ದಾವಣಗೆರೆಯ ಸಾಂಸ್ಕೃತಿಕ ಚೇತನ ಡಾ. ಎಂ ಜಿ ಈಶ್ವರಪ್ಪ – ನಾಗರಾಜ್ ಸಿರಿಗೆರೆ

kavi

ದಾವಣಗೆರೆ: ಒಮ್ಮೆ ಸಿರಿಗೆರೆಯಲ್ಲಿ ಮೈಸೂರು ಮಲ್ಲಿಗೆಯ ಕವಿ ಡಾ. ಕೆ ಎಸ್ ನರಸಿಂಹಸ್ವಾಮಿಯವರಿಗೆ ಅಭಿನಂದನಾ ಸಮಾರಂಭ. ಕವಿಯನ್ನು ಕುರಿತು ಅಭಿನಂದನಾ ಭಾಷಣ ಮಾಡಲು ಬೆಂಗಳೂರಿನ ಮತ್ತೋರ್ವ ಹೆಸರಾಂತರು ಆಗಮಿಸಿದ್ದರು. ಅವರ ನೀರಸ ಅಭಿನಂದನಾ ಭಾಷಣ ಬಹುಪಾಲು ವಿದ್ಯಾರ್ಥಿಗಳೇ ಇದ್ದ ಸಭೆಯಲ್ಲಿ ಬೇಸರ ತೂಕಡಿಕೆ ತರುವಂತಿತ್ತು. ಆಗ ಕಾರ್ಯಕ್ರಮ ನಿರೂಪಕನಾಗಿದ್ದ ನಾನು ಆ ಭಾಷಣಕಾರರಿಗೆ ಸಮಯದ ಕೊರತೆಯನ್ನು ತಿಳಿಸಿ, ಮುಂದಿನ ಭಾಷಣಕ್ಕೆ ಮುಖ್ಯ ಅತಿಥಿಗಳನ್ನು ಆಹ್ವಾನಿಸಿದೆ.

ಆಗ ಇಡೀ ಸಭೆ ಚಿತ್ತಾಕರ್ಷಕವಾಗಿ ಕುಳಿತು ಕೇಳುವಂತೆ, ಕವಿ ಕೆ ಎಸ್ ನ ಅವರ ಬದುಕು ಬರಹ ಕುರಿತ ಮನಮುಟ್ಟವಂತೆ ಮಾತನಾಡಿದವರು ಡಾ. ಎಂ ಜಿ ಈಶ್ವರಪ್ಪ. ಹೀಗೆ ಯಾವುದೇ ಸಭೆ, ಸಮಾರಂಭ, ಉಪನ್ಯಾಸವಿರಲಿ ಅಲ್ಲಿ ಸ್ಫುಟವಾದ, ಅಚ್ಚುಕಟ್ಟಾದ, ನಿರರ್ಗಳವಾದ ವಿಷಯ ಮಂಡನೆ; ಕೇಳುವವರ ಆಸಕ್ತಿ ಹೆಚ್ಚಿಸುವಂತಹ, ಕುತೂಹಲ ಮೂಡಿಸುವ ಮಾಹಿತಿಪೂರ್ಣ ಮಾತುಗಾರಿಕೆ. ಹೆಚ್ಚು ಲಂಬಿಸದ, ಸಂದರ್ಭೋಚಿತವೂ, ಗಂಭೀರವೂ ಆದ ಉದಾಹರಣೆಗಳೊಂದಿಗಿನ ವಿದ್ವತ್ಪೂರ್ಣ ಉಪನ್ಯಾಸ. ಎಲ್ಲಿಯೂ ಉದ್ವೇಗ, ಆವೇಶಗಳಿಗೆ ಅವಕಾಶವಿಲ್ಲದ ಹಿತಮಿತವಾದ ಮಾತು ಈಶ್ವರಪ್ಪನವರದು.
ವಿಜ್ಞಾನ ಪದವಿ ಕಾಲೇಜಿನಲ್ಲಿ ಭಾಷಾ ವಿಷಯ ತರಗತಿಗಳೆಂದರೆ ಅಷ್ಟಕಷ್ಟೆ. ವಿಜ್ಞಾನದ ವಿದ್ಯಾರ್ಥಿಗಳನ್ನು ಭಾಷೆ, ಸಾಹಿತ್ಯದ ಕಡೆಗೆ ಒಲವು ಮೂಡಿಸುವುದೆಂದರೆ ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗುವ ಪ್ರಯತ್ನ. ಆದರೆ ಈ ಮಾತಿಗೆ ಅಪವಾದದಂತಿರುವುದು ಈಶ್ವರಪ್ಪನವರ ಕನ್ನಡ ಭಾಷಾ ತರಗತಿಗಳು ಎಂದರೆ ಉತ್ಪ್ರೇಕ್ಷೆಯಾಗಲಾರದು.

