ಸಿ ಎಂ ಜಿಲ್ಲೆಯಲ್ಲಿ ಮಿತಿ ಮೀರಿದೆ ಮಟ್ಕಾ ದಂಧೆ.! ನೂತನ ಗೃಹ ಮಂತ್ರಿಗೆ ಅಕ್ರಮದ ವಿರುದ್ದ ಧರಣಿ ಮಾಡಿದ್ದು ನೆನಪಿದೆಯಾ.?

Matka (OC) Part 3
ಹಾವೇರಿ: ರಾಜ್ಯದ ಮಾಜಿ ಗೃಹ ಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಾದ ಹಾವೇರಿ ಜಿಲ್ಲೆಯಲ್ಲಿ ಅನೇಕ ಕಡೆ ಹಲವು ದಿನಗಳಿಂದ ಅಕ್ರಮ ಚಟುವಟಿಕೆ ನಡೆಯುವ ಸ್ಥಳ ಎಂಬ ಕುಖ್ಯಾತಿ ಪಡೆದಿದೆ. ಅದಕ್ಕೆ ಪೂರಕವಾಗಿ ಒಂದು ಸಣ್ಣ ಉದಾಹರಣೆ, ಹಾವೇರಿ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಮಟ್ಕಾದಂಧೆ (ಒಸಿ) ಜೋರಾಗಿ ನಡೆಯುತ್ತಿದ್ದರು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.
ಸಿಎಂ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಈ ರೀತಿಯಾದರೆ, ಉಳಿದ ಜಿಲ್ಲೆಯಲ್ಲಿರುವ ಅಕ್ರಮ ಚಟುವಟಿಕೆ ಹಾಗೂ ಕಾನೂನು ಸುವ್ಯವಸ್ಥೆ ಹೇಗೆ, ಯಾರೂ ಕಾಪಾಡೋರು, ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ನಮ್ಮ ತನಿಖಾ ತಂಡ ಅಕ್ರಮ ಬಯಲು ಮಾಡಲು ಪುನಃ ಇಂದು ಕಾರ್ಯಾಚರಣೆ ನಡೆಸಿತು. ಇದಕ್ಕೂ ಹಿಂದೆಯೇ ವರದಿಯಲ್ಲಿ ಉಲ್ಲೇಖಿಸಿದಂತೆ, ಅಕ್ರಮ ಚಟುವಟಿಕೆಗಳನ್ನ ನಿಯಂತ್ರಿಸುವ ಸ್ಥಳದಿಂದ ದಂಧೆ ನಡೆಯುವ ಸ್ಥಳಕ್ಕೆ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ ಹಾಗೂ ರಾಣೆಬೆನ್ನೂರು ಶಾಸಕರ ಮನೆ ಇದ್ದರೂ ಯಾವುದೇ ಪ್ರಯೋಜನವಿಲ್ಲ, ಇದೆಲ್ಲಾ ನೋಡಿದ್ರೆ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಇದೆಲ್ಲಾ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ದೇವರೆ ಬಲ್ಲ.
ಹೌದು ಈ ಹಿಂದೆ ಭಾಗ ಒಂದರಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಸಂಪೂರ್ಣವಾಗಿ ವರದಿ ಮಾಡಲಾಗಿತ್ತು. ವರದಿಯ ಮೂರು ದಿನದ ಬಳಿಕ ಹಾವೇರಿ ಎಸ್ ಪಿ ಹನುಮಂತರಾಯ ಖುದ್ದು ಮಟ್ಕಾ ಅಡ್ಡೆಯ ಮೇಲೆ ದಾಳಿ ಮಾಡಿ ಬರೊಬ್ಬರಿ 1.49 ಲಕ್ಷ ಹಣವನ್ನ ವಶಕ್ಕೆ ಪಡೆದುಕೊಂಡಿದ್ದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗಡಿಭಾಗವಾದ ತುಂಗಭದ್ರಾ ನದಿ ಪಕ್ಕದ ಕೊಡಿಯಾಲ ಹೊಸಪೇಟೆ ಬಳಿಯ ಇಟ್ಟಿಗೆ ಬಟ್ಟಿಗಳ ಸಮೀಪದಲ್ಲಿ ಕುಮಾರಪಟ್ಟಣಂ ಬಳಿಯ ಲಾರಿಗಳ ನಿಲ್ದಾಣ, ಮುಖ್ಯ ರಸ್ತೆಯ ಇಕ್ಕೆಲದಲ್ಲಿರುವ ಸಣ್ಣ ರೂಂ ಗಳಲ್ಲಿ ಮಟ್ಕಾ ದಂಧೆಕರೋರರು ಜಾತ್ರೆಯ ಸ್ವರೂಪದಲ್ಲಿ ಮಟ್ಕಾ ಬರೆಯುತ್ತಿರುವುದು ಇನ್ನು ನಿಂತಿಲ್ಲದಿರುವುದು ವಿಪರ್ಯಾಸ. ಮಟ್ಕಾ ಬರೆಯುವ ಎಲ್ಲಾ ಸ್ಥಳದಿಂದ ಕೇವಲ 1 ರಿಂದ 2 ಕಿಲೋಮೀಟರ್ ಅಂತರದಲ್ಲಿ ಪೊಲೀಸ್ ಠಾಣೆಯಿದ್ದರೂ ಪ್ರಯೋಜನವಿಲ್ಲ. ಅಲ್ಲದೇ ಮುಖ್ಯಮಂತ್ರಿಯವರ ಆಪ್ತ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಮನೆ ಕೂಡ ಅಲ್ಲೇ ಬರುತ್ತೆ.
