ಮೋದಿ ಆಗಮನಕ್ಕೆ ಕ್ಷಣಗಣನೆ: ದಾವಣಗೆರೆ ಕೇಸರಿ ಮಯ:ಪಿಬಿ ರಸ್ತೆಯಲ್ಲಿ ಜನಸಾಗರ

ದಾವಣಗೆರೆ: ದಾವಣಗೆರೆ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಇಡೀ ನಗರ ಕೇಸರೀ ಮಯವಾಗಿದೆ. ಬೆಳಿಗ್ಗೆಯಿಂದಲೇ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ಟ್ ಏರ್ಪಡಿಸಲಾಗಿದೆ.
ಪ್ರಮುಖ ರಸ್ತೆಗಳ ಸಂಚಾರ ಬಂದ್ ಮಾಡಲಾಗಿದ್ದು, ಸಾರ್ವಜನಿಕರು ಸುತ್ತಿ ಸುತ್ತಿ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಮೋದಿ ಆಗಮನದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳನ್ನು ಹೊರ ವಲಯಕ್ಕೆ ಸ್ಥಳಾಂತರಿಸಲಾಗಿದ್ದು, ವಾಹನಗಳ ಸಂಚಾರ ಕಡಿಮೆಯಾಗಿದೆ.
ಜೆ.ಎಂ.ಐ.ಟಿ. ಕಾಲೇಜು ಬಳಿ ಜನಪ್ರತಿನಿಧಿಗಳ ದಂಡೇ ನೆರೆದಿದ್ದು, ಮೋದಿ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಕಾರ್ಯಕ್ರಮಕ್ಕೆ 2 ಲಕ್ಷ ಆಸನಗಳು, ಅಲ್ಲಲ್ಲಿ 50 ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನರು ಬರಲಿದ್ದಾರೆ. ಅದರಲ್ಲಿ ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಗದಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದಲೇ ಅಧಿಕ ಸಂಖ್ಯೆಯಲ್ಲಿ ಬರಲಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆ ಒಂದರಿಂದಲೇ 3 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ.
ಅಂದಾಜು 400 ಎಕರೆ ಜಾಗದಲ್ಲಿ ಪೆಂಡಾಲ್ ನಿರ್ಮಿಸಿ, ಕಾರ್ಯಕರ್ತರು ಮತ್ತು ಜನರನ್ನು ಕರೆದು ತರಲು 10 ಸಾವಿರ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಕ್ರೂಸರ್, ಕಾರು ಮತ್ತು ಸಾವಿರಾರು ಬೈಕ್ಗಳಲ್ಲೂ ಜನರು ಆಗಮಿಸಲಿದ್ದು, ಕಾರ್ಯಕ್ರಮ ನಡೆಯುವ ಮೂರು ಕಿ.ಮೀ. ವ್ಯಾಪ್ತಿಯಲ್ಲಿ 44 ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಬೆಳಗ್ಗೆ 9 ಗಂಟೆಗೆ ಉಪ್ಪಿಟ್ಟು ಮತ್ತು ಕೇಸರಿಬಾತ್, ಮಧ್ಯಾಹ್ನದ ಊಟಕ್ಕೆ ಗೋ ಹುಗ್ಗಿ, ಪಲಾವ್ ಹಾಗೂ ಮೊಸರನ್ನ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಒಂದು ಸಾವಿರ ಜನ ಬಾಣಸಿಗರು ಸಜ್ಜಾಗಿದ್ದು, ಯಾವುದೇ ಗೊಂದಲ ಆಗದಂತೆ 400 ಕೌಂಟರ್ ತೆರೆಯಲಾಗಿದೆ. ಬಿಸಿಲು ಇರುವ ಕಾರಣ ಜನರ ದಾಹ ತಣಿಸಲು 10 ಲಕ್ಷ ಪ್ಯಾಕೇಟ್ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.