ಸೂಜಿಗಲ್ಲಿನಂತೆ ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಿಸಿ, ಪಾಠ ಮಾಡುವ ಕಲೆಗಾರಿಕೆಯಿಂದ ಇವರು ಮನೆಮಾತಾಗಿರುವವರು.
ವಿದ್ವತ್ತಿನೊಂದಿಗೆ ವಿನಯ, ಅಧ್ಯಾಪನದೊಂದಿಗೆ ಅಧ್ಯಾಯನ, ಆಡಳಿತದೊಂದಿಗೆ ಸಾಂಸ್ಕೃತಿಕ ಚಿಂತನೆಗಳ ಮೊತ್ತದಂತಿರುವ ಈಶ್ವರಪ್ಪನವರು ದಾವಣಗೆರೆಯ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಪ್ರಧಾನ ಹೆಸರು. ಧ ರಾ ಮ ಕಾಲೆಜಿನ ಅಧ್ಯಾಪಕರಾಗಿ, ಮಾ ಸ ಬ ಕಾಲೇಜಿನ ಪ್ರಾಚಾರ್ಯರಾಗಿ, ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಬಾಪೂಜಿ ಬ್ಯಾಂಕ್ ನಿರ್ದೇಶಕರಾಗಿ, ವಿವಿಧ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಗುಣಮಟ್ಟದ ಕಾರ್ಯ ಯೋಜನೆಗಳನ್ನು ರೂಪಿಸುವಲ್ಲಿ ಸಿದ್ಧಹಸ್ತರು. ಹಾಗೆಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿಗಳಲ್ಲೊಬ್ಬರಾಗಿ, ಜಿಲ್ಲಾ ಕಸಾಪದ ಅಧ್ಯಕ್ಷರಾಗಿ, ಪ್ರತಿಮಾ ಸಭಾದಂತಹ ಪ್ರಾತಿನಿಧಿಕ ಸಂಸ್ಥೆಯ ಕ್ರಿಯಾಶೀಲ ಕಾರ್ಯಕರ್ತರಾಗಿ ಸರಿಸುಮಾರು ಅರ್ಧ ಶತಮಾನದಷ್ಟು ಕಾಲ ದಾವಣಗೆರೆ ನಗರದಲ್ಲಿ ಸಾಂಸ್ಕೃತಿಕ ಜೀವಂತಿಕೆಗೆ ಕಾರಣರಾದವರು.


ವಿದ್ಯಾರ್ಥಿ ದೆಸೆಯಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ ಈಶ್ವರಪ್ಪನವರು ನಟನೆ ಮತ್ತು ನಿರ್ದೆಶನದಲ್ಲೂ ಸೈ ಎನಿಸಿಕೊಂಡವರು. ಅದಕ್ಕೆ ಇಂಬು ಕೊಟ್ಟದ್ದು ಕೇರಳದ ತ್ರಿಚೂರಿನ ಸ್ಕೂಲ್ ಆಫ್ ಡ್ರಾಮ ಮತ್ತು ಬಿ ವಿ ಕಾರಂತರ ಮಾರ್ಗದರ್ಶನದಲ್ಲಿ ಭೂಪಾಲ್ ಮತ್ತು ದೆಹಲಿಯಲ್ಲಿ ರಂಗಭೂಮಿಯ ತಲಸ್ಪರ್ಶಿ ಅಧ್ಯಯನ. ಅದರ ಪ್ರತಿಫಲವಾಗಿ ಮೆರವಣಿಗೆ, ಸೆಜುವಾನಿನ ಸಾದ್ವಿ, ಕೊಡೆಗಳು, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತಾನ ಕಬೀರ ಮುಂತಾದ ನಾಟಕಗಳಲ್ಲಿ ಅಭಿನಯ. ಜಾತ್ರೆ, ಸಾಯೋ ಆಟ, ಅಪ್ಪ, ಕಡೇಮನೆ ಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳ ನಿರ್ದೆಶನ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಹೆಸರಾಂತ ರಂಗ ರಂಡ ‘ಪ್ರತಿಮಾ ಸಭಾ’ದ ಉಸ್ತುವಾರಿ. ಆ ಮೂಲಕ ದಾವಣಗೆರೆ ನಗರದಲ್ಲಿ ಹವ್ಯಾಸಿ ರಂಗಭೂಮಿಯ ಜೀವಂತಿಕೆ. ಜೊತೆಗೆ ಸಿದ್ಧಪ್ರಸಿದ್ಧರ ಸಂಗೀತ ಕಚೇರಿಗಳ ಆಯೋಜನೆ. ‌

