ಸಾಮಾಜಿಕ ಕ್ಷೇತ್ರ ಹಿನ್ನಡೆಗೆ ಜಾತಿವಾದ ಕಾರಣ.

ದಾವಣಗೆರೆ: ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಜಾತಿವಾದ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.ಶಿವಯೋಗಾಶ್ರದಲ್ಲಿ ಗುರುವಾರ ಸಂಜೆ ಬಸವಕೇಂದ್ರ, ಶ್ರೀ ಜಗದ್ಗುರು ಮುರುಘಾರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಜಾತಿವಾದ ಇಂದಿಗೂ ಸಮಾಜದಲ್ಲಿ ಜೀವಂತವಾಗಿದೆ. ಅಸ್ಪೃಶ್ಯತೆ ವಿರುದ್ಧ ಹೋರಾಡಲು ಎಂಟೆದೆ ಬೇಕಿದೆ. ಇಂದು ಅಸ್ಪೃಶ್ಯತೆ ನಿವಾರಣೆಯಾಗಬೇಕಿದೆ. 12 ನೇ ಶತಮಾನದ ನಂತರ ಬಸವಣ್ಣನವರ ಚಿಂತನೆಗಳು ಮುರುಘಾಮಠದಲ್ಲಿ ಅನುಷ್ಠಾನಗೊಂಡಿವೆ. ಜಾತಿ ವಾದ ಹೋಗಬೇಕು, ಜಾತ್ಯತೀತ ವಾದ ಉಳಿಯಬೇಕಿದೆ.
2500 ವರ್ಷಗಳ ಹಿಂದಕ್ಕೆ ಸಾಗಿದರೆ ಗೌತಮನಾಗಿ, ಬುದ್ಧ ಪ್ರಬುದ್ಧನಾಗಿ ಎದ್ದು ಬಂದು ಅಮಾನವೀಯ ಆಚರಣೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಉಂಟುಮಾಡಿದ. ಅವನ ಕಾಲದಲ್ಲಿ ಅಮಾನವೀಯ ಆಚರಣೆಗಳು ನಡೆಯುತ್ತಿದ್ದವು . ಅದನ್ನು ನಿಲ್ಲಿಸುವ ಪ್ರಯತ್ನ ನಡೆಯಿತು ಎಂದರು.
ಅಂಬೇಡ್ಕರ್ ನಾವು ಸ್ವಾಭಿಮಾನದ ಬದುಕನ್ನು ನಡೆಸಬೇಕೆಂದು ಕರೆಕೊಟ್ಟರು. ನಮಗೆ ಹಣಕ್ಕಿಂತಲೂ ಶಿಕ್ಷಣ ಬೇಕಿದೆ. ದಲಿತ ವರ್ಗ ಶಿಕ್ಷಣ ವಂಚಿತವಾದ ಸಂದರ್ಭದಲ್ಲಿ ಅವರು ಶಿಕ್ಷಣ ಎಂಬ ಕ್ರಾಂತಿ ಮಾಡಬೇಕು ಎಂದು ಹೇಳಿದರು. ನಮಗೆ ನಿಜವಾದ ಸ್ವಾತಂತ್ರ್ಯ ಬರುವುದು ದಲಿತರಿಗೆ, ಶೋಷಿತರಿಗೆ ಸಮಾನ ಸಿಕ್ಕಾಗ ಸ್ವಾಭಿಮಾನದ ಸ್ವಾತಂತ್ರ್ಯ ಸಿಗುತ್ತದೆ ಎಂದರು.
ಸಾಮಾಜಿಕ ಕ್ಷೇತ್ರದಲ್ಲಿ ಜಾತಿ ವಾದ ಧಾರ್ಮಿಕ ಕ್ಷೇತ್ರದಲ್ಲಿ ಮೂಲಭೂತ ವಾದ ಇದೆ. ಎಲ್ಲ ದಾರ್ಶನಿಕರು ಮೂಲಭೂತವಾದದ ವಿರುದ್ಧ ಹೋರಾಡಿದರು. ಇನ್ನೊಂದು ಅಡಚಣೆ ಎಂದರೆ ಪ್ರತ್ಯೇಕತಾ ವಾದ. ಇದು ಸಾಮಾಜಿಕ ಬೆಳವಣಿಗೆಗೆ ದೊಡ್ಡ ಪೆಟ್ಟು, ಜಾತಿವಾದ, ಮೂಲಭೂತವಾದ ಮತ್ತು ಪ್ರತ್ಯೇಕತಾ ವಾದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ಕೊಟ್ಟಿರಲಿಲ್ಲ ಬಸವಣ್ಣ ಚಿಕ್ಕ ವಯಸ್ಸಿನಲ್ಲಿ ಸ್ತ್ರೀಪರವಾದ ಧ್ವನಿ ಎತ್ತಿದರು. ತನ್ನ ಸಹೋದರಿ ಅಕ್ಕನಾಗಮ್ಮನಿಗೆ ದೀಕ್ಷೆ ಕೊಡಬೇಕೆಂಬ ಧ್ವನಿ ಎತ್ತಿದ ಪರಿಣಾಮ ಇಂದು ಸಭೆ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳು ಭಾಗವಹಿಸುತ್ತಿದ್ದಾರೆ ಎಂದರೆ ಅದಕ್ಕೆ ಬಸವಣ್ಣ ಕಾರಣ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಟಿ.ಪಿ.ಜ್ಞಾನಮೂರ್ತಿ ಅವರು ಸಾಮಾಜಿಕ ಸಾಮರಸ್ಯಕ್ಕೆ ಎದುರಾಗುವ ಅಡಚಣೆಗಳೇನು ವಿಚಾರ ಕುರಿತು ಮಾತನಾಡಿದರು. ಹರಿಹರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಿನಾಸಂ ಪದವೀಧರ ಶಿಕ್ಷಕ ಕಲ್ಲೇಶ್, ಸಾಹಿತಿ ಎನ್.ಜೆ. ಶಿವಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಹಿತಿ ಪ್ರೋ.ಹೆಚ್.ಲಿಂಗಪ್ಪ ಅವರ ಅರಿವಿನ ಸಿರಿ ಚನ್ನಬಸವಣ್ಣ ಕೃತಿ ಬಿಡುಗಡೆ ಮಾಡಿದರು. ನಂತರ ರಂಗನಿಕೇತನ ತಂಡದ ಕಲಾವಿದರಿಂದ ಹೆಚ್. ದುಂಡಿರಾಜ್ ಅವರ ಹಾಸ್ಯ ನಾಟಕ ಪುಕ್ಕಟೆ ಸಲಹೆ ಪ್ರದರ್ಶನವಾಯಿತು.