ಚೀಟಿನಿಧಿಗಳು ಆಪತ್ಬಾಂಧವನಂತೆ – ಜಿಲ್ಲಾ ಉಪನಿಬಂಧಕ ಅನ್ನಪೂರ್ಣ

ದಾವಣಗೆರೆ: ಚೀಟಿ ನಿಧಿಗಳು ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತ ಆಪತ್ಬಾಂಧವ ಇದ್ದಂತೆ ಎಂದು ದಾವಣಗೆರೆ ಜಿಲ್ಲಾ ಉಪನಿಬಂಧಕರಾದ ಅನ್ನಪೂರ್ಣ ಅಭಿಪ್ರಾಯ ಪಟ್ಟರು.
ಚೀಟಿ ನಿಧಿಗಳ ಸಂಘಗಳ ಒಕ್ಕೂಟದಿಂದ ದಾವಣಗೆರೆ ಜಿಲ್ಲಾ ಚೀಟಿ ನಿಧಿಗಳ ಸಂಘದ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಚೀಟಿ ನಿಧಿಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮತ್ತು ನಿರ್ವಾಹಕರುಗಳಿಗೆ ತಿಳುವಳಿಕೆಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೀಟಿ ಗುಂಪುಗಳಲ್ಲಿ ಇಲಾಖೆಯು ನೀಡುವ ಪೂರ್ವ ಮಂಜೂರಾತಿ ಪತ್ರವನ್ನು ಪರಾಮರ್ಶಿಸಿಯೇ ಸದಸ್ಯರಾಗಬೇಕು ಎಂದು ಕಿವಿಮಾತು ಹೇಳಿದರು.
ಚೀಟಿ ಸಂಸ್ಥೆಗಳು ಅನಗತ್ಯ, ಅನಾರೋಗ್ಯಕರ ಪೈಪೋಟಿಗಿಳಿಯದೆ ದಕ್ಷತೆಯಿಂದ ಕಾರ್ಯನಿರ್ವಹಿಸಿದಲ್ಲಿ ಅಂತಹ ಸಂಸ್ಥೆಗಳು ಸದೃಢವಾಗಿ ಬೆಳೆಯುತ್ತವೆ. ಪ್ರತಿಯೊಂದು ಚೀಟಿ ಸಂಸ್ಥೆಗಳೂ ತಮ್ಮ ಎಲ್ಲಾ ಚೀಟಿ ಗುಂಪುಗಳನ್ನು ಕಡ್ಡಾಯವಾಗಿ ನೊಂದಣೆ ಮಾಡಿಸಲೇ ಬೇಕು, ಇಲ್ಲದಿದ್ದಲ್ಲಿ ಇಲಾಖೆವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಹಾಯಕ ನಿಬಂಧಕರಾದ ಹೆಚ್.ಎಸ್. ಸತೀಶ್ಕುಮಾರ್ ಮಾತನಾಡಿ, ಚಂದಾದಾರರು ಅನಧಿಕೃತ ಖಾಸಗಿ ಚೀಟಿ ನಿಧಿಗಳಲ್ಲಿ ಸದಸ್ಯರಾಗದೆ, ನೊಂದಾಯಿತ ಚೀಟಿ ಸಂಸ್ಥೆಗಳಲ್ಲಿ ಮಾತ್ರ ಸದಸ್ಯರಾದಾಗ ಮಾತ್ರ ನಿಮ್ಮ ಹೂಡಿಕೆಯ ಹಣಕ್ಕೆ ಭದ್ರತೆ ಹಾಗೂ ಪಡೆದುಕೊಳ್ಳುವ ಹಣಕ್ಕೆ ಕಡಿಮೆ ಬಡ್ಡಿ ಬೀಳುತ್ತದೆ. ಹಾಗೂ ಚಂದಾದಾರರು ಚೀಟಿ ಹಣ ಪಡೆದುಕೊಂಡ ಮೇಲೆ ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್, ಜಿಲ್ಲಾ ಚೀಟಿ ನಿಧಿಗಳ ಸಂಘದ ಕಾನೂನು ಸಲಹೆಗಾರ ಎ.ಎಸ್. ಮಂಜುನಾಥ್ ಅವರು ಚೀಟಿ ನಿಧಿಗಳು ಪಡೆಯಬೇಕಿರುವ ದಾಖಲೆಗಳು ಮತ್ತು ಬಾಕಿಗಳ ವಸೂಲಾತಿಯಲ್ಲಿ ಕಾನೂನು ಪ್ರಕ್ರಿಯೆಗಳ ಬಗ್ಗೆ ಉಪನ್ಯಾಸ ನೀಡಿದರು.
ಭಾಗ್ಯರಂಗಾ ಚಿಟ್ಸ್ ಅಧ್ಯಕ್ಷರಾದ ಎಂ. ರಂಗರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸಂಘದ ನಿರ್ದೇಶಕರಾದ ಕೆ.ಪಿ.ಆರ್. ಶ್ರೀರಕ್ಷ, ಪಿ. ರವಿ, ಕೆ.ಜಿ.ಶರಣಪ್ಪ, ಅಂದನೂರು ರಾಜೇಶ್, ಬಿ.ಸತ್ಯನಾರಾಯಣ ಮೂರ್ತಿ, ನಿರ್ದೇಶಕರುಗಳಾದ ಷಣ್ಮುಖರಾಜು ಗುಜ್ಜರ್, ರೆಡ್ಡಯ್ಯ, ಪದ್ಮರಾಜ್, ಶ್ರೀನಿವಾಸ, ಡಿ.ಎಂ. ಮಲ್ಲಿಕಾರ್ಜುನ ಸ್ವಾಮಿ, ಅಗಡಿ ಸತೀಶ್ ಮತ್ತಿತರರು ಇದ್ದರು.