ಒಕ್ಕಲುತನದ ಮನೆತನದಿಂದ ಬಂದ ಈಶ್ವರಪ್ಪನವರಿಗೆ ಕೃಷಿ ಮತ್ತು ಜಾನಪದದಲ್ಲಿ ವಿಶೇಷ ಆಸಕ್ತಿ. ಹೊಳೆ ದಂಡೆಯ, ಮಲೆನಾಡಿನ ಸೆರಗಿನ ಹಾಡೋನಹಳ್ಳಿ ಈಶ್ವರಪ್ಪನವರ ಜನ್ಮಸ್ಥಳ(ಜನನ ೩೧.೨.೫೧). ಅಲ್ಲಿ ಸಮೃದ್ಧ ಗ್ರಾಮಿಣ ಬದುಕಿನ ಸವಿಯನ್ನು ಸವಿದವರು. ಜನಪದ ಸಂಸ್ಕೃತಿ ಕೇವಲ ಓದಿನ ಕಾರಣಕ್ಕೆ ಮಾತ್ರವಲ್ಲ; ಅನುಭವದ ಮೂಸೆಯಿಂದ ಬಂದಂತಹದ್ದು. ಒಂದು ರೀತಿಯಲ್ಲಿ ಕೃಷಿಯ ಆಚರಣೆಗಳು ಮತ್ತು ಜನಪದರ ನಂಬಿಕೆಗಳು ಸಹ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ `ಜಾನಪದ ವ್ಯವಸಾಯ’ ಎಂಬ ಮಹಾಪ್ರಬಂಧ ಕೇವಲ ಪದವಿಗಾಗಿ ರಚಿಸಿದ್ದಾಗದೆ, ಒಂದು ಕಾಲಘಟ್ಟದ ಕೃಷಿಕರ ಜೀವನ ವಿಧಾನ, ಕೃಷಿಯಲ್ಲಿ ನಂಬಿಕೆಗಳು, ಆಚರಣೆಗಳನ್ನು ಕುರಿತು ವಿವರವಾಗಿ ತಿಳಿಯ ಹೇಳುವ ಸಂಕಥನ ಎಂದರೆ ತಪ್ಪಾಗಲಾರದು.

