ದಾವಣಗೆರೆ ಜಿಲ್ಲೆಯ ಶಾಸಕರಲ್ಲಿ ಒಗ್ಗಟ್ಟಿಲ್ವಾ.? ಜಿಲ್ಲೆಗೆ ಸಚಿವ ಸ್ಥಾನ ಯಾಕಿಲ್ಲ.?

ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ
ಯಾವ ಕಾರಣಕ್ಕೆ ಕೊಡಲು ಆಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳುವ ಮೂಲಕ ಸಂಸದ ಸಿದ್ದೇಶ್ವರ್ ಪರೋಕ್ಷವಾಗಿ ಜಿಲ್ಲೆಯ ಶಾಸಕರಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನರ್ರಚನೆ ಸಿಎಂ ಪರಮಾಧಿಕಾರ. ದಾವಣಗೆರೆ ಜಿಲ್ಲೆಗೊಂದು ಸಚಿವ ಸ್ಥಾನ ಕೊಡಿ ಎಂದು ನಾವು ಬೇಡಿಕೆ ಇಟ್ಟಿದ್ದೇವೆ. ಕಳೆದ ಬಾರಿ ಜಿಲ್ಲೆಗೆ ಸಚಿವ ಸ್ಥಾನ ಯಾಕೆ ಸಿಗಲಿಲ್ಲ ಎಂಬುದು ತಿಳಿದ ವಿಚಾರ ಎಂದರು.
ಇದೇ ತಿಂಗಳ 26 ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತದೆ. ಬಿಎಸ್ ವೈ ಅವರ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಆ ಬಗ್ಗೆ ಜನರಿಗೆ ತೃಪ್ತಿ ಇದೆ, ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ. ಅದೇನಿದ್ದರೂ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ತೀರ್ಮಾನವಾಗುತ್ತದೆ. ಈಗ ಸಿಎಂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ನಂತರ ನೋಡೋಣ ಎಂದರು.
ಬಿಜೆಪಿಯಲ್ಲಿನ ಲಿಂಗಾಯತರು ಕಾಂಗ್ರೆಸ್ಗೆ ಬರುತ್ತಾರೆ ಎಂಬ ಎಂ.ಬಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದೇಶ್ವರ್, ವೀರಶೈವರು ಬಿಜೆಪಿ ಪಕ್ಷದ ಜತೆಗೆ ಇದ್ದಾರೆ. ಹಾಗಾಗಿ, ಅವರು ಬಿಜೆಪಿಯಲ್ಲೆ ಇರುತ್ತಾರೆ.ಇದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ನಲ್ಲಿ ವೀರಶೈವರು ವಿರಳವಾಗಿದ್ದಾರೆ. ಯಾವುದೇ ಪಕ್ಷದಿಂದ ಬಿಜೆಪಿಗೆ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಕುಡಿವ ನೀರಿಗಾಗಿ ನಿರ್ಮಾಣವಾಗುತ್ತಿರುವ ಯೋಜನೆ ಮೇಕೆ ದಾಟು ಯೋಜನೆ ಸರಿಯಾಗಿದ್ದು, ತಮಿಳುನಾಡಿನವರು ಈಗಲೂ ಮೇಕೆದಾಡು ಯೋಜನೆಗೆ ತರಲೆ ಮಾಡುತ್ತಾರೆ.
ಸುಮಾರು ವರ್ಷಗಳಿಂದ ಅವರು ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು.
ಸಿಎಂ ಯಡಿಯೂರಪ್ಪ ಅವರು ಪ್ರಧಾನಿ, ಗೃಹ ಸಚಿವರು ಹಾಗೂ ರಾಷ್ಟ್ರಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಧಿವೇಶನಲ್ಲಿ ನಾವೂ ಸಹಾ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಕೋರ್ಟ್ ಸಹಾ ತೀರ್ಪುಕೊಟ್ಟಿದೆ. ಮೇಕೆದಾಡು ಯೋಜನೆ ಮಾಡೇ ಮಾಡುತ್ತೇವೆ ಎಂದು ಹೇಳಿದರು.