ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು ಹಗರಣ ಬಯಲು.! ದೂರು ಸಲ್ಲಿಸಿದ ಸಿಟಿಜನ್ ರೈಟ್ಸ್ ಫೌಂಡೇಷನ್. ‌!

citizens rights foundation gives complaint to governor against bjp government

ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು ಹಗರಣ ಬಯಲು.! ದೂರು ಸಲ್ಲಿಸಿದ ಸಿಟಿಜನ್ ರೈಟ್ಸ್ ಫೌಂಡೇಷನ್. ‌!

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಚಲನ.

ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಸುಧಾಕರ್‌, ಐಎಎಸ್ ಅಧಿಕಾರಿಗಳಾದ ರಾಕೇಶ್ ಸಿಂಗ್, ಮಂಜುನಾಥ್ ಪ್ರಸಾದ್, ಗೌರವ್ ಗುಪ್ತಾ ಸಹಿತ ಹಲವು ಅಧಿಕಾರಿಗಳ ವಿರುದ್ದ ಆರೋಪ.‌.

ಬೆಂಗಳೂರು: ಕಾಮಗಾರಿ ಟೆಂಡರ್‌ಗಳಲ್ಲಿನ 40% ಕಮೀಷನ್ ಆರೋಪ ಕುರಿತಂತೆ ಗುತ್ತಿಗೆದಾರರ ಸಂಘದ ಪ್ರಮುಖರು ದೂರು ನೀಡಿರುವ ಬೆನ್ನಲ್ಲೇ ಇದೀಗ ಬಹುಕೋಟಿ ರೂಪಾಯಿ ಕೋವಿಡ್ ಹಗರಣ ಸ್ಫೋಟಗೊಂಡಿದೆ. ಈ ಕುರಿತಂತೆ ಸರ್ಕಾರೇತರ ಸಂಸ್ಥೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜ್ತಪಾಲರಿಗೆ ದೂರು ನೀಡಿದ್ದು ನ್ಯಾಯಾಂಗ ತನಿಖೆಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದೆ.

ಯಡಿಯೂರಪ್ಪ ಅವರ ಆಡಳಿತಾವಧಿಯಿಂದ ಇದೀಗ ಬಸವರಾಜ್ ಬೊಮ್ಮಯಿ ಅವರು ಸಿಎಂ ಆಗಿರುವ ಸರ್ಕಾರದಲ್ಲಿ ಕೋವಿಡ್-19 ನಿರ್ವಹಣೆ ಹೆಸರಲ್ಲಿ ಬಹುಕೋಟಿ ರೂಪಾಯಿ ಗೋಲ್‌ಮಾಲ್ ನಡೆದಿದೆ. ಆರ್‌ಟಿ‌ಐ ದಾಖಲೆಗಳಿಂದ ಈ ಅಕ್ರಮ ಬಯಲಾಗಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್, ಐಎಎಸ್ ಅಧಿಕಾರಿಗಳಾದ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ರಾಕೇಶ್ ಸಿಂಗ್, ಗೌರವ್ ಗುಪ್ತಾ, ಅನಿಲ್ ಕುಮಾರ್ ಸಹಿತ ಹಲವರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಿಟಿಜನ್ ರೈಟ್ಸ್ ಮುಖ್ಯಸ್ಥ ಕೆ.ಎ.ಪಾಲ್ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಅಧಿಕಾರಿಗಳೇ ಬೇನಾಮಿ ಹೆಸರಲ್ಲಿ ಬಿಲ್ ಮಾಡಿದ್ದಾರೆ, ಇದರಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂಬುದನ್ನು ಈ ದೂರಿನಲ್ಲಿ ಉಲ್ಲೇಖಿಸಿರುವ ಸಿಟಿಜನ್ ರೈಟ್ಸ್ ಫೌಂಡೇಷನ್, ಈ ಕೋವಿಡ್ ಹಗರಣದಲ್ಲಿ ರಾಜ್ಯದ ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ಭಾಗಿಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆದರೆ ಈ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪ್ರಭಾವ ಬೀರುವ ಆತಂಕ ಇರುವುದರಿಂದ ನ್ಯಾಯಾಂಗ ತನಿಖೆ ನಡೆಯಬೇಕಿದೆ. ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದೆ.

