Raitha Protest: ಭಾರತ್ ಬಂದ್: ಬಲವಂತದಿಂದ ಅಂಗಡಿ ಮುಂಗಟ್ಟು ಮುಚ್ಚಿಸಿದ ಪ್ರತಿಭಟನಾಕಾರರು

ದಾವಣಗೆರೆ: ಯಾವುದೇ ಒತ್ತಡ ಹಾಕಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶವಿದ್ದರೂ ಸಹ ವಿವಿಧ ರೈತಪರ ಸಂಘಟನೆಗಳು ಪಿಬಿ ರಸ್ತೆಯಲ್ಲಿರುವ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುರುವ ಘಟನೆ ನಡೆದಿದೆ.
ಕೃಷಿ ತಿದ್ದುಪಡಿ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಭಾರತ್ ಬಂದ್ಗೆ ದಾವಣಗೆರೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಗೆ ಬೆಂಬಲಿಸುವಂತೆ ಒತ್ತಾಯಿಸಿ ಸಂಘಟನೆಗಳು ಬೈಕ್ ರ್ಯಾಲಿ ನಡೆಸಿದವು.
ಕರೋನಾ ಲಾಕ್ಡೌನ್ನಿಂದ ವ್ಯಾಪಾರವಿಲ್ಲದೇ ಕಂಗಲಾಗಿದ್ದ ವ್ಯಾಪಾರಿಗಳು ಈಗಷ್ಟೆ ವ್ಯಾಪಾರ ವಹಿವಾಟು ಆರಂಭಿಸಿದ್ದು, ಹೀಗಿದ್ದರೂ ಸಹ ಕಾರ್ಮಿಕ ಮತ್ತು ರೈತಪರ ಸಂಘಟನೆಗಳು ವಿವಿಧೆಡೆ ಕಿರಾಣಿ ಅಂಗಡಿಯನ್ನು ಬಲವಂತವಾಗಿ ಬಂದ್ ಮಾಡಿಸಿದ್ದು ಕಂಡುಬಂತು.
ಪಿಬಿ ರಸ್ತೆಯ ಟ್ರಾಫಿಕ್ ಠಾಣೆಯ ಪಕ್ಕದಲ್ಲಿರುವ ಕಿರಾಣಿ ಅಂಗಡಿಯನ್ನು ರೈತ ಸಂಘಟನೆಗಳು ಒತ್ತಡಹಾಕಿ ಮುಚ್ಚಿಸಿದವು. ಈಗಾಗಲೇ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವಂತಿಲ್ಲ ಎಂದು ಎಸ್ ಪಿ ರಿಷ್ಯಂತ್ ಆದೇಶಿಸಿದ್ದರೂ ಸಹ ಎಸ್ಪಿ ಆದೇಶ ತಳ್ಳಿಹಾಕಿ ಸಂಘಟನೆಗಳು ವರ್ತಿಸಿದವು.