ಸೇವಾಭದ್ರತೆ ಒದಗಿಸಲು ಆರೋಗ್ಯ ಇಲಾಖೆಯ ಕರೋನಾ ವಾರಿಯರ್ಸ್ಗಳ ಒತ್ತಾಯ

ದಾವಣಗೆರೆ: ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರಕಾರ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಂಡಿದ್ದ ಎಲ್ಲಾ ಆರೋಗ್ಯ ಇಲಾಖೆಯ ಕರೋನಾ ವಾರಿಯರ್ಸ್ಗಳನ್ನು ಇದೇ ಮಾ.೩೧ರ ನಂತರವೂ ಕೆಲಸದಲ್ಲಿ ಮುಂದುವರೆಸಬೇಕೆಂದು ಕರ್ನಾಟಕ ಕರೋನಾ ಆರೋಗ್ಯ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ರಾಜ್ಯ ಸರಕಾರದಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ರೋಗಿಗಳಿಗೆಗೆ ಯಾವುದೇ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಜಿಲ್ಲೆಯಲ್ಲಿ ೧೮೦ ಸೇರಿದಂತೆ ರಾಜ್ಯಾದ್ಯಂತ ಒಟ್ಟು ೫,೮೦೦ ಸಿಬ್ಬಂದಿಗಳನ್ನು ಆರು ತಿಂಗಳ ಅವಧಿಗೆ ಸರಕಾರ ನೇಮಕಾತಿ ಮಾಡಿಕೊಂಡಿತ್ತು. ನಂತರದಲ್ಲಿ ಅವಧಿ ವಿಸ್ತರಣೆ ಮಾಡಿ ನಮ್ಮಿಂದ ಸೇವೆ ಪಡೆಯಲಾಯಿತು. ಆದರೆ, ಈಗ ಇದ್ದಕ್ಕಿದ್ದಂತೆ ಇದೇ ಮಾ.೩೧ರ ನಂತರ ನಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಮೋದ್ ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಖಾಲಿ ಬಿಡಲಾಗಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ನಾಲ್ಕನೇ ಅಲೆ ಬರುವ ಸಂಭವವಿದ್ದು, ನಂತರದಲ್ಲಿ ರೋಗಿಗಳಿಗೆ ತೊಂದರೆ ಆಗುವ ಸಂಭವವೂ ಇರುವುದರಿಂದ ನಮ್ಮನ್ನೇ ಮುಂದುವರೆಸಿ ನಮಗೆ ಸೇವಾ ಭದ್ರತೆಯನ್ನು ಸರಕಾರ ನೀಡಬೇಕು ಇಲ್ಲವಾದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.