ಭಾರತ ಪ್ರಜಾಪ್ರಭುತ್ವದ ಜನನಿ – ಕೆ ಜಿ ವೇದಮೂರ್ತಿ ಕುರ್ಕಿ.

ದಾವಣಗೆರೆ: ಡಾ. ಬಿ ಆರ್ ಅಂಬೇಡ್ಕರ್ ರವರ ನೇತೃತ್ವದ ತಂಡ ಸಂವಿಧಾನ ವನ್ನು ರಚಿಸಿ ನಮಗೆ ಅರ್ಪಿಸಿದ್ದಾರೆ. ಸಂವಿಧಾನದ ಆಶಯಕ್ಕೆ ದಕ್ಕೆ ಬರದ ಹಾಗೆ ನಡೆದುಕೊಳ್ಳುವಂತಹ ಗುರುತರವಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ನಮ್ಮ ದೇಶದ ಬಗ್ಗೆ ನಾಡಿನ ಬಗ್ಗೆ ನಮ್ಮ ಊರಿನ ಬಗ್ಗೆ ಅಭಿಮಾನವನ್ನು ನಾವೆಲ್ಲ ಇಟ್ಟುಕೊಳ್ಳಬೇಕು. ಇಂದು ನಮ್ಮ ದೇಶ ಇಷ್ಟೊಂದು ಸುಭಿಕ್ಷೆ ಶಾಂತಿ ನೆಮ್ಮದಿಯಿಂದ ಇರಲು ನಮ್ಮ ಸಂವಿಧಾನವೇ ಕಾರಣ, ನಮ್ಮ ಸಂವಿಧಾನ ನ್ಯಾಯ,ಸಮಾನತೆ ಸ್ವಾತಂತ್ರ್ಯ ಭ್ರಾತೃತ್ವ ಎಂಬ ಮೂಲ ತತ್ವಗಳ ಹಾಗೂ ಧ್ಯೆಯೋದ್ದೇಶಗಳ ಆಧಾರದ ಮೇಲೆ ರಚಿತವಾಗಿದೆ ಎಂದು ಹೇಳುತ್ತಾ ಭಾರತವನ್ನು ಪ್ರಜಾಪ್ರಭುತ್ವದ ಜನನಿ ಎಂದು ಕರೆಯುತ್ತಾರೆ ಎಂದು ಕುರ್ಕಿ ವೇದಮೂರ್ತಿ ಗೌಡ್ರು ಮಾತನಾಡಿದರು.
ಅವರು ಇಂದು ದಾವಣಗೆರೆ ತಾಲೂಕಿನ ಕುರ್ಕಿ ಸರ್ಕಾರಿ ಪ್ರೌಢಶಾಲೆ ಯಲ್ಲಿ ಏರ್ಪಡಿಸಿದ್ದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ 167 ಮಕ್ಕಳಿಗೂ ಆಂಗ್ಲ ಭಾಷಾ ಶಬ್ದಕೋಶ ಗಳನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ 2021-22 ನೇ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಶಾಲೆಗೆ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಕು. ಜಯಲಕ್ಷ್ಮಿ ಗೆ ಹಾಗೂ ಯೋಗಾಸನದಲ್ಲಿ ವಿಭಾಗೀಯ ಮಟ್ಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಕೆ ಪಿ ವಿಕಾಸ್ ಇವರಿಗೂ ಬಹುಮಾನ ನೀಡಿ ಅಭಿನಂದಿಸಿದರು. ಹಾಗೂ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 200 ಲೀಟರಿನ ನೀರಿನ ಫಿಲ್ಟರ್ ಹಾಕಿಸಿ ಕೊಡುತ್ತೇನೆಂದು ವಾಗ್ದಾನ ಮಾಡಿದರು.