ಹರಿಹರ ಹಾಗೂ ರಾಣೆಬೆನ್ನೂರು ಗಡಿಭಾಗವಾದ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಬಳಿಯ ತುಂಗಭದ್ರಾ ನದಿ ತಟದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗ ಜಾತ್ರೆಯ ಮಾದರಿಯಲ್ಲಿ ಮಟ್ಕಾ ಬರೆಯುವವರ ಹಾಗೂ ಆಡುವವರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದ್ದೆ. ಕೂಲಿ ಕೆಲಸ ಮಾಡಿದ್ದ ಹಣದಲ್ಲಿ ಇಲ್ಲಿಗೆ ಬಂದು ದುಡಿದ ಹಣವನ್ನೆಲ್ಲಾ ಜನರು ಕಳೆದುಕೊಳ್ಳುತ್ತಿದ್ದಾರೆ.
ಹಾವೇರಿ ಜಿಲ್ಲೆ ಕೂಡ ಪೂರ್ವ ವಲಯ ಐಜಿಪಿ ವ್ಯಾಪ್ತಿಗೆ ಬರುತ್ತದೆ, ದಾವಣಗೆರೆಯಲ್ಲಿ ಐಜಿಪಿ ಕೇಂದ್ರ ಕಚೇರಿ ಇದ್ದರೂ, ಐಜಿಪಿ ತಂಡ ಯಾಕೋ ಮಟ್ಕಾ ದಂಧೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಐಜಿಪಿ ಸ್ಕ್ವಾಡ್ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಬಳಸುವ ಸ್ಫೊಟಕ ವಸ್ತುಗಳ ಸಾಗಾಟವನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆದ್ರೆ ಸಾರ್ವಜನಿಕರಿಗೆ ತೊಂದರೆಯಾಗುವ ಮಟ್ಕಾ ನಿಯಂತ್ರಣ ಯಾಕೆ ಸಾಧ್ಯವಿಲ್ಲ ಅಂತಾ ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಹಾವೇರಿ ಜಿಲ್ಲೆಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಖಡಕ್ ಆಗಿ ಕೆಲಸ ಮಾಡಲು ಹೆಜ್ಜೆ ಇಟ್ಟಿದ್ದಾರೆ, ಅಲ್ಲದೇ ಬಿಜೆಪಿ ಪಕ್ಷದ ನಿಷ್ಠಾವಂತ ತೀರ್ಥಹಳ್ಳಿ ಶಾಸಕರಿಗೆ ಗೃಹ ಖಾತೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನೂತನ ಹೋಂ ಮಿನಿಸ್ಟರ್ ಅರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಅಲ್ಲದೇ ಪ್ರಥಮವಾಗಿ ತಮ್ಮ ತವರು ಜಿಲ್ಲೆಯನ್ನ ಕ್ಲೀನ್ ಸಿಟಿ ಯಾವ ರೀತಿ ಮಾಡ್ತಾರೆ ಅಂತಾ ಕಾದು ನೋಡಬೇಕಾಗಿದೆ.