ರಾಜ್ಯಪಾಲರಿಗೆ ನೀಡಿರುವ ದೂರು ಈ ರೀತಿ ಇದೆ:

ಇವರಿಗೆ,
ಮಾನ್ಯ ಗೌರವಾನ್ವಿತ ರಾಜ್ಯಪಾಲರು,
ಕರ್ನಾಟಕ ಸರ್ಕಾರ,
ರಾಜ ಭವನ, ಬೆಂಗಳೂರು- 560001

ವಿಷಯ: ಕೋವಿಡ್ ಬಹುಕೋಟಿ ಹಗರಣ ಕುರಿತು ನ್ಯಾಯಾಂಗ ತನಿಖೆಗೆ ಮನವಿ

ಮಾನ್ಯರೇ,

ಹಲವಾರು ಅಕ್ರಮ, ಅನ್ಯಾಯ, ಹಗರಣಗಳ ವಿರುದ್ಧ ಹಾಗೂ ನಾಗರಿಕ ಹಕ್ಕುಗಳಿಗಾಗಿ ಹಲವಾರು ಹಂತಗಳಲ್ಲಿ ಜವಾಬ್ಧಾರಿಯುತ ಸಾಂಘಿಕ ಹೋರಾಟ ನಡೆಸುತ್ತಿರುವ ನಮ್ಮ ಈ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಪ್ರಸ್ತುತ ಕೋವಿಡ್ ಹಗರಣದ ಬಗ್ಗೆಯೂ ತೀವ್ತ ಕಳವಳ ವ್ಯಕ್ತಪಡಿಸುತ್ತಿದೆ. ಜನರ ಜೀವ ಉಳಿಸುವಲ್ಲಿ ಜವಾಬ್ಧಾರಿಯುತ ಕ್ರಮ ಜರುಗಿಸಬೇಕಿರುವ ಸರ್ಕಾರದ ಅಧಿಕಾರಿಗಳೇ ಕೋವಿಡ್-19 ಮಾರಣಾಂತಿಕ ವೈರಾಣು ಹಾವಳಿ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಬಹುಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂಬ ಮಾಹಿತಿಯನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಈ ಅವ್ಯವಹಾರ ಸಂಬಂಧ ವಿವಿಧ ಮೂಲಗಳಿಂದ ಸಿಕ್ಕಿರುವ ಮಾಹಿತಿ ಹಾಗೂ ವರದಿಯನ್ನಾಧರಿಸಿ ಸರ್ಕಾರಕ್ಕೆ ಈ ಪತ್ರವನ್ನು ಬರೆದಿದ್ದು, ಸಮಗ್ರ ತನಿಖೆಯ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಮುಂದಿಟ್ಟಿದ್ದೇವೆ.

ರಾಜ್ಯ ಬಿಜೆಪಿ ಸರ್ಕಾರ ಮತ್ತೊಂದು ಹಗರಣ ಬಯಲು; ರಾಜಭವನಕ್ಕೆ ದೂರು.. ದೂರು ಸಲ್ಲಿಸಿದ ಸಿಟಿಜನ್ ರೈಟ್ಸ್ ಫೌಂಡೇಷನ್. ‌

ಏನಿದು ಅವ್ಯವಹಾರ..?

ಇಡೀ ಜಗತ್ತು ಕೋವಿಡ್-19 ವೈರಾಣು ಹಾವಳಿಯಿಂದ ತತ್ತರಿಸಿದ್ದು ಭಾರತ ಕೂಡಾ ವರ್ಷಕ್ಕೂ ಹೆಚ್ಚು ಕಾಲ ಸಂಕಷ್ಟದ ಸುಳಿಯಲ್ಲಿ ಸಿಲುಕಿತ್ತು. ಹಲವು ತಿಂಗಳ ಕಾಲ ಕರ್ನಾಟಕದಲ್ಲೂ ಲಾಕ್‌ಡೌನ್ ಜಾರಿ ಮಾಡಿ ಸೋಂಕು ತಡೆಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಿವಿಧ ಕಾರ್ಯಗಳ ಹೆಸರಲ್ಲಿ ಜನರ ತೆರಿಗೆಯ ಕೋಟ್ಯಾಂತರ ರೂಪಾಯಿಗಳು ಲೂಟಿಕೋರರ ಪಾಲಾಗಿದೆ.

ಈ ಬಗ್ಗೆ ಪ್ರತಿಪಕ್ಷಗಳು ಆರೋಪಗಳನ್ನು ಮಾಡುತ್ತಿದ್ದ ಹಿನ್ನೆಲೆಯಲ್ಲಿ ‘ರಾಜ್ಯದಲ್ಲಿನ ಕೋವಿಡ್ ನಿರ್ವಹಣೆ ಸಂಬಂಧದ ಖರ್ಚು-ವೆಚ್ಚಗಳ ಬಗ್ಗೆ ಆರ್‌ಟಿಐ ಅಡಿ ಮಾಹಿತಿ ನೀಡುವಂತೆ ನಮ್ಮ ಸಂಸ್ಥೆಯು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯನ್ನು ಕೋರಿದ್ದು, ಸಮರ್ಪಕ ದಾಖಲೆ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಕೆಲವು ವಲಯಗಳ ಅಧಿಕಾರಿಗಳಷ್ಟೇ ಅಲ್ಪ ಸ್ವಲ್ಪ ದಾಖಲೆಗಳನ್ನು ಒದಗಿಸಿದ್ದಾರಾದರೂ ಅದನ್ನು ಪರಿಶೀಲಿಸಿದಾಗ ಅವ್ಯವಹಾರ ನಡೆದಿರುವ ಅನುಮಾನಗಳು ಉಂಟಾಗುತ್ತಿದೆ.

