಸಿವಾ ಔರ್ ಕೋಯಿ ನಹೀ’ ಎನ್ನುವ ನೃತ್ಯರೂಪಕ ಇಡೀ ದೇಶದಲ್ಲಿ ಸಂಚರಿಸಲು ಅರ್ಥಿಕ ನೆರವು ನೀಡುತ್ತಾರೆ ಎನ್ನುವ ಭರವಸೆ ನೀಡಿದ ಕಾರಣಕ್ಕೇ ನಮ್ಮ ಈ ಕಾರ್ಯಯೋಜನೆ ಜಾರಿಗೊಂಡಿದೆ. ಇದುವರೆಗೆ ನಮ್ಮ ತಂಡ ಸಾಮಾನ್ಯ ಬಸ್ಸಿನಲ್ಲಿ ದೇಶದ ೯ ರಾಜ್ಯಗಳಲ್ಲಿ ೫೪೧೦ ಕಿ ಮಿ ಸಂಚರಿಸಿ ೨೧ ಪ್ರದರ್ಶನಗಳನ್ನು ನೀಡಿದೆ. ಉಷ್ಣಾಂಶ, ಛಳಿ, ಮಳೆ, ಗಾಳಿ ವಾತಾವರಣದಲ್ಲಿ ಏರುಪೇರಾಗುತ್ತಿದ್ದರೂ ಎಲ್ಲಿಯೂ ಪ್ರದರ್ಶನ ನಿಲ್ಲಿಸದೆ ನೀಡುತ್ತ ಬಂದಿದ್ದಾರೆ.
ಪ್ರದರ್ಶನ ನೋಡಿದ ಪ್ರೇಕ್ಷಕರು ಪ್ರದರ್ಶನ ಮುಗಿದ ನಂತರ ನಿಂತು ಚಪ್ಪಾಳೆ ಹೊಡೆಯುವ ಮೂಲಕ ಗೌರವಿಸಿದ್ದಾರೆ. ಪ್ರೇಕ್ಷಕರ ಸ್ಪಂಧನೆ ಅಪೂರ್ವವಾಗಿದೆ. ನಮ್ಮ ತಂಡಕ್ಕೆ ಲಕ್ನೌದಲ್ಲಿ ಸಿಕ್ಕ ಅಪೂರ್ವ ಸ್ವಾಗತ, ಗೌರವ ಮರೆಯುವಂಥದ್ದಲ್ಲ. ನಮ್ಮ ತಂಡಕ್ಕೆ ಬಹಳ ವಿಶಿಷ್ಟವಾದ ಅನುಭವವಾಗಿದೆ. ಬಸವಣ್ಣನವರ ಸಾಹಿತ್ಯಕ್ಕೆ ಮೈ ಜುಂ ಎನಿಸುವ ಸಂಗೀತವನ್ನು ಖ್ಯಾತ ಸಂಗೀತಗಾರ ಅಶ್ವಥ್ ನೀಡಿದ್ದಾರೆ. ನಮಗೆ ಪ್ರೇಕ್ಷಕರ ಚಪ್ಪಾಳೆ, ಪ್ರೋತ್ಸಾಹವೇ `ಶಿವ’ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷÀ ನಾಗರಾಜ್ ಮಾತನಾಡಿ ಪಂಡಿತಾರಾಧ್ಯ ಶ್ರೀಗಳು ಸಂಗೀತ, ಸಾಹಿತ್ಯ, ಕಲೆ, ನಾಟಕ, ಸಂಸ್ಕೃತಿಯ ಮೂಲಕ ಮಾಡುತ್ತಿರುವ ಕಾರ್ಯ ಅನನ್ಯವಾದುದು.
ಇದಕ್ಕೆ ನಮ್ಮ ಸಂಘದ ಸಹಕಾರ ಯಾವತ್ತೂ ಇರುವುದು. ಕಲಾವಿದರು ದೆಹಲಿಯಲ್ಲಿರುವಷ್ಟೂ ದಿನವೂ ನಮ್ಮ ಸಂಘ ಆತಿಥ್ಯ ನೀಡುವುದು. ಇಂದು ನೀಡುವ ಪ್ರದರ್ಶನಕ್ಕೆ ಒಂದು ಲಕ್ಷರೂಪಾಯಿಗಳನ್ನು ನೀಡಲಾಗುವುದು ಎಂದರು. ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ರೇಣುಕುಮಾರ್ ಸ್ವಾಗತಿಸಿದರು. ಸವಿತಾ ನೆಲ್ಲಿ ವಂದಿಸಿದರೆ, ಪೂಜಾ ರಾವ್ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ಎನ್ನುವ ಕನ್ನಡ ಅವತರಣಿಕೆಯಲ್ಲಿ ನೃತ್ಯರೂಪಕ ಪ್ರದರ್ಶನಗೊಂಡಿತು. ಸಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
– ಹೆಚ್ ಎಸ್ ದ್ಯಾಮೇಶ್