ವಾರ್ಡ್ ಚುನಾವಣೆ ಮತ ಏಣಿಕೆ ಹಿನ್ನೆಲೆ ಮೇ 22 ದಾವಣಗೆರೆ ನಗರದಲ್ಲಿ 144 ಸೆಕ್ಷನ್ ಜಾರಿ – ಡಿಸಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ನಂ 28 ಮತ್ತು 37ರ ಉಪ ಚುನಾವಣೆ ಮತ ಎಣಿಕೆ ಕಾರ್ಯವು ಮೇ.22 ರಂದು ನಡೆಯಲಿದ್ದು, ಮತ ಎಣಿಕೆ ನಂತರ ವಿಜೇತ ಪಕ್ಷದವರು ವಿಜಯೋತ್ಸವ ಆಚರಿಸುವ ಮತ್ತು ಗುಂಪು ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿದಾವಣಗೆರೆ ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮತ್ತು ಶಾಂತಿಯನ್ನು ಸುವ್ಯವಸ್ಥೆಯನ್ನು ಮುಂದುವರಿಸುವ ಸಲುವಾಗಿ ನಾಲ್ಕು ಜನಕ್ಕಿಂತ ಹೆಚ್ಚಿನ ಜನರ ಗುಂಪು ಸೇರದಂತೆ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆ ಸಮಯದಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರು ಚುನಾವಣೆ ವಿಜಯೋತ್ಸವ ಆಚರಣೆ, ಮೆರವಣಿಗೆ, ಅಕ್ರಮ ಗುಂಪು ಸೇರುವಿಕೆ, ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಷೇದಾಜ್ಞೆ ಸದುದ್ದೇಶ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಹಾಗೂ ಇತರೆ ಪ್ರಾರ್ಥನಾ ಮಂದಿರಗಳಿಗೆ ತೆರಳುವವರಿಗೆ ಅಥವಾ ಅಧಿಕೃತ ಗುರುತಿನ ಚೀಟಿ ಹೊಂದಿರುವ ಪರೀಕ್ಷಾರ್ಥಿಗಳಿಗೆ, ಪರೀಕ್ಷಾ ಸಿಬ್ಬಂದಿಗಳಿಗೆ ಹಾಗೂ ಮತ ಎಣಿಕೆ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.