ಪ್ರಮುಖವಾಗಿ ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಯಲ್ಲಿದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ಗಮನಹರಿಸಿದಾಗ ಕೋಟ್ಯಾಂತರ ರೂಪಾಯಿ ಅಪವ್ಯಯವಾಗಿರುವುದು ದಾಖಲೆಗಳಿಂದ ಗೊತ್ತಾಗುತ್ತದೆ.

  1. ▪️ ಊಟದ ವೆಚ್ಚಕ್ಕೆಂದೇ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಳಸಿರುವುದಾಗಿ ದಾಖಲೆ ಹೇಳುತ್ತಿದೆ.
  2. ▪️ ಕ್ವಾರಂಟೈನ್ ವೆಚ್ಚದಲ್ಲೂ ಭಾರೀ ಗೋಲ್‌ಮಾಲ್ ನಡೆದಿದೆ. ಕ್ವಾರಂಟೈನ್ ಸಂಬಂಧ ಹಣ ಪಾವತಿಯಾಗಿರುವ ಖಾಸಗಿ ಹೊಟೇಲ್‌‌ ಸಿಬ್ಬಂದಿ ಕೂಡಾ ಅವ್ಯವಹಾರವನ್ನು ಒಪ್ಪಿಕೊಂಡಿದ್ದು, ಶೇ.10ರಂತೆ ಲಕ್ಷಾಂತರ ರೂಪಾಯಿ ಕಮೀಷನ್ ದಂಧೆ ನೆಡೆದಿರುವ ಸತ್ಯವನ್ನೂ ಹೇಳಿಕೊಂಡಿದ್ದಾರೆ.
  3. ▪️ಬೇರೆ ಬೇರೆ ಹಸರಲ್ಲಿ ಸಂಬಳ ರೂಪದಲ್ಲಿ ಅಕ್ರಮವಾಗಿ ಹಣ ಸಂದಾಯವಾಗಿದೆ.
  4. ▪️ ಬ್ಯಾರಿಕೇಡ್ ಹಾಕುವ ನೆಪದಲ್ಲೂ ಖಾಸಗಿ ಕಂಪನಿಗಳಿಗೆ ಬರೋಬ್ಬರಿ 28 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತ ಪಾವತಿಯಾಗಿದೆ.
  5. ▪ ಸಾರ್ವಜನಿಕರಿಗೆ ಆಹಾರ ಕಿಟ್ ವಿತರಿಸಿದ್ದಾಗಿ ನಮೂದಿಸಿ ಭಾರೀ ಮೊತ್ತದ ಹಣ ಭ್ರಷ್ಟರ ಪಾಲಾಗಿದೆ.
  6. ▪️ಜಾಗೃತಿ ಕಾರ್ಯಕ್ರಮದ ಹೆಸರಲ್ಲೂ ಅಕ್ರಮ ಬಿಲ್ ಮಾಡಲಾಗಿದೆ.

ಜಾಗೃತಿ ಕಾರ್ಯಕ್ರಮ ಸಂಬಂಧ ಆಟೋ ಸಹಿತ ವಿವಿಧ ವಾಹನಗಳ ಬಳಕೆಗಾಗಿ ಯಲಹಂಕದ ‘ರೈನ್‌ಬೋ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಎಂಬ ಖಾಸಗಿ ಕಂಪನಿಗೆ 10.44 ಲಕ್ಷ ರೂಪಾಯಿ ಬಿಲ್ ಪಾವತಿಯಾಗಿದ್ದಾಗಿ ಬಿಬಿಎಂಪಿ ಅಧಿಕಾರಿಗಳು ದಾಖಲೆ ಒದಗಿಸಿದ್ದಾರೆ. ಈ ಟ್ರಾವೆಲ್ ಸಂಸ್ಥೆಯ ವಿಳಾಸದಲ್ಲಿ ಆ ಹೆಸರಿನ ಸಂಸ್ಥೆಯೇ ಇಲ್ಲ. ಆ ಕಂಪನಿಯದ್ದೆಂದು ನೀಡಲಾಗಿರುವ ಫೋನ್ ನಂಬರ್‌ಗೆ ಕರೆ ಮಾಡಿದಾಗ ಆ ವ್ಯಕ್ತಿಯು, ನೀಡಿದ ಸುಳಿವಿನಂತೆ ಸಂಬಂಧಪಟ್ಟ ಬಿಬಿಎಂಪಿ ಸಿಬ್ಬಂದಿಯನ್ನು ಕೇಳಿದಾಗ, ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರಲ್ಲದೆ, ಕಮೀಷನರ್ ಸೇರಿ ವಿವಿಧ ಅಧಿಕಾರಿಗಳಿಗೆ ಕಮೀಷನ್ ರೂಪದಲ್ಲಿ ಹಣ ಸಂದಾಯವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಆರೋಪಿಗಳು ಯಾರು?

ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಕೋವಿಡ್-19 ಸೋಂಕು ನಿವಾರಣೆ, ನಿರ್ವಹಣೆ ಸಂಬಂಧ ವಿವಿಧ ಕಾರ್ಯಕ್ರಮಗಳು ಜಾರಿಯಾಗಿವೆ. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಮಾನ್ಯ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು ಈ ಅವಧಿಯಲ್ಲೂ ಕೋವಿಡ್-19 ಸಂಬಂಧದ ಕಾರ್ಯಕ್ರಮಗಳು ನಡೆದಿವೆ. ಈ ಅವಧಿಗಳಲ್ಲಿ ಡಾ.ಕೆ.ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದು ಐಎಎಸ್ ಅಧಿಕಾರಿಗಳಾದ ಅನಿಲ್ ಕುಮಾರ್, ಮಂಜುನಾಥ್ ಪ್ರಸಾದ್, ಗೌರವ್ ಗುಪ್ತಾ, ರಾಕೇಶ್ ಸಿಂಗ್ ಸಹಿತ ಹಲವು ಅಧಿಕಾರಿಗಳು ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳಾಗಿದ್ದರು. ಈ ಮುಖ್ಯಮಂತ್ರಿಗಳು, ಸಚಿವರು ಹಾಗೂ ಉನ್ನತ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ಈ ಕಾರ್ಯಕ್ರಮಗಳು ಜಾರಿಯಾಗಿವೆ. ಹಾಗಾಗಿ ಈ ಅವ್ಯವಹಾರಗಳಲ್ಲಿ ಈ ಅಧಿಕಾರಿಗಳ ಹಾಗೂ ಪ್ರಭಾವಿಗಳ ಪಾತ್ರ ಇರುವ ಅನುಮಾನವಿದೆ.

ವಿವಿಧ ಕಂಪನಿಗಳ ಜಿಎಸ್‌ಟಿ ನಂಬರ್‌ಗಳನ್ನು ಬಳಸಿ ನಕಲಿ ಬಿಲ್ ರೈಸ್ ಮಾಡಿರುವ ಅನುಮಾನ ಈ ದಾಖಲೆಗಳಿಂದ ವ್ಯಕ್ತವಾಗುತ್ತಿದೆ.

 ಪ್ರಾರ್ಥನೆ:

ಬಿಬಿಎಂಪಿ ಯಲಹಂಕ ವಲಯವೊಂದರಲ್ಲೇ ಇಷ್ಟೊಂದು ಗೋಲ್‌ಮಾಲ್ ನಡೆದಿದೆ ಎನ್ನಲಾಗುತ್ತಿದ್ದು, ಇನ್ನುಳಿದ ಬಿಬಿಎಂಪಿ ವಲಯಗಳಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನಷ್ಟು ಮೊತ್ತದ ಭ್ರಷ್ಟಾಚಾರ ನಡೆದಿರಬಹುದು. ಹಾಗಾಗಿ ಈ ಕೋವಿಡ್ ಹಗರಣ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದಲ್ಲಿ ಸತ್ಯಾಂಶ ಬೆಳಕಿಗೆ ಬರಲಿದೆ. ಈ ಹಗರಣದಲ್ಲಿ ಉನ್ಬತ ಅಧಿಕಾರಿಗಳ ಪಾತ್ರ ಇರಬಹುದಾಗಿದ್ದು, ಈ ಬಗ್ಗೆ ರಾಜ್ಯದ ಪೊಲೀಸ್ ಇಲಾಖೆಗೆ ತನಿಖೆ ವಹಿಸಿದರೆ ಸರ್ಕಾರದ ಪ್ರಮುಖರು ಹಾಗೂ ಅಧಿಕಾರಿಗಳು ಪ್ರಭಾವ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಈ ಹಗರಣಗಳ ಆರೋಪ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿಕೆ.

ಇತೀ,

ವಂದನೆಗಳೊಂದಿಗೆ,

ಕೆ.ಎ.ಪಾಲ್
ಅಧ್ಯಕ್ಷರು,
ಸಿಟಿಜ್ ರೈಟ್ಸ್ ಫೌಂಡೇಷನ್.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!