ಶ್ರೀಯುತ ಕುರ್ಕಿ ಕೆ ಜಿ ವೇದಮೂರ್ತಿ ಗೌಡ್ರು ತಮ್ಮ ತಂದೆ ದಿ. ಕೆ ಜಿ ಜಯದೇವಪ್ಪ ಗೌಡ್ರು ಮತ್ತು ತಾಯಿ ದಿ. ಸರ್ವಮಂಗಳಮ್ಮ ಇವರ ಸ್ಮರಣಾರ್ಥ ಪ್ರತೀ ವರ್ಷ ಈ ಶಾಲೆಯಲ್ಲಿ 8 ನೇ ತರಗತಿಗೆ ದಾಖಲಾಗುವ ಎಲ್ಲಾ ಮಕ್ಕಳಿಗೂ ಆಂಗ್ಲ ಶಬ್ದ ಕೋಶ ಗಳನ್ನು ಕೊಡುಗೆಯಾಗಿ ನೀಡುತ್ತಾ ಬರುತ್ತಿದ್ದಾರೆ. ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಸಿ ಜಿ ಜಗದೀಶ್ ಕೂಲಂಬಿ ಯವರು ಮಕ್ಕಳಿಗೆ ಸಂವಿದಾನಾತ್ಮಕ ಬೆಳವಣೆಗೆಯ ಐತಿಹಾಸಿಕ ಹಿನ್ನಲೆಯನ್ನು ತಿಳಿಸುತ್ತಾ, ಸಂವಿಧಾನ ರಚನೆ ಮಾಡಲು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿದೆ.ನಮ್ಮ ಸಂವಿಧಾನವು 22 ಭಾಗಗಳನ್ನು,395 ವಿಧಿಗಳನ್ನು ಹಾಗೂ 9 ಅನುಸೂಚಿಗಳನ್ನು ಒಳಗೊಂಡಂತ ಲಿಖಿತ ಬೃಹತ್ ಸಂವಿಧಾನವಾಗಿದೆ.
ಹಾಗೂ ಅಮೇರಿಕ, ಐರಿಷ್, ಕೆನಡಾ, ಇಂಗ್ಲೆಡ್, ಜರ್ಮನಿ, ಪ್ರೆಂಚ್, ದಕ್ಷಿಣ ಆಫ್ರಿಕಾ, ರಷ್ಯಾ ದೇಶಗಳ ಸಂವಿಧಾನ ದಲ್ಲಿರುವ ಕೆಲವು ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಭಾರತ ಸಂವಿಧಾನವನ್ನು ಪ್ರಜಾಪ್ರಭುತ್ವದ ಜನನಿ ಎಂದೇ ಕರೆಯಲಾಗುತ್ತಿದೆ. ಇಂತಹ ವಿಶಿಷ್ಟವಾದ ಸಂವಿಧಾನವನ್ನು ರಚಿಸಿದಂತಹ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರಿಗೆ ನಾವು ಋಣಿಯಾಗಿರಬೇಕು. ಎಂದು ಮಕ್ಕಳಿಗೆ ಸವಿಧಾನ ಕುರಿತಾಗಿ ಪರಿಚಯಿಸಿದರು.
ಶಾಲಾ ಮುಖೋಪಾಧ್ಯಾಯರಾದ ಆರ್ ಗಣೇಶಾಚಾರಿ ಅವರು ಅಧ್ಯಕ್ಷತೆ ವಹಿಸಿ ದಾರಿಗಳಾದ ವೇದಮೂರ್ತಿ ಗೌಡ್ರು ಅವರನ್ನು ಅಭಿನಂದಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಓಂಕಾರಪ್ಪನವರು ಧ್ವಜಾರೋಹಣ ನೆರವೇರಿಸಿದರು. ಎಸ್ಡಿಎಂಸಿ ಸದಸ್ಯರಾದ ನಾಗರಾಜ್, ಚೆನ್ನಪ್ಪ,ಉಷಾ ಮತ್ತಿತರರು ಹಾಗೂ ಶಿಕ್ಷಕರಾದ, ನಾಗರಾಜ್, ಶಾಂತಕುಮಾರಿ ಉಪಸ್ಥಿತರಿದ್ದರು
ಶಾಲಾ ಮಕ್ಕಳು ದೇಶಭಕ್ತಿಯನ್ನು ಪ್ರತಿಬಿಂಬಿಸುವ ನೃತ್ಯರೂಪಗಳನ್ನು, ದೇಶಭಕ್ತಿ ಗೀತೆಗಳನ್ನು, ಗಣತಂತ್ರ ವ್ಯವಸ್ಥೆಯ ಕುರಿತಾಗಿ ಚಿಕ್ಕದಾಗಿ ಚೊಕ್ಕ ಭಾಷಣಗಳನ್ನು ಮಾಡಿದರು.
ದೈಹಿಕ ಶಿಕ್ಷಕರಾದ ರಾಘವೇಂದ್ರರವರು ಧ್ವಜ ನಿರ್ವಹಣೆ ನೆರವೇರಿಸಿದರು, ಶಿಕ್ಷಕ ವಿರುಪಾಕ್ಷಿ ಸ್ವಾಗತಿಸಿದರು, ಶಿಕ್ಷಕಿ ಶಕುಂತಲಾ ನಿರೂಪಿಸಿದರು, ಕೊನೆಯಲ್ಲಿ ಶಿಕ್ಷಕಿ ಪಾರ್ವತಮ್ಮನವರು ವಂದಿಸಿದರು.