ಹೀಗೆ ಜಾನಪದ, ರಂಗಭೂಮಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಅನುಭವ, ಪಾಂಡಿತ್ಯದಿಂದಾಗಿ ಹತ್ತಾರು ಮಹತ್ವದ ಸಾಹಿತ್ಯ ಕೃತಿಗಳ ಪ್ರಕಟಣೆ. ಜೊತೆಗೆ ಸಂಪಾದಕರಾಗಿ ಹಲವು ಮಹತ್ವದ ಕೃತಿಗಳ ಬೆಳಕು ಕಂಡಿವೆ. ಇವರ ಪ್ರತಿಭಾ ಸಂಪನ್ನತೆಗೆ ಸಂದ ಪ್ರಶಸ್ತಿ – ಪುರಸ್ಕಾರಗಳು ಸಹ ಗಣನೀಯವಾಗಿವೆ, ಕರ್ನಾಟಕ ನಾಟಕ ಅಕಾಡಮಿಯ ಗೌರವ ಫೆಲೋಶಿಪ್, ಕರ್ನಾಟಕ ಜಾನಪದ ಅಕಾಡಮಿಯ `ತಜ್ಞ ಪ್ರಶಸ್ತಿ’, ಕು ಶಿ ಹರಿದಾಸ ಭಟ್ಟ ಜಾನಪದ ಪ್ರಶಸ್ತಿಗಳ ಜೊತೆಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (2020), ದಾವಣಗೆರೆ ಜಿಲ್ಲೆಯ `ಮಹಲಿಂಗರಂಗ’ ಮುಂತಾದ ಪ್ರಶಸ್ತಿಗಳು ಇವರ ಮಕುಟದ ಗರಿಗಳಾಗಿವೆ.
2022 ಈಶ್ವರಪ್ಪನವರ ಪಾಲಿಗೆ ತುಸು ಹೆಚ್ಚು ಹರ್ಷವನ್ನುಂಟು ಮಾಡಿದ ವರ್ಷ. ಮನೆಯಲ್ಲಿ ಮುದ್ದುಮೊಮ್ಮಗಳ ಕಲರವದೊಂದಿಗೆ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ `ಶಿವಕುಮಾರ ರಂಗ ಪ್ರಶಸ್ತಿ’ ಮತ್ತು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಮಟ್ಟದ ಐದನೆಯ ಭಕ್ತಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ.
ಶಿವಮೊಗ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನ ಮತ್ತು ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಪದವಿಯನ್ನು ಅಲಂಕರಿಸಿದ್ದರು.

ಇತ್ತೀಚೆಗೆ ದಾವಣಗೆರೆ ನಗರದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ- ವೀರಶೈವ ಮಹಾಧಿವೇಷನದ ಸ್ಮರಣ ಸಂಚಿಕೆ ಸಂಪಾದಕರಾಗಿ ಸಂಗ್ರಹಯೋಗ್ಯ ಸಂಚಿಕೆಯನ್ನು ಹೊರತಂದಿದ್ದರು. ೧೯೯೧ರಲ್ಲಿ ದಾವಣಗೆರೆ ನಗರದಲ್ಲಿ ‘ನಭೋತ…’ ಎಂಬಂತೆ ಜರುಗಿದ ಅಖಿಲ ಭಾರತ ೬೧ನೆಯ ಸಾಹಿತ್ಯ ಸಮ್ಮೇಳನದ ‘ದವನ ಸಿರಿ’ ಸ್ಮರಣ ಸಂಚಿಕೆ, ಶಾಮನೂರು ಶಿವಶಂಕರಪ್ಪನವರ ‘ಅಮೃತ ಪುರುಷ’ ಅಭಿನಂದನಾ ಗ್ರಂಥ, ಬಾಪೂಜಿ ವಿದ್ಯಾಸಂಸ್ಥೆ ಮತ್ತು ಡಿ ಆರ್ ಎಂ ಕಾಲೇಜಿನ ಸುವರ್ಣ ಮಹೋತ್ಸವಗಳ ಸ್ಮರಣ ಸಂಚಿಕೆ ಮುಂತಾದ ಹತ್ತಾರು ಮಹತ್ವದ ಸಂಚಿಕೆಗಳನ್ನು ಪ್ರಕಟಿಸಿದ್ದರು. ಜಾನಪದ ವ್ಯವಸಾಯ, ಮ್ಯಾಸಬೇಡರ ಸಂಸ್ಕೃತಿ, ಜನಪದ ಇಬ್ಬನಿ, ಸಾಹಿತ್ಯ ಸಂಚಯ, ನಟ ಬಾಬಣ್ಣ ಮುಂತಾದ ಕೃತಿಗಳು ಇವರ ಲೇಖನಿಯಿಂದ ಮೂಡಿದ್ದವು.
ಇತ್ತೀಚಿನ ಐದಾರು ತಿಂಗಳುಗಳಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿ, ಇಂದು ಸಂಜೆ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ , ಕನ್ನಡ ಅಧ್ಯಾಪಕಿ ಬಸಮ್ಮ ಮೇಡಂ, ಪುತ್ರಿ ಪತ್ರಲೇಖ , ಪುತ್ರ ಪೃಥುವೈನ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

-ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕ, ದಾವಣಗೆರೆ

Leave a Reply

Your email address will not be published. Required fields are marked *

error: Content is protected !!